ಹರಿಹರ
ಶಬರಿಮಲೆಯ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗುವ ರೀತಿ ನೀಡಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜದಿಂದ ಗುರುವಾರ ಶರಣು ಘೋಷದ ರ್ಯಾಲಿ ನಡೆಸಲಾಯಿತು.
ನಗರದ ಸಮೀಪದ ಕುಮಾರಪಟ್ಟಣಂನ ತುಂಗಭದ್ರಾ ನದಿ ತೀರದ ಬಳಿ ಇರುವ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಬೈಕ್ ರ್ಯಾಲಿಯು ತುಂಗಭದ್ರಾ ಸೇತುವೆ, ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ, ಸೇರಿದಂತೆ ನಗರದ ಪ್ರಮುಖ ರಸ್ತೆಗಳಾದ ದೊಡ್ಡಿಬೀದಿ, ಮುರುಘರಾಜೇಂದ್ರ ಕಲ್ಯಾಣ ಮಂಟಪ, ಶಿಬಾರ ವೃತ್ತ, ಹರಿಹರೇಶ್ವರ ದೇವಸ್ಥಾನ, ಟೆಂಪಲ್ ರೋಡ್, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ, ಮಹತ್ಮಾಗಾಂಧಿ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ನಂತರ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಗೋಬೋರ್ ಮಾತನಾಡಿ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪದ್ದತಿಗೆ, ಯಾವುದೊ ಒಂದು ಎನ್ಜಿಒ ಸಂಸ್ಥೆಯ ಸದಸ್ಯರ ಒಬ್ಬರು ಹಾಕಿರುವ ದೂರನ್ನು ಪರಿಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ ದೇವಸ್ಥಾನದ ಪರಂಪರೆಗೆ ವಿರುದ್ದವಾಗಿ ತೀರ್ಪು ನೀಡಿದ್ದು, ಕೊಟ್ಯಾಂತರ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ರ್ಯಾಲಿಯಲ್ಲಿ ಸ್ವಾಮೀಯೇ ಶರಣಂ ಅಯ್ಯಪ್ಪ, ಶರಣಂ ಶರಣಂ ಅಯ್ಯಪ್ಪ, ಪಂದಳ ಕುವರನಿಗೆ ಜೈ, ಇರುಮುಡಿ ಸ್ವಾಮೀಯೇ ಜೈ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಶರಣು ಘೋಷದ ರ್ಯಾಲಿಯ ನೇತೃತ್ವವನ್ನು ಜಿಲ್ಲಾ ಹಿರಿಯ ಗುರು ರುದ್ರಮುನಿ ಸ್ವಾಮೀಜಿ, ದುರುಗೋಜಿ ಮೋಹನ್, ಚಂದ್ರಕಾಂತ್ ಹೋವಳೆ, ಶಿವು ಪ್ರಸಾದ ಮೂರ್ಕಲ್ ಚಂದನ್ವಹಿಸಿದ್ದರು. ರ್ಯಾಲಿಯಲ್ಲಿ ಕುಮಾರಸ್ವಾಮಿ, ವಾಸು, ರಾಘವೇಂದ್ರ, ಎ.ಸಿ. ರುದ್ರೇಶ್, ಕೆ.ಬಿ. ತಿಪ್ಪೇಶ, ಸಿ. ಬಸವರಾಜ್, ಎನ್.ಕೆ. ಷಣ್ಮುಖ, ಮಂಜುನಾಥ ಬಂಕಾಪೂರ್, ಮಾರುತಿ, ಕೊಟ್ರೇಶ್, ಪಿ. ಹನುಮಂತಪ್ಪ, ಅಂಬಾಸಾ ಮೆಹರವಾಡೆ, ಎನ್. ಕರ್ಣಸಿಂಗ್, ಎ. ಪದ್ಮಕುಮಾರ್, ಗೋಪಿನಾಥ, ಸಂತೋಷ್ಕುಮಾರ್, ವೈ.ಬಿ. ಕರಿಬಸಪ್ಪ, ಎಸ್.ಬಿ. ಬಂಕಾಪೂರ್, ಎಸ್.ಎಚ್. ಶಾಮಣ್ಣ, ಕೃಷ್ಣಪ್ಪ, ನಾಗರಾಜ್, ಕೆಜಿಎನ್ ಪಾಟೀಲ್, ಕೆ. ವೀರಪ್ಪ, ಕೆ. ಲಿಂಗಣ್ಣ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
