ದಾವಣಗೆರೆ
ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು 2019ರ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಮನವಿ ಮಾಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ದೇಶದ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದು, ಸಂಸದೀಯ ವ್ಯವಸ್ಥೆಯ ಪ್ರಜಾಪ್ರಭುತ್ವದ ಬುನಾದಿಯೇ ನಡುಗುತ್ತಿದೆ. ಮೋದಿ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಗೇಲಿಯ ವಸ್ತುವಾಗಿದೆ. ಇವರ ಆಡಳಿತವನ್ನು ಪ್ರಶ್ನಿಸುವವರಿಗೆಲ್ಲಾ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಅಲ್ಲದೆ, ಸಂವಿಧಾನಿಕ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಹವಣಿಸುತ್ತಿದ್ದಾರೆ.
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ಮೂಲಕ ತನ್ನೆಲ್ಲಾ ಸ್ವಯಂಕೃತ ವೈಫಲ್ಯಗಳನ್ನು ಮುಚ್ಚಿ ಹಾಕುವ ಜೊತೆಯಲ್ಲಿ ಸಂಘ ಪರಿವಾರದ ಅಜೆಂಡವನ್ನು ಕಾರ್ಯರೂಪಕ್ಕೆ ತರುವ ಪಿತೂರಿಯನ್ನು ಮೋದಿ ನಡೆಸಿದ್ದು, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನರೇಂದ್ರಮೋದಿಯವರನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕೆಂದು ಕರೆ ನೀಡಿದರು.
ನೋಟು ಅಮಾನ್ಯ, ಹೊಸ ತೆರಿಗೆ ನೀತಿ, ರಫೇಲ್ ಯುದ್ಧ ವಿಮಾನ ಖರೀದಿ ಹಗರಣ, ಎಚ್ಎಎಲ್ ಕಡೆಗಣನೆ, ಗಂಗಾ ನದಿ ಸ್ವಚ್ಛತೆ ಹಗರಣ ಹೀಗೆ ಹತ್ತಾರು ಭ್ರಷ್ಟಾಚಾರ, ಹಗರಣಗಳ ಮೂಲಕ ನರೇಂದ್ರ ಮೋದಿ, ತನ್ನ ಆಪ್ತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆಂದು ಆರೋಪಿಸಿದರು.
ಪುಲ್ವಾಮಾ ಉಗ್ರರ ದಾಳಿಯು ಮೋದಿ ಆಡಳಿತ ಹಾಗೂ ಗುಪ್ತಚರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಇದೀಗ ಸರ್ಜಿಕಲ್ ಸ್ಟ್ರೈಕ್ನ ಚಿತ್ರ, ಸೇನೆ, ಯೋಧರ ಚಿತ್ರಗಳನ್ನು ಚುನಾವಣಾ ಆಯೋಗದ ಆದೇಶವನ್ನೇ ಧಿಕ್ಕರಿಸಿ, ಬಿಜೆಪಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೈಲ ತೆರಿಗೆಯ 11 ಲಕ್ಷ ಕೋಟಿ ರೂ. ಏನಾಯಿತೆಂಬುದರ ಬಗ್ಗೆ ನರೇಂದ್ರ ಮೋದಿ ಉತ್ತರಿಸಬೇಕು. ಉದ್ಯೋಗ ಕೇಳಿದ ಯುವ ಜನರಿಗೆ ಪಕೋಡ ಮಾರುವಂತೆ ಪುಕ್ಕಟೆ ಸಲಹೆ ನೀಡಿದ್ದ ಮೋದಿಗೆ ಈಗ ಯುವಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದರು.
ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂಬುದಾಗಿ ಭರವಸೆ ನೀಡಿದ್ದ ಮೋದಿ 15 ಪೈಸೆ ಸಹ ತರಲಿಲ್ಲ. ಲೋಕಪಾಲರ ನೇಮಕ ಮಾಡಲಿಲ್ಲ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧೆಡೆ 157 ಕಾಮಗಾರಿ ಶಂಕು ಸ್ಥಾಪನೆ, ಉದ್ಘಾಟನೆ ನೆರವೇರಿಸಲು, ರ್ಯಾಲಿಗಳನ್ನು ನಡೆಸಲು ಅವಕಾಶ ನೀಡಿ ನಂತರವಷ್ಟೇ ಚುನಾವಣೆ ಘೋಷಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗವು ಮೋದಿ ಮೂಗಿನ ನೇರಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿದರು.
ಕೇಂದ್ರ ಚುನಾವಣಾ ಆಯೋಗವು ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಅನುಕೂಲವಾಗುವಂತೆ ಅವಕಾಶ ಮಾಡಿಕೊಟ್ಟಿದೆ. 39 ಲೋಕಸಭಾ ಕ್ಷೇತ್ರ ಹೊಂದಿರುವ ತಮಿಳುನಾಡಿಗೆ ಒಂದೇ ಹಂತದಲ್ಲಿ ಚುನಾವಣೆ ಘೋಷಿಸಿದರೆ, 28 ಕ್ಷೇತ್ರಗಳ ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಸುವ ಮೂಲಕ ಸಂಘ ಪರಿವಾರದವರು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಿ ಕುತಂತ್ರ ಮಾಡಲು ಆಯೋಗ ಅನುವು ಮಾಡಿಕೊಟ್ಟಿದೆ ಎಂದು ಆಪಾದಿಸಿದರು.
ತಮಿಳುನಾಡು-ಕರ್ನಾಟಕ ಚುನಾವಣೆ ವಿಚಾರದಲ್ಲಿ ಆಯೋಗ ತಾರತಮ್ಯ ಮಾಡಿದ್ದು ಏಕೆ? ಆಯೋಗದ ಇಂತಹ ನಡೆ ಸಾಕಷ್ಟು ಗೊಂದಲಕ್ಕೂ ಕಾರಣವಾಗಿದ್ದು, ವಿಶ್ವ ಹಿಂದು ಪರಿಷತ್, ಹಿಂದು ಜಾಗರಣ ವೇದಿಕೆ, ಬಜರಂಗ ದಳ ಸೇರಿದಂತೆ ಸಂಘ ಪರಿವಾರದವರು ಬಿಜೆಪಿ, ಮೋದಿ ಪರ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿರುವ ಆಯೋಗದ ಕ್ರಮವು ಅತ್ಯಂತ ಖಂಡನೀಯವಾಗಿದೆ ಎಂದು ಕಿಡಿಕಾರಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಸತತ ಮೂರು ಬಾರಿ ಹಾಗೂ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪನವರು 2 ಸಲ ಸಂಸದರಾಗಿ ಒಟ್ಟು 25 ವರ್ಷ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಆದರೆ, ಈ ಅವಧಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆ ತರಲಿಲ್ಲ. 3 ಸಲ ಗೆದ್ದ ಸಿದ್ದೇಶ್ವರ ಜವಳಿ ಪಾರ್ಕ್ ಜಾಗದಲ್ಲಿ ಶ್ರೀಶೈಲ ಎಜುಕೇಷನ್ ಟ್ರಸ್ಟ್ಗೆ ಜಾಗ ಮಂಜೂರು ಮಾಡಿಸಿಕೊಳ್ಳಲು ಟೇಬಲ್ನಿಂದ ಟೇಬಲ್ಗೆ, ಸಚಿವರಿಂದ ಮುಖ್ಯಮಂತ್ರಿಗಳ ವರೆಗೆ ಅಲೆದಷ್ಟು ಕ್ಷೇತ್ರದ ಬಗ್ಗೆ ಕಡತ ಹಿಡಿದು ಅಲೆದಿದ್ದರೆ, ದಾವಣಗೆರೆ ಚಿತ್ರಣವೇ ಬದಲಾಗಿರುತ್ತಿತ್ತು ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವರಿದ್ದಾಗ ದಾವಣಗೆರೆಗೆ ವಿಮಾನ ನಿಲ್ದಾಣ ತರಲಿಲ್ಲ. ಆದರೆ, ರಾಜ್ಯ ಸರ್ಕಾರ ಭೂಮಿ ನೀಡಲಿಲ್ಲವೆಂಬ ನೆಪ ಹೇಳುವ ಸಿದ್ದೇಶ್ವರ ಹಿಂದಿನ ಸಿಎಂ ಸಿದ್ದರಾಮಯ್ಯ ಬಳಿ ಈ ವಿಚಾರಕ್ಕೆ ಹೋಗಿದ್ದರ ಎಂಬುದಕ್ಕೆ ಸ್ಪಷ್ಟನೆ ನೀಡಬೇಕೆಂದ ಅವರು, ಅಷ್ಟೂ ದಿನಗಳ ಕಾಲ ಏನೂ ಮಾಡದ ಸಿದ್ದೇಶ್ ಈಗ ಹುಚ್ಚರ ಆಸ್ಪತ್ರೆ ಕಟ್ಟಿಸುವುದಾಗಿ ಹೇಳುತ್ತಿದ್ದು, ಅವರಿಗೆ ಈಗ ಜ್ಞಾನೋದಯವಾದಂತಿದೆ ಎಂದು ಟೀಕಿಸಿದರು.
ಕೊಟ್ಟ ಕುದುರೆ ಏರದವನೂ ವೀರನೂ ಅಲ್ಲ, ಧೀರನೂ ಅಲ್ಲ ಎಂಬಂತೆ ಸಿದ್ದೇಶ್ವರ 15 ವರ್ಷದಲ್ಲಿ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ. ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ವಿಮಾನಗಳೂ ಬರುವಂತಾಗಿದೆ. ದಾವಣಗೆರೆ ಆ ಎರಡೂ ಊರುಗಳಿಗಿಂತಲೂ ಕಡೆನಾ? ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ಎಚ್.ಚಂದ್ರಪ್ಪ, ಲಿಯಾಖತ್ ಅಲಿ, ಬಿ.ಎಚ್.ಉದಯಕುಮಾರ, ಎ.ಅಬ್ದುಲ್ ಜಬ್ಬಾರ್, ಹರೀಶ, ಜಿ.ಎಲ್.ಶಿವಪ್ರಕಾಶ, ಎಸ್.ಎನ್.ಬಸವರಾಜ, ಡಿ.ಶಿವಕುಮಾರ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
