ಬಳ್ಳಾರಿ
ನೆರೆ ನಿರಾಶ್ರೀತರಿಗೆ ತಕ್ಷಣ ಅಗತ್ಯ ಪರಿಹಾರ ನೀಡಲಾಗುವುದು. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗಾಗಿ ವಿಮಾನದ ಮೂಲಕ ತೋರಣಗಲ್ಲುವಿನ ಜಿಂದಾಲ್ ಏರ್ ಸ್ಟ್ರೀಪ್ ಗೆ ಆಗಮಿಸಿ ಗೌರವ ವಂದನೆ ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇದುವರೆಗೆ ನೆರೆಯಿಂದ ಯಾವುದೇ ರೀತಿಯ ಅನಾಹುತಗಳಾಗಿಲ್ಲ. ಅನಾಹುತಗಳನ್ನು ತಡೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮತ್ತು ಪರಿಹಾರ ತಂಡಗಳು ಮತ್ತು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ನಾನು ಕೂಡ ಭಾನುವಾರ ವಿಡಿಯೋ ಕಾನ್ಪರೆನ್ಸ್ ನಡೆಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಯಾವುದಾದರೂ ಕಾರಣಕ್ಕೆ ಗ್ರಾಮಗಳು ಸ್ಥಳಾಂತರಿಸಬೇಕೆಂದಿದ್ದರೇ ಅದನ್ನು ಕೂಡ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಅವರು ರಾಜ್ಯದಲ್ಲಿ ಒಂದೇಡೆ ನೆರೆ ಮತ್ತೊಂದೆಡೆ ಬರಗಾಲ ಆವರಿಸಿ ವಿಪರ್ಯಾಸದ ಸನ್ನಿವೇಶ ಏರ್ಪಟ್ಟಿದೆ. ಬಳ್ಳಾರಿ ಭಾಗದಲ್ಲಿ ಮತ್ತು ಮಲೆನಾಡಿನ ಶಿವಮೊಗ್ಗದ ಭಾಗದಲ್ಲಿ ಮಳೆ ಇಲ್ಲವಾಗಿದೆ. ಮತ್ತೊಂದೆಡೆ ನೆರೆಹಾವಳಿ ಉಂಟಾಗಿದೆ. ಈ ಎರಡು ಸನ್ನಿವೇಶಗಳನ್ನು ನಿರ್ವಹಿಸಲು ಸರಕಾರ ಬದ್ದವಾಗಿದೆ ಎಂದರು.
ಕೃಷ್ಣಾ ನದಿಗೆ ಅತ್ಯಧಿಕವಾಗಿ ನೀರು ಹರಿದು ಬಂದ ಕಾರಣ ಆಲಮಟ್ಟಿ ಜಲಾಶಯದಿಂದ 2.11ಲಕ್ಷ ಕ್ಯೂಸೆಕ್ ಮತ್ತು ನಾರಾಯಣಪುರ ಜಲಾಶಯದಿಂದ 2ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ ಎಂದು ಮಾಹಿತಿ ನೀಡಿದರು.ಇದಕ್ಕೂ ಮುಂಚೆ ಅವರು ಬಳ್ಳಾರಿ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲೆಯ ಬರ ಹಾಗೂ ಇನ್ನೀತರ ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿ ಮತ್ತು ಮಾಹಿತಿಯನ್ನು ಪಡೆದುಕೊಂಡರು.
ನಂತರ ಅವರು ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ತೆರಳಿದರು.ಶಾಸಕ ಸೋಮಶೇಖರ್ ರೆಡ್ಡಿ , ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/08/CM-BYS-1.gif)