ಮಧುಗಿರಿ
ರಾಜಕೀಯ ವೈಮನಸ್ಯದಿಂದಾಗಿ ಒಂದು ಕಡೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿದ್ದರೆ ಇತ್ತಾ ಊರಿನ ಗ್ರಾಮಸ್ಥರೆ ಶಾಲೆಯ ಆವರಣವನ್ನೆಲ್ಲಾ ದನಗಳ ಕೊಟ್ಟಿಯಾಗಿ ಮಾರ್ಪಡಿಸಿ ಶುದ್ಧ ನೀರಿನ ಘಟಕವನ್ನು ಉಪಯೋಗಕ್ಕೆ ಬಾರದಂತಾಗಿ ಮಾಡಿದ್ದು ಈಗ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸುವಂತೆ ಮರಿತಿಮ್ಮನಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ತಾಲ್ಲೂಕಿನ ಕಸಬ ಹೋಬಳಿಯ ಮರಿತಿಮ್ಮನಹಳ್ಳಿಯ ಶಾಲೆಯೊಂದರಲ್ಲಿ ತಾತ್ಕಾಲಿಕವಾಗಿ ಸುಮಾರು ಎರಡೂವರೆ ವರ್ಷಗಳ ಹಿಂದೆ ಅನುಷ್ಟಾನಗೊಳಿಸಿರುವ ಶುದ್ಧ ನೀರಿನ ಘಟಕವು ನಿರ್ವಹಣೆ ಇಲ್ಲದಂತಾಗಿ ಗ್ರಾಮಸ್ಥರಿಗೆ ಶುದ್ಧ ನೀರಿನ ಲಭ್ಯತೆ ಮರೀಚಿಕೆಯಾಗಿದೆ.
ಈ ಹಿಂದಿನ ಶಾಸಕ ಕೆ.ಎನ್.ರಾಜಣ್ಣನವರು ಗ್ರಾಮಸ್ಥರ ಮನವಿ ಮೇರೆಗೆ ಕಾಳಜಿ ವಹಿಸಿ ಶುದ್ಧ ನೀರಿನ ಘಟಕವನ್ನು ಸಿದ್ದಾಪುರ ಗ್ರಾಮ ಪಂಚಾಯತಿಯಿಂದ ಸ್ಥಳ ನೀಡುವರೆವಿಗೂ ಘಟಕವನ್ನು ಗ್ರಾಮದ ಸರಕಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಆರಂಭಿಸುವಂತೆ ಸೂಚಿಸಿದ್ದರು, ನಂತರ ಕಾರ್ಯಾರಂಭವಾಗಿತ್ತು.ಆದರೆ ಈ ಶುದ್ಧ ನೀರಿನ ಘಟಕವು ಕೆಟ್ಟು ನಿಂತು ಎರಡೂವರೆ ವರ್ಷ ಕಳೆದಿದೆ. ಜೊತೆಯಲ್ಲಿ ಘಟಕವಿರುವ ಶಾಲೆಯು ಶಿಥಿಲಾವಸ್ಥೆ ತಲುಪಿದ್ದು ಶಾಲೆಯ ಮೇಲ್ಛಾವಣಿ ಕುಸಿಯ ತೊಡಗಿದ್ದರೂ ಇದೂವರೆವಿಗೂ ಯಾವೊಬ್ಬ ಅಧಿಕಾರಿಯಾಗಲಿ ಉಸ್ತುವಾರಿ ವಹಿಸಿರುವ ಘಟಕಾಧಿಕಾರಿಯಾಗಲಿ ಇತ್ತ ಸುಳಿದಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಹಲವಾರು ಬಾರಿ ಕ್ಷೇತ್ರದ ಶಾಸಕರಿಗೆ ಮತ್ತು ಗ್ರಾಪಂ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಮಾಡಿದ್ದರೂ ಇದೂವರೆವಿಗೂ ಶುದ್ಧ ನೀರಿನ ಘಟಕಕ್ಕೆ ಜಮೀನು ಮತ್ತು ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ. ವಾಹನ ಸೌಕರ್ಯವಿರುವವರು ಮಾತ್ರ ಶುದ್ಧ ನೀರಿಗಾಗಿ ಅಕ್ಕಾಪಕ್ಕದ ಗ್ರಾಮಗಳ ಬಳಿ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ. ಅಲ್ಲೂ ನೀರು ಇಲ್ಲವಾದರೆ ಗ್ರಾಮದ ಬೋರ್ವೆಲ್ ನೀರನ್ನೆ ಕುಡಿಯಬೇಕಾಗುತ್ತಿದ್ದು ಗ್ರಾಮಸ್ಥರು ರೋಗ ರುಜಿನುಗಳಿಂದ ಬಳಲಬೇಕಾದ ಸ್ಥಿತಿ ಕಾಡುತ್ತಿದೆ.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ ಮಾತನಾಡಿ, ಕುಡಿಯುವ ನೀರಿಲ್ಲದೆ ಗ್ರಾಮದ ಶಾಲೆಯ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಹೆಚ್ಚು ಫ್ಲೋರೈಡ್ ಅಂಶವಿರುವ ನೀರನ್ನು ಸೇವಿಸುತ್ತಿರುವುದರಿಂದ ರೋಗರುಜಿನುಗಳು ಕಾಡುತ್ತಿವೆ. ಜೊತೆಯಲ್ಲಿ ಸುಖ ಸುಮ್ಮನೆ ಎಸ್ಡಿಎಂಸಿ ಅಧ್ಯಕ್ಷರು ಶುದ್ಧ ನೀರನ್ನು ಕೊಡಲು ಮುಂದಾಗಿಲ್ಲ ಎಂದು ನನ್ನ ಮೇಲೆ ಗ್ರಾಮಸ್ಥರು ಆರೋಪಿಸುತ್ತಾರೆ. ಆದಷ್ಟು ಬೇಗಾ ಶುದ್ಧ ನೀರಿನ ಘಟಕವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮಸ್ಥ ಕೃಷ್ಣಯ್ಯ ಮಾತನಾಡಿ ಶುದ್ಧ ನೀರಿನ ಘಟಕಕ್ಕೆ ನೀರನ್ನು ಹರಿಸಲು ಯಾರೂ ಮುಂದಾಗುತ್ತಿಲ್ಲ. ಘಟಕವಿರುವ ಶಾಲೆಯ ಮೇಲ್ಛಾವಣಿ ಕುಸಿಯತೊಡಗಿದೆ. ಹಾವು ಚೇಳುಗಳ ಆವಾಸ್ಥಾನವಾಗಿದ್ದು ಕಟ್ಟಡ ಬೀಳುವ ಹಂತ ತಲುಪಿದೆ. ಜನರು ಇಲ್ಲಿಗೆ ಬರಲು ಹೆದುರುತ್ತಿದ್ದಾರೆ. ಸುಮಾರು ಒಂದೂವರೆ ವರ್ಷದಿಂದ ಶುದ್ಧ ನೀರು ನಮಗೆ ಲಭ್ಯವಿಲ್ಲ ಎಂದರು.
ಗ್ರಾಪಂ ಅಧ್ಯಕ್ಷೆ ಮಂಜುಳ ಅಶ್ವತ್ಥಪ್ಪ ಮಾತನಾಡಿ, ನಾವು ಗ್ರಾಮಸ್ಥರ ಮನವಿ ಮೇರೆಗೆ ಬೆಂಗಳೂರಿನಿಂದ ತಂಡವನ್ನು ಕರೆಸಿ ಸ್ಥಳೀಯ ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಘಟಕವನ್ನು ಈ ಹಿಂದೆಯೇ ಸರಿಪಡಿಸಿದ್ದೆವು. ಆದರೆ ಗ್ರಾಮಸ್ಥರ ರಾಜಕೀಯ ಜಗಳದಿಂದಾಗಿ ಶುದ್ಧ ನೀರಿನ ಘಟಕ ಬಳಕೆಯಾಗುತ್ತಿಲ್ಲ. ನೀರು ಎಲ್ಲರಿಗೂ ಅಗತ್ಯವಾಗಿಬೇಕು, ಪಂಚಾಯತಿಯ ವತಿಯಿಂದ ಸಂಪೂರ್ಣ ಸಹಕಾರ ನೀಡಲು ಈಗಲೂ ನಾನು ಬದ್ಧ.
ಮಾಜಿ ಗ್ರಾಪಂ ಸದಸ್ಯ ವೀರಕ್ಯಾತಪ್ಪ, ರಾಜಣ್ಣ, ಎಂ.ಜಿ.ಕೃಷ್ಣಯ್ಯ, ಕುಮಾರ್, ನಾಗರಾಜು ಮತ್ತಿತರರು ಶುದ್ಧ ನೀರಿನ ಘಟಕವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
