ತುಮಕೂರು
ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸರ್ಕಾರದ ಗೌರವಧನ ಪಡೆದು ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತುಮಕೂರಿನ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಅತಿಥಿ ಉಪನ್ಯಾಸಕರ ಬದುಕಿನ ಅಸ್ತಿತ್ವದ ಹೋರಾಟಕ್ಕಾಗಿ ಹಲವು ಜನರು ಹಗಲಿರುಳು ಶ್ರಮಿಸಿದ್ದಾರೆ. ಕೆಲವರು ವೈಯಕ್ತಿಕವಾಗಿ ಹಾಗೂ ಕೆಲವರು ಸಂಘಟನಾತ್ಮಕವಾಗಿ ಹೋರಾಟ ಮಾಡಿದರೂ ಅವರೆಲ್ಲರ ಉದ್ದೇಶ ಕೂಡ ಒಂದೇ ಆಗಿದ್ದು, ಇಲ್ಲಿ ಯಾವುದೇ ವ್ಯಕ್ತಿ ಭೇದ, ಪಕ್ಷಭೇದ ಮತ್ತು ಸೈದ್ದಾಂತಿಕ ಭೇದವಿಲ್ಲದೆ ಎಲ್ಲಾ ಅತಿಥಿ ಉಪನ್ಯಾಸಕರ ಬದುಕಿನ ಬವಣೆ ಒಂದೇ ಆಗಿದೆ.
ಆದ್ದರಿಂದ ನಮ್ಮ ಅತಿಥಿ ಉಪನ್ಯಾಸಕರ ಸಂಘಟನೆಗಳ ಬಿಡಿ ಬಿಡಿಯಾದ ಹೋರಾಟಗಳೂ ವ್ಯರ್ಥವಲ್ಲ. ಆದರೆ ಸರ್ಕಾರ ನಮ್ಮ ಪ್ರತ್ಯೇಕತೆಯನ್ನು ಬಂಡವಾಳ ಮಾಡಿಕೊಂಡು ನಮ್ಮನ್ನು ವಿಭಜಿಸಿ ಜೀತದಾಳುಗಳನ್ನಾಗಿ ಮಾಡಿಕೊಂಡು ದುಡಿಸಿಕೊಳ್ಳುತ್ತಿದೆ. ಮತ್ತು ಇದೇ ವ್ಯವಸ್ಥೆಯನ್ನು ಶಾಶ್ವತವಾಗಿಡಲು ಪ್ರಯತ್ನಿಸುತ್ತಿದೆ ಎಂದು ಅತಿಥಿ ಉಪನ್ಯಾಸಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಪದವಿಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಕರಡು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಅತಿಥಿ ಉಪನ್ಯಾಸಕರಿಗೆ ಯಾವುದೇ ಆದ್ಯತೆ ನೀಡದೆ ಮರಣಶಾಸನ ಬರೆದಿದೆ. ಇದನ್ನು ವಿರೋಧಿಸಿ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುತ್ತಿದೆ. ಇದಕ್ಕೆ ತುಮಕೂರಿನ ಅತಿಥಿ ಉಪನ್ಯಾಸಕರು ಬೆಂಬಲ ಸೂಚಿಸಿದ್ದು, ಈ ಸಂಬಂಧ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿ ತರಗತಿಗಳನ್ನು ಬಹಿಷ್ಕರಿಸಲಾಗಿದೆ ಎಂದು ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.
ತಾವು ನೀಡಿದ ಮನವಿ ಪತ್ರದಲ್ಲಿ ಪೂಜಾ.ಆರ್., ಅಣ್ಣಪ್ಪ, ಶೋಭಾ ಎಚ್.ಎನ್., ವಿನೋದ್, ಎನ್.ಶ್ರೀದೇವಿ, ಚೈತ್ರ, ಮೇಘನಾ, ಅರುಣ್ಕುಮಾರ್, ಅಶೋಕ್ ಕುಮಾರ್, ಅಶೋಕ್, ಗುಂಡಪ್ಪ, ಪ್ರಿಯಾಂಕ, ವಿದ್ಯಾ, ಅಂಬಿಕ, ಹರ್ಷ, ಕಮಲಾಕ್ಷಿ, ಲೋಕೇಶ್, ಗಿರೀಶ್, ಚೇತನ್ಕುಮಾರ್ ಸೇರಿದಂತೆ ಒಟ್ಟು 30ಜನ ಅತಿಥಿ ಉಪನ್ಯಾಸಕರು ಸಹಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
