ಹುಳಿಯಾರು:
ಹಂದನಕೆರೆ ಹೋಬಳಿಯ ಬೆಳಗುಲಿ ಗ್ರಾಪಂ ಎದುರಿಗೆ ಇರುವ ನೀರಿನ ತೊಟ್ಟಿ ದುರಸ್ಥಿ ಮಾಡುವಂತೆ ಗ್ರಾಪಂ ಮಾಜಿ ಅಧ್ಯಕ್ಷ ಮಧು ಅವರು ಮನವಿ ಮಾಡಿದ್ದಾರೆ.
ಉದ್ಯೋಗಖಾತ್ರಿ ಯೋಜನೆಯಲ್ಲಿ ಜಾನುವಾರುಗಳ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಗ್ರಾಪಂ ಎದುರಿನಲ್ಲೇ ಸರಿಸುಮಾರು 40 ಸಾವಿರ ರೂ. ವೆಚ್ಚದಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಮಗಾರಿ ಕಳಪೆಯಿಂದಿದ್ದ ಕಾರಣದಿಂದ ಕೇವಲ ಒಂದೇ ವರ್ಷಕ್ಕೆ ನೀರಿನ ತೊಟ್ಟಿಯಲ್ಲಿ ಲೀಕೇಜ್ ಆರಂಭವಾಗಿದೆ.
ಪರಿಣಾಮ ಜಾನುವಾರುಗಳ ದಾಹ ನೀಗಿಸಲು ನಿರು ಶೇಖರಿಸಿದ ಕೆಲ ನಿಮಿಷದಲ್ಲೇ ನೀರೆಲ್ಲಾ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಪರಿಣಾಮ ತೊಟ್ಟಿ ಇದ್ದೂ ಉಪಯೋಗಕ್ಕೆ ಬಾರದೆ ಸಾವಿರಾರು ರೂ. ನೀರಿನಲ್ಲಿ ಹೋಮ ಮಾಡಿದಂತ್ತಾಗಿದೆ. ಜೊತೆಗೆ ಅತ್ಯಮೂಲ್ಯವಾದ ಜೀವ ಜಲ ಕೂಡ ವ್ಯರ್ಥವಾಗಿ ರಸ್ತೆಗೆ ಹರಿಯುತ್ತಿದೆ.
ಈಗಾಗಲೇ ಮಳೆಯಿಲ್ಲದೆ ಕೆರೆಕಟ್ಟೆಗಳು ಖಾಲಿಯಾಗಿದ್ದು ಜಾನುವಾರುಗಳಿಗೆ ನೀರಿನ ಹಾಹಾಕಾರ ಎದುರಾಗಿದೆ. ಅಲ್ಲದೆ ಬಿಸಿಲಿನ ಝಳ ಕೂಡ ಹೆಚ್ಚಾಗಿದ್ದು ಹನಿ ನೀರಿಗೂ ಪರದಾಡುವಂತ್ತಾಗಿದೆ. ಈ ನಿಟ್ಟಿನಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ತಡೆದು ಜಾನುವಾರುಗಳಿಗೆ ಕುಡಿಯಲು ನೀರು ಕೊಡುವ ಸಲುವಾಗಿ ತಕ್ಷಣ ತೊಟ್ಟಿಯ ದುರಸ್ಥಿಯಾಗಬೇಕಿದೆ.
ಆದರೆ ಗ್ರಾಪಂ ಎದುರಿನಲ್ಲೇ ನೀರು ವ್ಯರ್ಥವಾಗಿ ಹರಿಯುತ್ತಿದ್ದರೂ ಗ್ರಾಪಂ ಅಧಿಕಾರಿಗಳ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ಗಮನಕ್ಕೆ ತಂದರೂ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಇನ್ನಾದರೂ ತಾಪಂ ಇಓ ಅವರು ನೀರು ಉಳಿಸಿ ಜಾನುವಾರುಗಳಿಗೆ ಕೊಡುವ ನಿಟ್ಟಿನಲ್ಲಾದರೂ ತೊಟ್ಟಿಯನ್ನು ತಕ್ಷಣ ದುರಸ್ಥಿ ಮಾಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ