ಹುಳಿಯಾರು
ಹುಳಿಯಾರು ಭಾಗದಲ್ಲಿ ನಡೆಯುತ್ತಿದ್ದ ನ್ಯಾಷನಲ್ ಹೈವೆ ಕಾಮಗಾರಿ ದಿಡೀರ್ ಸ್ಥಗಿತಗೊಂಡಿದ್ದು ಅರ್ಧಭರ್ಧವಾಗಿರುವ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಹಾಗೂ ಇಲ್ಲಿನ ನಿವಾಸಿಗಳಿಗೆ ತೊಡಕಾಗಿದೆ ಎಂದು ಹುಳಿಯಾರು ನಿವಾಸಿ ಮೋಟಿಹಳ್ಳಿ ನಟರಾಜ್ ಅವರು ಆರೋಪಿಸಿದ್ದಾರೆ.
ಮಂಗಳೂರು ಟು ವಿಶಾಖಪಟ್ಟಣಂ ರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದ ಅಭಿವೃದ್ಧಿ ಕಾಮಗಾರಿಯು ಕಳೆದ ಆರೇಳು ತಿಂಗಳಿಂದ ನಡೆಯುತ್ತಿದೆ. ಆರೇಳು ತಿಂಗಳಲ್ಲಿ ಇಲ್ಲಿಯವರೆವಿಗೂ ಏಳೆಂಟು ಬಾರಿ ಕಾಮಗಾರಿ ಸ್ಥಗಿತಗೊಳಿಸಿ ಪುನಃ ಆರಂಬಿಸುವ ಮೂಲಕ ಕಾಮಗಾರಿ ಪ್ರಗತಿ ಕುಂಠಿತವಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಎಪಿಎಂಸಿ ಬಳಿ ರಸ್ತೆಯ ಇಕ್ಕೆಲಗಳ ಚರಂಡಿ ಕಾಮಗಾರಿ ಆರಂಭಿಸಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದರು. ಈಗ ಒಂದು ತಿಂಗಳ ಹಿಂದಷ್ಟೆ ಸ್ಟೇಷನ್ ಸರ್ಕಲ್ ಬಳಿ ಕಾಮಗಾರಿ ಆರಂಭಿಸಿ ಈಗ ಮತ್ತೆ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಚರಂಡಿ ನಿರ್ಮಾಣ ಮಾಡುವ ಸಲುವಾಗಿ ಆಳೆತ್ತರದ ಗುಂಡಿಗಳನ್ನು ತೆಗೆದು ಅದನ್ನು ಮುಚ್ಚದೆ ಕಾಮಗಾರಿ ನಿಲ್ಲಿಸಿ ಹೋಗಿದ್ದಾರೆ ಎಂದು ದೂರಿದರು.
ಚರಂಡಿ ಮಾಡುವ ಸಲುವಾಗಿ ರಸ್ತೆಯ ಇಕ್ಕೆಲದಲ್ಲಿ ಆಳೆತ್ತರದ ಗುಂಡಿಗಳನ್ನು ತೆಗೆದು ಹಾಗೆಯೇ ಬಿಟ್ಟು ಹೋಗಿರುವುದರಿಂದ ಚರಂಡಿ ಪಕ್ಕದ ಮನೆಯಲ್ಲಿ ವಾಸಿಸುವವರು ಹಾಗೂ ಅಂಗಡಿ ಮತ್ತು ಹೋಟೆಲ್ಗಳಿಗೆ ಬರುವವರು ಅಂಗೈಯಲ್ಲಿ ಜೀವ ಹಿಡಿದು ತಿರುಗಾಡುವಂತ್ತಾಗಿದೆ. ಅದರಲ್ಲೂ ವೃದ್ಧರು ಮತ್ತು ಮಕ್ಕಳನ್ನು ಒಬ್ಬೊಬ್ಬರನ್ನೇ ಕಳುಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮನೆಗೆ ಕುಡಿಯುವ ನೀರು, ವಾಹನ ತರುವುದು ಅಸಾಧ್ಯವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಚರಂಡಿ ನಿರ್ಮಾಣದ ಪಕ್ಕದಲ್ಲಿರುವ ಅಂಗಡಿ, ಹೋಟೆಲ್ಗಳ ವ್ಯಾಪಾರವಂತೂ ಒಂದು ತಿಂಗಳಿಂದ ಸಂಪೂರ್ಣ ಇಲ್ಲದಾಗಿದೆ. ಸಣ್ಣಪುಟ್ಟ ಗೂಡಂಗಡಿಗಳಂತೂ ಸಾಲಸೂಲ ಮಾಡಿ ಮನೆಗೆ ರೇಷನ್ ತೆಗೆದುಕೊಂಡು ಹೋಗುವಂತ್ತಾಗಿದೆ. ಅಂತಹದರಲ್ಲಿ ಕಾಮಗಾರಿ ನಿಲ್ಲಿಸಿರುವುದರಿಂದ ಮತ್ತೊಷ್ಟು ಆತಂಕಗೊಂಡಿದ್ದು ಇನ್ನೆಷ್ಟು ದಿನ ಈ ಸಂಕಷ್ಟ ಅನುಭವಿಸಬೇಕೋ ಎನ್ನುವಂತ್ತಾಗಿದೆ. ಹಾಗಾಗಿ ಮೇಲಧಿಕಾರಿಗಳು ತಕ್ಷಣ ಇತ್ತ ಗಮನ ಹರಿಸಿ ಶೀರ್ಘ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆರಾರರಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/3HULIYAR3.gif)