ಹುಳಿಯಾರು
ಹುಳಿಯಾರು ಹೋಬಳಿಯ ತೊರೆಮನೆ ರಸ್ತೆ ತೀರಾ ಹದಗೆಟ್ಟಿದ್ದು ತಕ್ಷಣ ರಸ್ತೆ ದುರಸ್ತಿ ಮಾಡಿಸಿ ನೆಮ್ಮದಿಯ ಓಡಾಟಕ್ಕೆ ಅನುಕೂಲ ಕಲ್ಪಿಸುವಂತೆ ಇಲ್ಲಿನ ನಿವಾಸಿ ಸ್ವಾಮಿ ಅವರು ಮನವಿ ಮಾಡಿದ್ದಾರೆ.ಸೀಗೆಬಾಗಿ ಗೇಟ್ ನಿಂದ ತೊರೆಮನೆಗೆ ಹೋಗುವ ಗ್ರಾಮೀಣ ರಸ್ತೆ ಇದಾಗಿದ್ದು ದಶಕಗಳ ಹಿಂದೆ ಮಣ್ಣುರಸ್ತೆ ಮಾಡಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿಯವರೆವಿಗೆ ಡಾಂಬಾರ್ ರಸ್ತೆಯಾಗಿ ಪರಿವರ್ತಿಸುವ ಪ್ರಾಮಾಣಿಕ ಪ್ರಯತ್ನ ಯಾರೊಬ್ಬರೂ ಮಾಡಿಲ್ಲ.
ದಶಕಗಳಿಂದ ಈ ರಸ್ತೆಯಲ್ಲಿ ವಾಹನಗಳು ಓಡಾಡಿ ಓಡಾಡಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಗರ್ಭಿಣಿಯರೇನಾದರೂ ಈ ರಸ್ತೆಯಲ್ಲಿ ಓಡಾಡಿದರೆ ಹೆರಿಗೆಯೇ ಆಗುವಷ್ಟು ಅದ್ವಾನವಾಗಿದೆ. ಹಾಗಾಗಿ ರೋಗಿಗಳು, ಗರ್ಭಿಣಿಯರು, ವೃದ್ಧರು ಈ ರಸ್ತೆಯ ಸಹವಾಸವೇ ಬೇಡವೆಂದು ಎರಡ್ಮೂರು ಕಿ.ಮೀ.ದೂರವಾದರೂ ಪರ್ವಾಗಿಲ್ಲವೆಂದು ದೂರದ ದಾರಿಯಲ್ಲಿ ಓಡಾಡುತ್ತಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು ವಿಧಿಯಿಲ್ಲದೆ ಸರ್ಕಾರ ಕೊಟ್ಟ ಸೈಕಲ್ನಲ್ಲಿ ಬಿದ್ದುಎದ್ದು ಓಡಾಡುತ್ತಿದ್ದಾರೆ. ಬೈಕ್ ಸವಾರರು ಕೂಡ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿ ಶಾಪಹಾಕಿ ಓಡಾಡುತ್ತಿದ್ದಾರೆ. ಮಳೆಗಾಲ ಬಂದರಂತೂ ಈ ರಸ್ತೆಯಲ್ಲಿ ಓಡಾಡುವವರಿಗೆ ದೇವರೆ ಗತಿ ಎನ್ನುವಂತ್ತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಹಳ್ಳಿ ಜನರು ನೆಮ್ಮದಿಯಿಂದ ಓಡಾಡುವಂತೆ ಮಾಡಲು ಸ್ವಾಮಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
