ತಿಪಟೂರು :
ತಾಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕರಡಿ ಕೆರೆ ಕೋಡಿ ಬಳಿ ಇರುವ ಸರ್ಕಲ್ನ್ನು ಅಭಿವೃಧ್ಧಿ ಪಡಿಸಿ, ಹೈ ಮಾಸ್ಕ್ ಲೈಟನ್ನು ಅಳವಡಿಸಬೇಕೆಂದು ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ದೇವರಾಜು ಸಂಸದ ಮುದ್ದಹನುಮೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ದೇವರಾಜು, ಈ ರಸ್ತೆಯು ಕರಡಿ, ಅರಳಗುಪ್ಪೆ ಹಾಗೂ ಕುಪ್ಪಾಳು ಗ್ರಾ.ಪಂಗೆ ಸೇರಿದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಇಲ್ಲಿ ಜಿಲ್ಲೆಯಲ್ಲಿಯೇ ಪ್ರಸಿದ್ದವಾದ ಕುಪ್ಪೂರು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಕಲ್ಲಾಳಮ್ಮ ದೇವಿ ದೇವಾಲಯವಿದ್ದು, ದೇವಾಲಯಕ್ಕೆ ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಿರುತ್ತಾರೆ. ಕುಪ್ಪಾಳಿನ ಸುಪ್ರಸಿದ್ದ ಕೆಂಪಮ್ಮ ದೇವಾಲಯಕ್ಕೆ ಮತ್ತು ಕುಪ್ಪೂರಿನಲ್ಲಿ ಬೀರಲಿಂಗೇಶ್ವರ ಕಲ್ಯಾಣ ಮಂಟಪವಿದ್ದು ವರ್ಷಪೂರ್ತಿ ಹಲವು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ಕರಡಿಕೋಡಿ ಸರ್ಕಲ್ನಲ್ಲಿ ಸರಿಯಾದ ವಿದ್ಯುತ್ ಸಂಪರ್ಕವಿಲ್ಲದ ಕಾರಣ ರಾತ್ರಿವೇಳೆ ಸಂಚರಿಸುವುದೇ ಕಷ್ಟಕರವಾಗಿದ್ದು, ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೆ ಇರುತ್ತವೆ. ಆದ್ದರಿಂದ ತಾವು ಸರ್ಕಲ್ ನಿರ್ಮಿಸಿ, ಹೈಮಾಸ್ಕ್ ಲೈಟನ್ನು ಅಳವಡಿಸಿಕೊಡಬೇಕೆಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಂಸದ ಮುದ್ದಹನುಮೇಗೌಡ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತುರ್ತು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜೆ.ಡಿ.ಎಸ್ ಮುಖಂಡ ಲೋಕೇಶ್ವರ, ಕುಪ್ಪೂರು ಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಮಹಾಲಿಂಗಯ್ಯ ಮತ್ತು ಸದಸ್ಯರುಗಳು, ಎಲ್.ಐ.ಸಿ ಲಿಂಗರಾಜು, ಕರಡಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
