ಪಾವಗಡ
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೂಡಲೆ ಬೀದಿ ದೀಪಗಳನ್ನು ಅಳವಡಿಸುವಂತೆ ಹೆಲ್ಪ್ ಸೊಸೈಟಿ ಮತ್ತು ನಮ್ಮ ಹಕ್ಕು ಸಂಘಟನೆ ವತಿಯಿಂದ ಗುರುವಾರ ಪುರಸಭಾ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದ ಘಟನೆ ನಡೆದಿದೆ. ಮನವಿ ಪತ್ರ ಸಲ್ಲಿಸಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸೋಲಾರ್ ಪಾರ್ಕ್ ತಾಲ್ಲೂಕಿನಲ್ಲಿ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ ಮಾತ್ರ ಕತ್ತಲು ಕವಿದಿದೆ. ಪಟ್ಟಣದಲ್ಲಿ ರಾತ್ರಿಯಾದರೆ ಸಾಕು ಬೀದಿ ದೀಪಗಳಿಲ್ಲದೆ ಕಗ್ಗತ್ತಲು ಕವಿಯುತ್ತಿದೆ. ಪಾದÀಚಾರಿಗಳಿಗೆ, ವಯೋ ವೃದ್ದರಿಗೆ, ಅಂಗಡಿ ಮಾಲೀಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯುಂಟಾಗುತ್ತಿದೆ. ಕೂಡಲೆ ಪುರಸಭಾ ಮುಖ್ಯಾಧಿಕಾರಿಗಳು ಬೀದಿದೀಪಗಳ ಅಳವಡಿಕೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ನಮ್ಮ ಹಕ್ಕು ಸಂಘಟನೆ ತಾ.ಅಧ್ಯಕ್ಷ ಗಿರೀಶ್ ಮಾತನಾಡಿ, ಪಟ್ಟಣದಲ್ಲಿ ಸಂಜೆಯಾದರೆ ದೀಪಗಳಿಲ್ಲದೆ ಕತ್ತಲುಂಟಾಗುವುದರಿಂದ, ಮಹಿಳೆಯರು ಓಡಾಡಲು ಹಿಂಜರಿಯುತ್ತಿದ್ದಾರೆ. ಕಾರಣ ಪಟ್ಟಣದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಸಂಜೆಯಾದರೆ ಮಹಿಳೆಯರು ರಸ್ತೆಗಿಳಿಯಲು ಹೆದರುತ್ತಿದ್ದಾರೆ. ಆದ್ದರಿಂದ ತಕ್ಷಣ ಪುರಸಭಾಧಿಕಾರಿಗಳು ಬೀದಿದೀಪಗಳನ್ನು ಅಳವಡಿಸಿ ಸಾರ್ವಜನಿಕರ ಹಿತ ಕಾಯಬೇಕೆಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿ ಪುರಸಭಾ ಮುಖ್ಯಾಧಿಕಾರಿ ನವೀನ್ಚಂದ್ರ ಮಾತನಾಡಿ,ಮುಖ್ಯ ರಸ್ತೆಯಲ್ಲಿ ಕೆಶಿಪ್ ವತಿಯಿಂದ ಬೀದಿದೀಪ ಅಳವಡಿಸಬೇಕಾಗಿತ್ತು. ಆದರೆ ಅಳವಡಿಸಿಲ್ಲ. ಅನುದಾನ ಮಂಜೂರಾದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗೌತಮ್, ನೇಮಂತ್, ಸಾಗರ್, ಕಾರ್ತಿಕ್, ವಿಶಾಲ್ಪ್ರಜ್ವಲ್, ಭರತ್ ಕುಮಾರ್, ಮಂಜುನಾಥ್, ವಿನಯ್ಬಾಬು, ಮಧು, ಕಮಲ್ ಬಾಬು, ಆರ್.ಎ.ರಾಜು, ಸಂದೀಪ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/24-pvgd-photo-01.gif)