ಹುಳಿಯಾರು:
ಹುಳಿಯಾರು ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಬ್ಬಗುಂಟೆಯಲ್ಲಿ ಕುಸಿದಿರುವ ಸೇತುವೆಯನ್ನು ದುರಸ್ತಿ ಮಾಡುವಂತೆ ಗ್ರಾಪಂ ಸದಸ್ಯ ಡಿ.ಟಿ.ಮೋಹನ್ ಕುಮಾರ್ ಮನವಿ ಮಾಡಿದ್ದಾರೆ.
ದಬ್ಬಗುಂಟೆಯ ಬಸ್ ನಿಲ್ದಾಣದಲ್ಲಿ ಹಿರಿಯೂರಿಗೆ ಹೋಗುವ ರಸ್ತೆಗೆ 25 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆಯ ಕಂಬಿಗಳು ಈಗಾಗಲೇ ತುಕ್ಕು ಹಿಡಿದಿದ್ದು ತನ್ನ ಆಯಸ್ಸು ಕಳೆದುಕೊಂಡಿದೆ.
ಪರಿಣಾಮ ಶನಿವಾರ ಇಲ್ಲಿನ ಸೊಸ್ಶೆಟಿಗೆ ರೇಷನ್ ಇಳಿಸಲು ಬಂದಿದ್ದ ಲಾರಿಯ ಭಾರಕ್ಕೆ ಸೇತುವೆ ಕುಸಿದು ಲಾರಿಯ ಚಕ್ರ ಸಿಲುಕಿಕೊಂಡಿತ್ತು. ಜೆಸಿಬಿಯ ಸಹಾಯದಿಂದ ಲಾರಿ ಎತ್ತಿ ಕಳುಹಿಸಿಕೊಡಲಾಯಿತು.ಈಗ ಈ ಸೇತುವೆ ಕುಸಿದಿದ್ದು ಇತರ ವಾಹನಗಳು ಓಡಾಡಲು ಹೆದರುವಂತ್ತಾಗಿದೆ. ಅಲ್ಲದೆ ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ವೃದ್ಧರು ಸಹ ಓಡಾಡುತ್ತಿದ್ದು ಕತ್ತಲೆಯಲ್ಲಿ ಕುಸಿದಿರುವ ಸೇತುವೆಯಲ್ಲಿ ಬೀಳುವ ಆತಂಕ ಸ್ಥಳೀಯರಲ್ಲಿ ಸೃಷ್ಠಿಯಾಗಿದೆ.
ಮೊದಲೇ ಇದು ಬಸ್ ನಿಲ್ದಾಣವಾಗಿರುವುದರಿಂದ ಬಸ್ನಿಂದ ಇಳಿದವರು ಅರಿವಿಲ್ಲದೆ ಗುಂಡಿಯಲ್ಲಿ ಬೀಳುವ ಸಾಧ್ಯತೆಯಿದೆ. ಹಾಗಾಗಿ ತಕ್ಷಣ ಸೇತುವೆ ದುರಸ್ತಿ ಮಾಡಿಸಿ ವಾಹನಗಳ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ನೆರವಾಗುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/12/18HULIYAR4.gif)