ಹೊನ್ನಾಳಿ:
ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ಗೌರವಧನ ಕಡಿಮೆ ಇದ್ದು, ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ಆದ್ದರಿಂದ, ಗೌರವಧನವನ್ನು ಹೆಚ್ಚಿಸಬೇಕು ಎಂದು ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿ ಅಜಿತಾ ಜೋಗಳೇಕರ್ ಒತ್ತಾಯಿಸಿದರು.
ಶನಿವಾರ ಇಲ್ಲಿನ ಟಿ.ಬಿ. ವೃತ್ತದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಗೌರವಧನ ಹೆಚ್ಚಿಸುವಂತೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿದ್ದು, ಕಾರ್ಯಭಾರದ ಒತ್ತಡ ನಿವಾರಿಸಲು ಅತಿಥಿ ಉಪನ್ಯಾಸಕರ ಅಗತ್ಯತೆ ಇದೆ. ಆದರೆ, ಪ್ರಸ್ತುತ ಎಸ್ಡಿಎಂಸಿ ವತಿಯಿಂದ ಗೌರವಧನ ನೀಡಲಾಗುತ್ತಿದ್ದು, ಅದು ಜೀವನ ನಿರ್ವಹಣೆಗೆ ಸಾಲದಾಗಿದೆ. ಆದ್ದರಿಂದ, ಯಾವುದಾದರೂ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ ಹೆಚ್ಚಿನ ಗೌರವಧನ ನೀಡಬೇಕು ಎಂದು ವಿನಂತಿಸಿದರು.
ಅರ್ಥಶಾಸ್ತ್ರ, ರಾಸಾಯನಶಾಸ್ತ್ರ, ಲೆಕ್ಕಶಾಸ್ತ್ರ, ಉರ್ದು, ಇತಿಹಾಸ, ಕನ್ನಡ, ವಾಣಿಜ್ಯಶಾಸ್ತ್ರ, ಇಂಗ್ಲಿಷ್ ಮತ್ತಿತರ ವಿಷಯಗಳ ತರಗತಿಗಳನ್ನು 13 ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಾರೆ. ಹಾಗಾಗಿ, ಎಲ್ಲರಿಗೂ ಹೆಚ್ಚಿನ ಗೌರವಧನ ನೀಡಬೇಕು ಎಂದು ಮನವಿ ಮಾಡಿದರು.
ಅತಿಥಿ ಉಪನ್ಯಾಸಕರ ಮನವಿ ಪತ್ರ ಸ್ವೀಕರಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಶೀಘ್ರದಲ್ಲೇ ಪ್ರಾಂಶುಪಾಲರು, ಎಸ್ಡಿಎಂಸಿಯೊಂದಿಗೆ ಚರ್ಚೆ ನಡೆಸಿ, ಗೌರವಧನ ಹೆಚ್ಚಳದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅತಿಥಿ ಉಪನ್ಯಾಸಕರಾದ ಚನ್ನೇಶ್.ಬಿ.ಇದರಮನಿ, ಎಚ್.ಎನ್. ನಿಖಿತಾ, ನೇತ್ರಾವತಿ, ಎಚ್. ಕಾವ್ಯ, ಉಮ್ಮೇಹಾನಿ, ಬಿ. ಶಾಲಿನಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
