ಬುಡಕಟ್ಟುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಲಿ

ದಾವಣಗೆರೆ:

    ಕಳ್ಳತನ, ದರೋಡೆ ಪ್ರವೃತ್ತಿಯ ಅಪಖ್ಯಾತಿಗೆ ಒಳಗಾಗಿರುವ ಬುಡಕಟ್ಟು ಸಮುದಾಯಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ, ಸಂಶೋದನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಪ್ರಗತಿಪರ ಚಿಂತಕ ಡಾ.ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು.

    ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನೇಗಿಲ ಯೋಗಿ ಟ್ರಸ್ಟ್ ವತಿಯಿಂದ ನಡೆದ ಡಾ.ಹೆಚ್.ಆರ್. ಸ್ವಾಮಿಯವರ ಕರ್ನಾಟಕದ ಕೊರಚರು ಕೃತಿಯ ಜನಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರಚ ಸೇರಿದಂತೆ ಬಹುತೇಕ ಬುಡಕಟ್ಟು ಜನಾಂಗಗಳು ಕಳ್ಳತನ, ದರೋಡೆಯಂತಹ ಅಪರಾಧ ಕೃತ್ಯಗಳ ಅಪಖ್ಯಾತಿಗೆ ಒಳಗಾಗಿವೆ. ಹೀಗಾಗಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಶೈಲಿಯ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಸಿ ದಾಖಲೀಕರಣ ಆಗಬೇಕಾದ ಅನಿವಾರ್ಯತೆ ಇದೆ ಎಂದರು.

    ಕೊರಚ ಸೇರಿದಂತೆ ಇತರೆ ಬುಡಕಟ್ಟು ಸಮುದಾಯದಗಳ ಜನರು ಮೂಲತಃ ಅರಣ್ಯವಾಸಿಗಳಾಗಿದ್ದರು. ಆದರೆ, ಬ್ರಿಟೀಶರು ದೇಶವನ್ನು ಆಕ್ರಮಿಸಿದಾಗ ರೈಲು, ರಸ್ತೆ ಅಭಿವೃದ್ಧಿಗಾಗಿ ಅರಣ್ಯಗಳ ಅತಿಕ್ರಮಣ ಮುಂದಾದರು. ಆ ಸಂದರ್ಭದಲ್ಲಿ ಅರಣ್ಯವಾಸಿಗಳಾಗಿದ್ದ ಬುಡಕಟ್ಟು ಸಮುದಾಯದವರನ್ನು ಒಕ್ಕಲೆಬ್ಬಿಸಬೇಕಾಯಿತು. ಅಂತಹ ಸಂದರ್ಭದಲ್ಲಿ ತಿರುಗಿ ಬಿದ್ದು ಬಂಡಾಯವೆದ್ದ ಬುಡಕಟ್ಟು ಜನರಿಗೆ ದಂಗೆಕೋರರೆಂಬ ಪಟ್ಟ ಕಟ್ಟಿ, ಅಪರಾಧಿಗಳ ಕಳಂಕ ಹೊರಿಸಲಾಯಿತು ಎಂದು ವಿಶ್ಲೇಷಿಸಿದರು.

    ಬುಡಕಟ್ಟು ಜನಾಂಗದವರಿಗೆ ಅಂದು ಕಟ್ಟಿದ ಅಪರಾಧಿ ಹಣೆಪಟ್ಟಿಯನ್ನು ಇಂದಿನ ಬುಡಕಟ್ಟು ಸಮುದಾಯದವರು ಸಹ ಹೊರಬೇಕಾಗಿ ಬಂದಿರುವುದು ಅತ್ಯಂತ ದುರಂತವಾಗಿದೆ ಎಂದ ಅವರು, ಅರಣ್ಯದಿಂದ ಹೊರದಬ್ಬಲ್ಪಟ್ಟ ಬುಡಕಟ್ಟು ಸಮುದಾಯಗಳು ಪ್ರಾರಂಭದಲ್ಲಿ ಜೀವನ ನಿರ್ವಹಣೆಗಾಗಿ ಕಳ್ಳತನ, ದರೋಡೆ ಮಾಡುತ್ತಿದ್ದಿರಬೇಕು. ನಂತರ ಅದೇ ಅವರ ವೃತ್ತಿಯಾಗಿ ಬೆಳೆಯಿತು.

    ಸ್ವಂತ ಜಮೀನು, ನೆಲೆ ಇಲ್ಲದ ಇಂತಹ ಜನರ ತುಮುಲಗಳನ್ನು ಮಾನವೀಯ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುವ ಯಾವುದೇ ಪ್ರಯತ್ನ ಈವರೆಗೆ ನಡೆದಿಲ್ಲ. ಆದ್ದರಿಂದ ದೇಶದಲ್ಲಿರುವ ಬುಡಕಟ್ಟು ಸಮುದಾಯಗಳ ಜೀವನಶೈಲಿ, ಸಂಸ್ಕøತಿಯನ್ನು ದಾಖಲಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕದ ಕೊರಚರು ಕೃತಿಯಲ್ಲಿ ಕೊರಚ ಸಮುದಾಯದ ಸಮಗ್ರ ಪರಿಚಯ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಲೇಖಕ ಡಾ.ಹೆಚ್.ಆರ್. ಸ್ವಾಮಿಯವರ ಇಂತಹ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     ಕೃತಿ ಕುರಿತು ಮಾತನಾಡಿದ ಹಂಪಿ ಕನ್ನಡ ವಿವಿಯ ಸಂಶೋಧಕ ಡಾ.ಅರುಣ್ ಜೋಳದ ಕೂಡ್ಲಿಗಿ, ಕರ್ನಾಟಕದ ಕೊರಚರು ಕೃತಿಯು ಪಿಹೆಚ್‍ಡಿ ಪದವಿಗಾಗಿ ಬರೆದಿರುವ ಸಂಶೋಧನಾ ಪ್ರಬಂಧದಂತಿದೆ. ಇಂತಹ ಸಂಶೋಧನಾ ಗ್ರಂಥಗಳು ಸಾರ್ವಜನಿಕರ ಓದಿಗೆ ಲಭ್ಯವಾದಾಗ ಮಾತ್ರ ಅವುಗಳ ಸಾಮಾಜಿಕ ಮೌಲ್ಯ ಹೆಚ್ಚಾಗುತ್ತದೆ. ಓದುಗರಿಗೆ ತಲುಪದ ಕೃತಿಗಳು ಮೌಲ್ಯ ಕಳೆದುಕೊಳ್ಳುತ್ತವೆ ಎಂದರು.

    ರಾಜ್ಯಾಡಳಿತ ಕಾಲದಲ್ಲಿ ದರೋಡೆಕೋರರು ಸಂಪತ್ತನ್ನು ಲೂಟಿ ಮಾಡಿ ರಾಜ್ಯದ ಶಕ್ತಿ ಕುಂದಿಸುತ್ತಿದ್ದರು. ಯುದ್ಧಕೌಶಲ್ಯವಿಲ್ಲದ ಇಂತಹ ದರೋಡೆಕೋರರು ಬ್ರಿಟಿಷರ ಆಗಮನದ ನಂತರ ಜೀವನೋಪಾಯಕ್ಕಾಗಿ ಕಳ್ಳತನ, ಲೂಟಿ, ದರೋಡೆ ಮಾಡುತ್ತಾ ಬಂದರು. ಈಗಲೂ ಬದುಕಲು ಬೇಕಾದ ಕೌಶಲ್ಯವಿಲ್ಲದೆ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದೆ ಅಂತಹ ಬುಡಕಟ್ಟು ಸಮುದಾಯಗಳು ಅತಂತ್ರ ಸ್ಥಿತಿಯಲ್ಲಿರುವುದು ವಿಷಾಧನೀಯ ಎಂದು ಕಳವಳ ವ್ಯಕ್ತಪಡಿಸಿದರು.

    ಬೆಂಗಳೂರಿನ ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕವಿ ಹೊಳಲ್ಕೆರೆಯ ಪ್ರೊ.ಚಂದ್ರಶೇಖರ್ ತಾಳ್ಯ, ಕವಯತ್ರಿ ಚಿತ್ರದುರ್ಗದ  ಪ್ರೊ.ತಾರಿಣಿ ಶುಭದಾಯಿನಿ, ಲೇಖಕ ಡಾ.ಹೆಚ್.ಆರ್.ಸ್ವಾಮಿ ಮತ್ತಿತರರು ಹಾಜರಿದ್ದರು. ಸಾಹಿತಿ ಗಂಗಾಧರ್ ಬಿ.ಎಲ್. ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link