ತಿಪಟೂರು
ಕನ್ನಡಿಗರು ಸ್ವಾಭಿಮಾನಿಗಳು, ಕರುಣಾಮಣಿಗಳು ಎಂದು ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅದರಂತೆ ನಾವು ಹಲವಾರು ಭಾಷೆಗಳ ಕಲಿಯಿರಿ, ಆದರೆ ಹೆಚ್ಚಾಗಿ ಕನ್ನಡ ಭಾಷೆಯನ್ನು ಬಳಸಿ ಎಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವೆಲ್ಲರೂ ಕನ್ನಡವನ್ನು ಆಡಳಿತ ಭಾಷೆಯಾಗಿ ಹೆಚ್ಚಾಗಿ ಬಳಸುತ್ತಾ ಹೋದರೆ ಅದು ತನ್ನಿಂದ ತಾನೇ ಜಾರಿಗೊಳ್ಳುತ್ತದೆ.
ಇಂದಿನ ಕನ್ನಡ ರಾಜ್ಯೋತ್ಸವವು ನನ್ನ ಶಾಲಾ ದಿನಗಳನ್ನು ನೆನಪಿಸುತ್ತಿದೆ. ಇಲ್ಲಿನ ಮಕ್ಕಳು ಬೆಳಗ್ಗಿನಿಂದ ಉರಿ ಬಿಸಿಲನ್ನು ಲೆಕ್ಕಿಸದೆ ಕುಳಿತಿರುವುದು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ ಎಂದ ಅವರು, ಕುವೆಂಪು ಅವರು ಬರೆದಿದ್ದ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಎಂಬ ಗೀತೆಯು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿತ್ತು. ಇದು ಇಂದಿಗೂ ಸಹ ಕೇಳಿದರೆ ನಮ್ಮ ಕಿವಿ ನಿಮಿರುತ್ತದೆ. ಅಷ್ಟೆ ಅಲ್ಲೆ ನಮ್ಮ ಕವಿ ಪುಂಗವರು ಅವರ ಕವಿತೆಗಳಲ್ಲೇ ನಮ್ಮ ನಾಡು ನುಡಿಯ ಬಗ್ಗೆ ಕವಿತೆಗಳನ್ನು ಕೇಳಿದರೆ ಅರ್ಥವಾಗುತ್ತದೆ, ನಮ್ಮ ಅಂತಹ ಸಾಹಿತ್ಯವನ್ನು ಕಟ್ಟಿಕೊಟ್ಟಿರುವ ಅವರುಗಳನ್ನು ನೆನೆಯದ ದಿನಗಳೇ ಇಲ್ಲವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಧ್ವಜವನ್ನು ನೆರವೇರಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ನಮ್ಮ ನುಡಿಯು ಮನಸ್ಸು ಮನಸ್ಸುಗಳ ನಡುವೆ ಉತ್ತಮ ಸಂಬಂಧವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿದೆ. ಕನ್ನಡ ವರ್ಣಮಾಲೆಯನ್ನು ಸತತವಾಗಿ ಉಚ್ಚರಿಸುತ್ತಿದ್ದರೆ ಸಾಕು ಹಲವಾರು ದೋಷಗಳು ನಿರ್ಮೂಲನೆಯಾಗುತ್ತದೆ ಎಂದು ತಿಳಿಸಿದ ಅವರು, ದೇಶದ ಅಭಿವೃದ್ಧಿಗೆ ನಮ್ಮ ನಾಡು ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಿದೆ. ಇದನ್ನು ಹೀಗೆ ಮುಂದುವರಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮಕ್ಕೆ ಪ್ರಾರಂಭಕ್ಕೂ ಮುಂಚೆ ನಗರದ ಅಧಿದೇವತೆ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಹೊರಟು ಕಲ್ಪತರು ಕ್ರೀಡಾಂಗಣಕ್ಕೆ ಗಣ್ಯರನ್ನು ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಧ್ವನಿವರ್ಧಕದ ಕಿರಿಕಿರಿ :
ಸುಂದರವಾದ ಕಾರ್ಯಕ್ರಮಕ್ಕೆ ಕಪ್ಪುಚುಕ್ಕೆ ಎಂದರೆ ಪದೇ ಪದೆ ಕೈಕೊಡುತ್ತಿದ್ದ ಧ್ವನಿವರ್ಧಕವನ್ನು ತಿರುಗಿ-ತಿರುಗಿ ನೋಡುವುದೇ ಸರ್ವೇಸಾಮಾನ್ಯವಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸೂಕ್ತವಾದ ಧ್ವನಿವರ್ಧಕವನ್ನು ಆಯೋಜಿಸದಿರುವುದು ತಾಲ್ಲೂಕು ಆಡಳಿತಕ್ಕೆ ಹಿಡದ ಕೈಗನ್ನಡಿಯಂತಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ತಾಲ್ಲೂಕಿನ ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು .ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಿ.ಆರತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ ಎ.ಪಿ.ಎಂ.ಸಿ ಅಧ್ಯಕ್ಷ ಲಿಂಗರಾಜು, ತಾ.ಪಂ ಇ.ಒ ಸುದರ್ಶನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
