ತುಮಕೂರು ಲೋಕಸಭಾ ಕ್ಷೇತ್ರ: ಸೋಲು ಗೆಲುವಿನ ಹಿನ್ನೋಟ

ತುಮಕೂರು

     1952ರಿಂದ ಆರಂಭವಾಗಿ ತುಮಕೂರು ಲೋಕಸಭೆಗೆ ಕಳೆದ 67 ವರ್ಷಗಳಲ್ಲಿ 16 ಚುನಾವಣೆಗಳು ಮುಗಿದು 17ರ ಫಲಿತಾಂಶ ಗುರುವಾರ ಪ್ರಕಟವಾಗಬೇಕಾಗಿದೆ. 16 ಚುನಾವಣೆಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಗಳೇ ಅತಿ ಹೆಚ್ಚು ಅವಧಿ ಅಂದರೆ 10 ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ನಾಲ್ಕು ಸಲ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಪ್ರಜಾ ಸೋಷಿಯಲಿಸ್ಟ್ ಹಾಗೂ ಜನತಾ ದಳ ಪಕ್ಷಗಳಿಗೆ ತಲಾ ಒಂದೊಂದು ಬಾರಿ ಅವಕಾಶ ಸಿಕ್ಕಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರೇ ಹೆಚ್ಚು ಸಾರಿ ಆಯ್ಕೆಯಾಗಿದ್ದಾರೆ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿರುವುದು ಕಮ್ಮಿ.

      ಈವರೆಗಿನ 17 ಚುನಾವಣೆಗಳಲ್ಲಿ ಅತಿ ಹೆಚ್ಚು ಸಾರಿ ಅಂದರೆ ಎಂಟು ಬಾರಿ ಸ್ಪರ್ಧೆ ಮಾಡಿರುವುದು ಜಿ ಎಸ್ ಬಸವರಾಜು. ಇದರಲ್ಲಿ ನಾಲ್ಕು ಸಲ ಸಂಸತ್ತಿಗೆ ಆಯ್ಕೆಯಾಗಿ, ಮೂರು ಬಾರಿ ವಿಫಲರಾದರು, ಈ ಬಾರಿಯ ಫಲಿತಾಂಶ ಕಾದು ನೋಡಬೇಕಾಗಿದೆ. ಈ ಚುನಾವಣೆ ಗೆದ್ದರೆ ತುಮಕೂರು ಕ್ಷೇತ್ರದಿಂದ ಐದು ಬಾರಿ ಗೆದ್ದು ಅತಿ ಹೆಚ್ಚಿನ ಸಲ ಸಂಸತ್ತಿಗೆ ಆಯ್ಕೆಯಾದ ಹೆಚ್ಚುಗಾರಿಕೆಗೆ ಪಾತ್ರರಾಗುತ್ತಾರೆ. ಜಿ ಎಸ್ ಬಸವರಾಜು ಹಾಗೂ ಕೆ ಲಕ್ಕಪ್ಪ ಅವರು ಈವರೆಗೆ ತಲಾ ನಾಲ್ಕು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.

       1984ರಲ್ಲಿ ಮೊದಲ ಪ್ರಯತ್ನದಲ್ಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಎಸ್‍ಬಿ ಗೆಲುವು ಪಡೆದಿದ್ದರು, ನಂತರ 1989ರ ಚುನಾವಣೆಯಲ್ಲಿ ಮರು ಆಯ್ಕೆಯಾದರು. 1991ರಲ್ಲಿ ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ವಿರುದ್ಧ ಪರಾಭವಗೊಂಡರು. ಮುಂದಿನ 1996ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿ ಎಸ್ ಬಸವರಾಜು ಅವರಿಗೆ ಟಿಕೆಟ್ ನಿರಾಕರಿಸಿತ್ತು. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಚಿತ್ರದುರ್ಗದ ಆರ್ ಮಂಜುನಾಥ್ ಅವರಿಗೆ ಅವಕಾಶ ನೀಡಿತು. ಆದರೆ, ಮಂಜುನಾಥ್ ಸೊತು ಮೂರನೇ ಸ್ಥಾನಕ್ಕಿಳಿದರು.

      1998ರ ಚುನಾವಣೆ ಟಿಕೆಟ್ ಬಯಸಿದ್ದ ಜಿಎಸ್‍ಬಿಗೆ ಕಾಂಗ್ರೆಸ್ ಪಕ್ಷ ನಿರಾಸೆ ಮಾಡಿ, ಮಾಜಿ ಶಾಸಕ ಆರ್ ನಾರಾಯಣ್ ಅವರಿಗೆ ಮಣೆ ಹಾಕಿತು. ನಾರಾಯಣ್ ಅವರು ಬಿಜೆಪಿಯ ಮಲ್ಲಿಕಾರ್ಜುನಯ್ಯ ವಿರುದ್ದ 71,187 ಮತಗಳ ಅಂತರದಿಂದ ಪರಾಭವಗೊಂಡರು. 1999ರ ಚುನಾವಣೆಯಲ್ಲಿ ಜಿ ಎಸ್ ಬಸವರಾಜು ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ, ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಅವರನ್ನು ಸೋಲಿಸಿ ಮೂರನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು. ನಂತರ 2004ರಲ್ಲಿ ಕಾಂಗ್ರೆಸ್‍ನಿಂದ ಸೋತು, 2009ರಲ್ಲಿ ಬಿಜೆಪಿ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಜಯ ಪಡೆದರು.

      2014ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಸ್ ಪಿ ಮುದ್ದಹನುಮೇಗೌÀಡರ ವಿರುದ್ಧ ಪರಾಭವಗೊಂಡು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಎದುರಾಳಿ ಅಭ್ಯರ್ಥಿ ಮಾಜಿ ಪ್ರಧಾನಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ದೇವೇಗೌಡರೊಂದಿಗೆ ಚುನಾವಣಾ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

        ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಒಂದು ಅವಧಿಯಲ್ಲಿ ಲೋಕಸಭಾ ಉಪಸಭಾಪತಿಯಾಗಿದ್ದು ಹೊರತುಪಡಿಸಿದರೆ, ತುಮಕೂರು ಕ್ಷೇತ್ರದ ಯಾವ ಸಂಸದರೂ ಈವರೆಗೆ ಕೇಂದ್ರ ಸರ್ಕಾರದ ಸಚಿವರಾಗಲಿಲ್ಲ. ಪ್ರಭಾವಿ ನಾಯಕರೆನಿಸಿಕೊಂಡಿದ್ದ ಕೆ ಲಕ್ಕಪ್ಪನವರಿಗೂ ಕೂಡಾ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ್ಯೂ ಸಚಿವರಾಗುವ ಅವಕಾಶ ದೊರೆಯಲಿಲ್ಲ. 1967ರ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮೊದಲ ಪ್ರಯತ್ನದಲ್ಲೇ ಕೆ ಲಕ್ಕಪ್ಪ ಅವರು ಸಂಸತ್ತಿಗೆ ಆಯ್ಕೆಯಾದರು.

        ನಂತರ ಕಾಂಗ್ರೆಸ್ ಪಕ್ಷದಿಂದ 1971, 1977ರಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ ಲಕ್ಕಪ್ಪನವರು, 1980ರ ಚುನಾವಣೆಯಲ್ಲೂ ಗೆಲುವು ಪಡೆದು ಸತತವಾಗಿ ನಾಲ್ಕು ಬಾರಿ ಚುನಾಯಿತರಾಗಿ ಸಂಸತ್ ಪ್ರವೇಶ ಮಾಡಿದರು. ಸೋಲೇ ಕಾಣದ ಇವರು, ತಾವು ಸ್ಪರ್ಧೆ ಮಾಡಿದ್ದ ಎಲ್ಲಾ ನಾಲ್ಕು ಚುನಾವಣೆಗಲ್ಲೂ ಯಶಸ್ವಿಯಾದದ್ದು ವಿಶೇಷ.

       1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿ ಆರ್ ಬಸಪ್ಪ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ, ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ವಿರುದ್ದ 68,840 ಮತಗಳ ಅಂತರದಿಂದ ಗೆದ್ದರು. 1957ರಲ್ಲಿ ಎಂ ವಿ ಕೃಷ್ಣಪ್ಪ ಪಿಎಸ್‍ಪಿಯ ಬಿ ಪಿ ಗಂಗಾಧರ್ ವಿರುದ್ಧ 64,388 ಮತಗಳ ಅಂತರದಿಂದ ಹಾಗೂ ನಂತರದ 1962ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಂ ವಿ ಕೃಷ್ಣಪ್ಪವರೇ ಪಿಎಸ್‍ಪಿಯ ಕೆ ಎನ್ ಶಂಕರಲಿಂಗಪ್ಪ ಎದುರು 48,893 ಮತಗಳ ಅಂತರ ಉಳಿಸಿ ಜಯಪಡೆದರು. ಇವರ ನಂತರ 1967ರಿಂದ 1980ರವರೆಗೆ ನಾಲ್ಕು ಚುನಾವಣೆಗಳಲ್ಲಿ ಕೆ ಲಕ್ಕಪ್ಪ ಗೆಲುವು ಪಡೆದರು.

       1984ರಲ್ಲಿ ಮೊದಲ ಸಂಸತ್ ಚುನಾವಣೆ ಎದುರಿಸಿದ ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಜನತಾ ಪಾರ್ಟಿಯ ವೈ ಕೆ ರಾಮಯ್ಯ ವಿರುದ್ಧ 30,410 ಮತಗಳಿಂದ ಗೆದ್ದರು. 1989ರಲ್ಲಿ ಜಿಎಸ್‍ಬಿ ಅವರು ಮತ್ತೊಮ್ಮೆ ಜನತಾ ಪಾರ್ಟಿಯ ವೈ ಕೆ ರಾಮಯ್ಯ ವಿರುದ್ಧವೇ 1,99,138 ಮತಗಳ ಬಾರಿ ಅಂತರದಿಂದ ಗೆದ್ದು ಎರಡನೇ ಸಲ ಲೋಕಸಭೆ ಪ್ರವೇಶ ಮಾಡಿದರು. ಆಗ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ವೈ ಕೆ ರಾಮಯ್ಯ ಅವರು ಲೋಕಸಭೆಗೆ ಸ್ಪರ್ಧೆ ಮಾಡಿದ್ದ ನಾಲ್ಕು ಬಾರಿಯೂ ಸೋತು, ಸಂಸತ್ ಪ್ರವೇಶಿಸುವಲ್ಲಿ ವಿಫಲರಾದರು.

        1977ರಲ್ಲಿ ಭಾರತೀಯ ಲೋಕ ದಳ ಪಕ್ಷ, ಹಾಗೂ 1980ರಲ್ಲಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಎಸ್ ಮಲ್ಲಿಕಾಜುನಯ್ಯ ಅವರು 1991ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಅವರನ್ನು 18,917 ಮತಗಳ ಅಂತರದಿಂದ ಸೋಲಿಸಿದರು. ಇದೂವರೆಗೂ ಒಕ್ಕಲಿಗ, ಲಿಂಗಾಯತ ಅಭ್ಯರ್ಥಿಗಳೇ ಹೆಚ್ಚಿನ ಬಾರಿ ಆಯ್ಕೆಯಾಗಿದ್ದರು.

      1996ರ ಚುನಾವಣೆಯಲ್ಲಿ ಹಿಂದುಳಿದ ವರ್ಗದವರು ತುಮಕೂರು ಕ್ಷೇತ್ರದಿಂದ ಪಾರ್ಲಿಮೆಂಟ್ ಪ್ರವೇಶಿಸಲು ಮತದಾರರು ಅವಕಾಶ ಮಾಡಿಕೊಟ್ಟರು. ಈ ಚುನಾವಣೆಯಲ್ಲಿ ಸಜ್ಜನ ರಾಜಕಾರಣಿ ಎಂದು ಹೆಸರಾಗಿದ್ದ ಮಾಜಿ ಶಾಸಕ ಸಿ ಎನ್ ಭಾಸ್ಕರಪ್ಪ ಅವರು ಜನತಾ ದಳ ಅಭ್ಯರ್ಥಿಯಾಗಿ ಜಯಪಡೆದರು. ಇವರು ಬಿಜೆಪಿಯ ಮಲ್ಲಿಕಾರ್ಜುನಯ್ಯ ಅವರನ್ನು 15,712 ಮತಗಳಿಂದ ಪರಾಭವಗೊಳಿಸಿದರು. ನಂತರ 1998ರಲ್ಲಿ ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಅವರು ಕಾಂಗ್ರೆಸ್‍ನ ಆರ್ ನಾರಾಯಣ್ ಹಾಗೂ ಜನತಾದಳದ ಸಿ ಎನ್ ಭಾಸ್ಕರಪ್ಪ ಅವರ ವಿರುದ್ಧ 71,187 ಮತಗಳ ಅಂತರದಿಂದ ಗೆದ್ದರು.

       1999ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಬಿಜೆಪಿಯ ಮಲ್ಲಿಕಾರ್ಜುನಯ್ಯ ಅವರನ್ನು 63,937 ಮತಗಳಿಂದ ಸೋಲಿಸಿದರು. 2004ರಲ್ಲಿ ಬಿಜೆಪಿಯ ಎಸ್ ಮಲ್ಲಿಕಾರ್ಜುನಯ್ಯ ಅವರು ಜೆಡಿಎಸ್‍ನ ಡಿ ಎಲ್ ಜಗದೀಶ್ ವಿರುದ್ಧ ಕೇವಲ 2,351 ಮತಗಳಿಂದ ಗೆದ್ದರು. ಕಾಂಗ್ರೆಸ್‍ನ ಜಿ ಎಸ್ ಬಸವರಾಜು ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದರು.

        2009ರಲ್ಲಿ ಜಿ ಎಸ್ ಬಸವರಾಜು ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು. ಆಗ ಕಾಂಗ್ರೆಸ್ ಪಕ್ಷವು ಚಿತ್ರದುರ್ಗ ಕ್ಷೇತ್ರದಿಂದ ಒಮ್ಮೆ ಸಂಸದರಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಕೋದಂಡರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದರು.

     ಈ ಚುನಾವಣೆಯಲ್ಲಿ ಬಿಜೆಪಿಯ ಜಿ ಎಸ್ ಬಸವರಾಜು ಅವರು ಜೆಡಿಎಸ್‍ನ ಎಸ್ ಪಿ ಮುದ್ದಹನುಮೇಗೌಡರ ಎದುರು 21,445 ಮತಗಳಿಂದ ಗೆದ್ದರು. ಇದೇ ಚುನಾವಣೆಯಲ್ಲಿ ಗೌರಿಶಂಕರ ಸ್ವಾಮೀಜಿಯವರು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ 28, 923 ಮತ ಪಡೆದಿದ್ದರು. 2014ರಲ್ಲಿ ಎಸ್ ಪಿ ಮುದ್ದಹನುಮೇಗೌಡರು ಜೆಡಿಎಸ್‍ನಿಂದ ಹೊರಬಂದು ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿ, ಬಿಜೆಪಿಯ ಜಿ ಎಸ್ ಬಸವರಾಜು ಅವರನ್ನು 74,041 ಮತಗಳ ಅಂತರದಿಂದ ಸೊಲಿಸಿ ಮೊದಲ ಬಾರಿ ಸಂಸತ್ ಪ್ರವೇಶಿಸಿದರು.

      1996ರಲ್ಲಿ ಗೆದ್ದ ಸಿ ಎನ್ ಭಾಸ್ಕರಪ್ಪನವರು, 1998 ಹಾಗೂ 1999ರ ಚುನಾವಣೆಯಲ್ಲಿ ಸೋಲು ಕಂಡರು. 2009ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎಸ್ ಪಿ ಮುದ್ದಹನುಮೇಗೌಡರು, ಆಗ ಪರಾಭವಗೊಂಡು 2014ರ ಮರು ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಕಣಕ್ಕಿಳಿದು ಗೆದ್ದರು. ಆದರೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡ ಮೈತ್ರಿ ಒಪ್ಪಂದ ಮುದ್ದಹನುಮೇಗೌಡರು ಪಕ್ಷದ ಸೂಚನೆಗೆ ಕಟ್ಟುಬಿದ್ದು ಸ್ಪರ್ಧೆಯಿಂದ ವಿಮುಖರಾಗಬೇಕಾಯಿತು.

      2019ರ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ಎದುರಾಳಿಯಾಗಿದ್ದಾರೆ. ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ?

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap