ನಿವೃತ್ತರು ನಿಷ್ಪ್ರಯೋಜಕರು ಎಂಬ ಭಾವನೆ ತೆಗೆದು ಹಾಕಿ

ತುಮಕೂರು:

         ನಿವೃತ್ತರು ನಿಷ್ಪ್ರಯೋಜಕರು ಎಂಬ ಭಾವನೆ ಕೆಲವರಲ್ಲಿದೆ. ಈ ಭಾವನೆ ನಿವೃತ್ತರಲ್ಲಿಯೂ ಇದೆ. ಮನಸ್ಸಿನಿಂದ ಅದನ್ನು ತೆಗೆದು ಹಾಕಿ ಸಮಾಜಮುಖಿ ಕಾರ್ಯಕ್ರಮಗಳತ್ತ ಗಮನ ಹರಿಸಿ ಎಂದು ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಸಲಹೆ ನೀಡಿದರು.

          ಮಾರುತಿನಗರ ನಾಗರೀಕರ ಹಿತರಕ್ಷಣ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ಮಾರುತಿನಗರ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ, ಮಧುಮೇಹ, ರಕ್ತ ಪರೀಕ್ಷೆ ಮತ್ತು ರಕ್ತದೊತ್ತಡ ಪರೀಕ್ಷಾ ಶಿಬಿರಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

          ನಿವೃತ್ತರು ಸಾಕಷ್ಟು ಅನುಭವಿಗಳಾಗಿರುತ್ತಾರೆ. ಅವರ ಅನುಭವ ಸಮಾಜಕ್ಕೆ ಬೇಕು. ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಅವರು ಪರಿಶೀಲಿಸಬೇಕು. ಅಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಏನಾದರೂ ಲೋಪವಿದೆಯೇ?, ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬುದನ್ನು ಗಮನಿಸಲು ಮುಂದಾದರೆ ಉತ್ತಮ ಕಾಮಗಾರಿಗಳನ್ನು ನಿರೀಕ್ಷಿಸಲು ಸಾಧ್ಯವಾಗುತ್ತದೆ. ಅಂತಹ ಮನೋಸ್ಥಿತಿ ಹಿರಿಯರಲ್ಲಿ ಬರಲಿ ಎಂದವರು ಆಶಿಸಿದರು. ನಿವೃತ್ತರಾದ ಮೇಲೆ ನಮ್ಮ ಜವಾಬ್ದಾರಿ ಮುಗಿಯಿತೆಂದು ಅಂದುಕೊಳ್ಳಬೇಡಿ. ನಿಮ್ಮ ಅನುಭವ ಸಮಾಜಕ್ಕೆ ಬೇಕು ಎಂಬುದನ್ನು ನೀವುಗಳು ತೋರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

          ನಗರದಲ್ಲಿ ಹೆಚ್ಚೆಚ್ಚು ಈ ರೀತಿಯ ಕಾರ್ಯಕ್ರಮಗಳು ಆಗುತ್ತಾ ಇರಬೇಕು. ಪಾರ್ಕಿನಲ್ಲಿ ಹಸಿರು ಸಂರಕ್ಷಣೆ ಮಾಡಿದರೆ ಹೆಚ್ಚು ಮಾಲಿನ್ಯ ಆಗದಂತೆ ನಾವು ತಡೆಯಬಹುದು. ಇಂತಹ ಕಾರ್ಯಕ್ರಮಗಳನ್ನು ಹಿರಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

         ತುಮಕೂರಿನಲ್ಲಿ ಅತ್ಯಂತ ತೂಕದ ಹಿತರಕ್ಷಣಾ ವೇದಿಕೆಯೆಂದರೆ ಅದು ಮಾರುತಿನಗರ ಹಿತರಕ್ಷಣ ವೇದಿಕೆ. ಇವರು ಯಾವ ಕಾರ್ಯಕ್ರಮ ಮಾಡಿದರೂ ಕೂಡ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜನೆಮಾಡುತ್ತಾರೆಂದು ತುಮಕೂರು ಶಾಸಕ ಜ್ಯೋತಿಗಣೇಶ್ ಶ್ಲಾಘಿಸಿದರು. ಇಂದು ನಡೆಯುತ್ತಿರುವ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾಗಿದೆ. ಈ ಬಡಾವಣೆಯಲ್ಲಿ ಪ್ರಜ್ಞಾವಂತರು ಇದ್ದಾರೆ. ಒಗ್ಗಟ್ಟು ಸಹ ಇದೆ. ಇದೇ ಕಾಳಜಿಯನ್ನು ಹೊಂದಿ ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.

            ಕಾರ್ಯಕ್ರಮದಲ್ಲಿ ಮಾರುತಿನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಗಜ್ಯೋತಿ ಸಿದ್ದರಾಮಯ್ಯ, ಐಎಂಎ ಅಧ್ಯಕ್ಷ ಡಾ.ಜಿ.ಪರಮೇಶ್ವರಪ್ಪ, ಡಾ.ಅಂಜನ್ ಕುಮಾರ್ ವಾಲ್ಮೀಕಿ, ಎನ್.ಎಸ್.ಐ. ಫೌಂಡೇಷನ್‍ನ ಡಾ.ಎನ್.ಎಸ್. ಶ್ರೀಧರ್ ಸೇರಿದಂತೆ ಇತರೆ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link