ತುಮಕೂರು
ಮಂಗಳವಾರ ನಗರದಲ್ಲಿ ತುಂತುರು ಮಳೆ ಬಿದ್ದಿತು. ಇದರ ಪರಿಣಾಮ ರಸ್ತೆಯ ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿ ಮಣ್ಣು ರಸ್ತೆಗೆ ಹರಡಿ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಯಿತು. ವಿವಿಧ ಕಾಮಗಾರಿಗಳಿಗಾಗಿ ಕಳೆದ ಒಂದು ವರ್ಷದಿಂದ ರಸ್ತೆ ಅಗೆಯುವ ಕಾಮಗಾರಿ ನಡೆಯುತ್ತಿದೆ. ನಗರ ಪಾಲಿಕೆ ಸ್ಮಾರ್ಟ್ಸಿಟಿ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಒಂದಾದ ನಂತರ ಮತ್ತೊಂದು ಎನ್ನುವಂತೆ ಸರದಿಯೋಪಾದಿಯಲ್ಲಿ ಈ ಕಾಮಗಾರಿಗಳು ನಡೆಯುತ್ತಿರುವ ಪರಿಣಾಮ ಜನತೆ ಹೈರಾಣಾಗಿ ಹೋಗಿದ್ದಾರೆ. ರಸ್ತೆಯ ಒಂದು ಬದಿಯಲ್ಲಿ ಚರಂಡಿ ಅಗೆಯುವುದರಿಂದ ಆ ಮಣ್ಣನ್ನು ರಸ್ತೆಯ ಪಕ್ಕಕ್ಕೆ ಬಿಡಲಾಗುತ್ತದೆ. ಅಲ್ಲಿ ಹೋಗಿಬರುವ ವಾಹನಗಳಿಗೆ ಈ ಮಣ್ಣು ಸಿಲುಕಿ ರಸ್ತೆಗೆ ಹರಡಿಕೊಳ್ಳುತ್ತಿದೆ.
ಇದರ ಪರಿಣಾಮ ಎನ್ನುವಂತೆ ಸಣ್ಣ ಮಳೆ ಬಂದರೆ ಸಾಕು ಮಣ್ಣು ನೀರಿನಲ್ಲಿ ಬೆರೆತು ಇಡೀ ರಸ್ತೆಯಲ್ಲಾ ಕೆಸರುಮಯ ಎನ್ನುವಂತಾಗಿತ್ತು. ಕೆಂಪು ನೀರು ರಸ್ತೆಯಲ್ಲಿ ತುಂಬಿಕೊಂಡು ಕೆಲಕಾಲ ಸಂಚರಿಸುವುದೇ ಸಮಸ್ಯೆ ಎನ್ನುವಂತಾಗಿತ್ತು. ಕಾಮಗಾರಿಗಳು ನಡೆಯುವುದಕ್ಕೆ ಯಾರಿಂದಲೂ ವಿರೋಧವಿಲ್ಲ. ಆದರೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಯಾವುದಕ್ಕೆ ಸಂಬಂಧಪಟ್ಟದ್ದು ಎಂಬ ಪರಿಪೂರ್ಣ ಮಾಹಿತಿ ಯಾರಿಗೂ ಇಲ್ಲ. ಹೀಗಾಗಿ ರಸ್ತೆ ಅಗೆತದ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪಾಲಿಕೆಯ ಸದಸ್ಯರಾದಿಯಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಉತ್ತರಿಸುತ್ತಿಲ್ಲ. ಅಧಿಕಾರಿಗಳು ತಾವಾಯಿತು ಕಾಮಗಾರಿಯಾಯಿತು ಎನ್ನುವಂತೆ, ಹೀಗೆ ಬಂದು ಹಾಗೆ ಹೋಗುತ್ತಿದ್ದಾರೆ. ಹೀಗಾದರೆ ಕಾಮಗಾರಿಗಳು ಪೂರ್ಣಗೊಳ್ಳುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/08/DSC_5588.gif)