ಶಿರಾ
ಶಿರಾ ನಗರದ ಜನತೆಯ ಹಣೆ ಬರಹವೇ ಹೀಗೆ ಅನ್ನಿಸುತ್ತೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಅನುದಾನ ಇಲ್ಲಿನ ನಗರಸಭೆಗೆ ವ್ಯಾಪಕವಾಗಿ ಹರಿದು ಬಂದರೂ, ಅಂತಹ ಯೋಜನೆಗಳಿಗೆ ಜೀವ ತುಂಬದೆ ವರ್ಷಾನುಗಟ್ಟಲೆ ಯೋಜನೆಗಳ ಕತ್ತನ್ನು ಹಿಸುಕಿ ಕೊಲ್ಲಲಾಗುತ್ತಿದೆ ಅನ್ನುವುದಕ್ಕೆ ನಗರದ ಈಗಿನ ರಸ್ತೆಗಳ ದುಸ್ಥಿತಿ ಜ್ವಲಂತ ಉದಾಹರಣೆಯೂ ಹೌದು.
ನಗರೋತ್ಥಾನದ ಕೋಟ್ಯಂತರ ರೂ.ಗಳ ಕೇಂದ್ರದ ಅನುದಾನ ಇಲ್ಲಿನ ನಗರಸಭೆಗೆ ಹರಿದು ಬಂದಾಗ ಜನಪ್ರತಿನಿಧಿಗಳಿಗಷ್ಟೇ ಅಲ್ಲದೆ ಇಡೀ ನಗರದ ಜನತೆಗೆ ಎಲ್ಲಿಲ್ಲದ ಖುಷಿಯೂ ಆಗಿತ್ತು. ನಗರದ ಅಭಿವೃದ್ಧಿಯ ಕನಸನ್ನು ಕಾಣುವವರ ಸಂಖ್ಯೆಯೂ ಹೆಚ್ಚಾಗಿ ನಗರಾಭಿವೃದ್ಧಿಯ ಬಗ್ಗೆ ಆರಂಭದಲ್ಲಿ ಹೊತ್ತಂತಹ ಕನಸು ನಿಜಕ್ಕೂ ನುಚ್ಚು ನೂರಾಯಿತು.
ಮೊದಲ ಹಂತದಲ್ಲಿ ನಗರಸಭೆಗೆ ನಗರೋತ್ಥಾನದ ಯೋಜನೆಯ ಅಡಿಯಲ್ಲಿ ಸುಮಾರು 15 ಕೋಟಿ ರೂ.ಗಳ ಅನುದಾನ ಮಂಜೂರಾದಾಗ ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳದ ಗುತ್ತಿಗೆದಾರರಿಗೆ ಕಾಮಗಾರಿಯ ಕೆಲಸವನ್ನು ವಹಿಸಿ ನಗರಸಭೆ ದೊಡ್ಡ ತಪ್ಪು ಮಾಡಿತ್ತು. ಈ ನಡುವೆ ಒಳ ಚರಂಡಿ ಕಾಮಗಾರಿಗಳೂ ನಡೆದು ಇಡೀ ನಗರದ ರಸ್ತೆಗಳು ಹಾಳು ಅದ್ವಾನಗೊಳ್ಳಲು ಕಾರಣವಾಗಿತ್ತು.
ಒಳ ಚರಂಡಿ ಕಾಮಗಾರಿಯಲ್ಲಿ ಟೆಂಡರ್ದಾರರು ನಡೆಸಿದ ತುಂಡು ಗುತ್ತಿಗೆಯ ಕಾಮಗಾರಿಯಿಂದ ಸದರಿ ಒಳ ಚರಂಡಿ ಕಾಮಗಾರಿಯೂ ಕೂಡ ಕುಂಟುತ್ತಾ, ತೆವಳುತ್ತಾ ಸಾಗಿದ್ದು ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಅತ್ತ ರಸ್ತೆಗಳ ಅಭಿವೃದ್ಧಿಯೂ ಆಗದೆ, ಇತ್ತ ಪೂರ್ಣವಾಗಿ ಒಳ ಚರಂಡಿ ಕಾಮಗಾರಿಯೂ ನಡೆಯದೆ ನಗರದ ಜನತೆಗೆ ನಗರಸಭೆಯು ನುಂಗಲಾರದ ತುತ್ತಾಗಿ ಕಾಣಿಸಿತ್ತು.
ನಗರದ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪುನಃ ಶಿರಾ ನಗರಸಭೆಗೆ ಎರಡನೆಯ ಹಂತದಲ್ಲೂ ಅನುದಾನವನ್ನು ಮಂಜೂರು ಮಾಡಿತ್ತು. ಈ ಅನುದಾನವೂ ಪೂರ್ಣಗೊಂಡ ನಂತರ ಮೂರನೇ ಹಂತದ ಕಾಮಗಾರಿಯನ್ನು ಕೈಗೊಳ್ಳಲು ಸುಮಾರು 30 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಕಳೆದ ಸುಮಾರು ಆರು ಏಳು ತಿಂಗಳಿಂದಲೂ ಮೂರನೇ ಹಂತದ ನಗರೋತ್ಥಾನದ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯು ತೆವಳುತ್ತಾ ಸಾಗಿದ ಪರಿಣಾಮ ಸಾರ್ವಜನಿಕರು ನರಕ ಯಾತನೆ ಅನುಭವಿಸುವಂತಾಗಿದೆ.
ನಗರದ ಜ್ಯೋತಿ ನಗರ, ವಿದ್ಯಾನಗರ ಕೆ.ಆರ್.ಬಡಾವಣೆ, ಬಾಲಾಜಿ ನಗರ, ಸಪ್ತಗಿರಿ ಬಡಾವಣೆ…ಹೀಗೆ ಒಂದಲ್ಲಾ ಎರಡಲ್ಲ ನಗರದ ಅನೇಕ ರಸ್ತೆಗಳನ್ನು ಅಗೆದು ಕಾಮಗಾರಿ ಕೈಗೊಳ್ಳಲು ಜಲ್ಲಿ ಕಲ್ಲುಗಳನ್ನು ರಸ್ತೆಗೆ ಚೆಲ್ಲಿ ಕೈಬಿಡಲಾಗಿದೆ. ತಿಂಗಳಾನುಗಟ್ಟಲೆ ಇಂತಹ ಅನೇಕ ರಸ್ತೆಗಳು ಡಾಂಬರ್ ರುಚಿ ಕಾಣದ ಪರಿಣಾಮ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದ್ದು, ಸಾರ್ವಜನಿಕರು ವಾಹನಗಳಲ್ಲಿ ಓಡಾಡಲು ಕಷ್ಟವಾಗಿದೆ. ಇಡೀ ರಸ್ತೆಗಳಲ್ಲಿ ಬರೀ ಜಲ್ಲಿ-ಕಲ್ಲುಗಳೇ ತುಂಬಿದ್ದು ಚಿಕ್ಕ ಪುಟ್ಟ ಮಕ್ಕಳು, ವೃದ್ಧರೂ ಕೂಡ ಓಡಾಡಲು ಸಾಧ್ಯವಾಗದಂತಾಗಿದೆ.
ಇಷ್ಟಕ್ಕೂ ಬಹುತೇಕ ರಸ್ತೆಗಳಿಗೆ ಕೇವಲ ಜಲ್ಲಿ ಕಲ್ಲುಗಳನ್ನು ಹರಡಿ ಕೈಬಿಟ್ಟಿರುವುದನ್ನು ಕಂಡರೆ ಮೇಲ್ನೋಟಕ್ಕೆ ಗುತ್ತಿಗೆದಾರರ ನಿರ್ಲಕ್ಷ್ಯ ಅನ್ನಿಸುವುದು ಸಹಜವೂ ಆಗಿದೆ. ನಗರೋತ್ಥಾನದ ರಸ್ತೆಗಳನ್ನು ಕೈಗೊಳ್ಳುವ ಟೆಂಡರ್ದಾರರಿಗೂ ಇಲ್ಲಿ ಸಂಕಷ್ಟದ ಪರಿಸ್ಥಿತಿ ಉಂಟಾಗಿದೆ. ನಗರಸಭೆಯ ಚುನಾವಣೆಯೂ ಸಮೀಪಿಸುತ್ತಿರುವ ಪರಿಣಾಮ ಬಹುತೇಕ ನಗರಸಭಾ ಸದಸ್ಯರು ತಮ್ಮ ವಾರ್ಡುಗಳಲ್ಲಿ ಸದರಿ ಯೋಜನೆಯ ರಸ್ತೆ ಅಭಿವೃದ್ಧಿ ಕೈಗೊಳ್ಳಲು ಟೆಂಡರ್ದಾರರ ಮೇಲೆ ಮುಗಿ ಬಿದ್ದಿದ್ದು ವಿಧಿ ಇಲ್ಲದೆ ಗುತ್ತಿಗೆದಾರರು ರಸ್ತೆಗಳಿಗೆ ಜೆಲ್ಲಿ ಕಲ್ಲುಗಳನ್ನು ಹರಡಿ ಕೇವಲ ಕಾಮಗಾರಿ ಕೈಗೊಳ್ಳುವ ವಾತಾವರಣ ಸೃಷ್ಟಿ ಮಾಡಿದ್ದಾರಷ್ಟೆ.
ಇಂತಹ ಕಾಟಾಚಾರದ ಕಾಮಗಾರಿಗಳಿಂದ ತೊಂದರೆಯಾಗುತ್ತಿರುವುದು ನಗರದ ಜನತೆಗೆ ಅನ್ನುವ ಸತ್ಯದ ಅರಿವಿದ್ದರೂ, ಜರೂರಾಗಿ ಸದರಿ ರಸ್ತೆಗಳನ್ನು ಡಾಂಬರೀಕರಣಗೊಳಿಸುವ ಕೆಲಸ ಮಾತ್ರ್ರ ಇನ್ನೂ ಸರಿಯಾಗಿ ನಡೆದೇ ಇಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸವೇ ಸರಿ. ನಗರಸಭೆಯ ಚುನಾವಣೆಯನ್ನು ಕಾಯುವುದರ ಬದಲಾಗಿ ನಗರಸಭಾ ಸದಸ್ಯರು ಮೊದಲು ಗುತ್ತಿಗೆದಾರರನ್ನು ಹಾಗೂ ನಗರಸಭೆಯ ಅಧಿಕಾರಿಗಳನ್ನು ಹಿಡಿದು ಜೆಲ್ಲಿ ಕಲ್ಲಿನ ರಸ್ತೆಗೆ ಡಾಂಬರಿನ ರುಚಿ ತೋರಿಸದಿದ್ದರೆ ನಿಜಕ್ಕೂ ನಗರದ ಜನತೆ ಕ್ಷಮಿಸುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
