ಕುಣಿಗಲ್
ತೋಟದ ಮನೆಯೊಂದಕ್ಕೆ ಹಾಡುಹಗಲೇ ಕಳ್ಳರು ನುಗ್ಗಿ ಲಕ್ಷಾಂತರ ಬೆಲೆಬಾಳುವ ಹಣ ಹಾಗೂ ಆಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ವರದಿಯಾಗಿದೆ. ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಸಮೀಪದಲ್ಲೇ ಇರುವ ಕೃಷಿಕ ಗಂಗಾಧರಯ್ಯ ಎಂಬುವರ ತೋಟದ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಹೊಡೆದು ನುಗ್ಗಿದ ಖದೀಮರು ಬೀರುವಿನಲ್ಲಿ ಇದ್ದ 90 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ಹಾಗೂ ಹತ್ತು ಸಾವಿರ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಗಂಗಾಧರಯ್ಯ ತನ್ನ ಸಹೋದರರೊಬ್ಬರ ಮನೆಯ ಬಳಿಗೆ ಹೋಗಿದ್ದು, ಅವರ ಪತ್ನಿ ಅಂಗನವಾಡಿ ಶಾಲೆಯೊಂದರ ಅಡಿಗೆ ಕೆಲಸಕ್ಕೆ ಹೋಗಿದ್ದನ್ನು ನೋಡಿಕೊಂಡಿದ್ದ ಕಳ್ಳರು ಸಂಚುರೂಪಿಸಿ ಹಗಲಲ್ಲೇ ಕಳ್ಳತನವನ್ನು ಮಾಡಿಕೊಂಡು ಹೋಗಿರುವುದು ಗ್ರಾಮಸ್ಥರಲ್ಲಿ ಭಯ ಹಾಗೂ ಆತಂಕಕ್ಕೆ ಎಡೆಮಾಡಿದೆ. ದೂರಿನ ಮೇರೆಗೆ ಸ್ಥಳಕ್ಕೆ ಸಿಪಿಐ ನಿರಂಜನ್ಕುಮಾರ್ ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಸಿದ್ದರು. ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.