ದಾವಣಗೆರೆ :
ಕಳೆದ ರಾತ್ರಿ ಜಿಲ್ಲಾದ್ಯಂತ ಮಿಂಚು, ಗುಡುಗು, ಬಿರುಗಾಳಿ ಸಮೇತ ಸುರಿದ ಆಲಿಕಲ್ಲು ಮಳೆಗೆ ಮಳಿಗೆಗಳ ಮೇಲ್ಛಾವಣಿ ಹಾರಿ ಹೋಗಿರುವುದಲ್ಲದೆ, ಭತ್ತ, ಬಾಳೆ, ರಾಗಿ, ಮೆಕ್ಕೆಜೋಳ ಬೆಳೆ ನಾಶವಾಗಿರುವುದು ಸೇರಿದಂತೆ ಅಪಾರ ಹಾನಿಯಾಗಿದೆ.ಭಾನುವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲೆಯಲ್ಲಿ ಸುರಿದ ಮಳೆಯು ಭಾರೀ ಆವಾಂತರ ಸೃಷ್ಟಿಸಿದೆ. ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹಳೇ ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿದ್ದ ಮಳಿಗೆಗಳ ಪೈಕಿ ಮೂವತ್ತು ಮಳಿಗೆಗಳ ಮೇಲ್ಛಾವಣಿ ಹಾರಿ ಹೋಗಿದೆ.
ಮಳಿಗೆ ಸಂಖ್ಯೆ 46ರಿಂದ 77ರ ಸಂಖ್ಯೆಯ ವರೆಗಿನ ಮಳಿಗೆಗಳ ಮೇಲೆ ಹೊದಿಸಲಾಗಿದ್ದ ತಗುಡಿನ ಸೀಟಿಗಳು ಭಾರೀ ಗಾಳಿಗೆ ಸಿಲುಕಿ ಹಾರಿ ಹೋಗಿ, ನೀರು ನುಗ್ಗಿರುವುದರಿಂದ ಈ ಮಳಿಗಗಳಲ್ಲಿದ್ದ ಬೇಕರಿ ಐಟಂ, ಹೋಟೆಲ್ ಸಾಮಗ್ರಿಗಳು ಸಂಪೂರ್ಣ ನಾಶವಾಗಿವೆ. ಅದರಲ್ಲೂ ದಾವಣಗೆರೆ ಟೈಮ್ಸ್ ಪತ್ರಿಕೆ ಕಾರ್ಯಾಲಯದಲ್ಲಿ 40 ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ ದಾಖಲೆಗಳು ಹಾಗೂ ಪತ್ರಿಕೆಯ ಸಂಗ್ರಹಿಸಿದ್ದ ಪ್ರತಿಗಳು ಸಹ ನಾಶವಾಗಿವೆ.
ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಸ್ಮಾರ್ಟ್ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪರಿಶೀಲನೆ ನಡೆಸಿ, ತಕ್ಷಣವೇ ತಾಂತ್ರಿಕ ಸಿಬ್ಬಂದಿಗಳನ್ನು ಕರೆಯಿಸಿ, ಹಾರಿ ಹೋಗಿರುವ ಮೇಲ್ಛಾವಣಿಯನ್ನು ಮರು ಅಳವಡಿಸಬೇಕು. ಹಾಗೂ ಈ ನಿಲ್ದಾಣದಲ್ಲಿ ಬಿಟ್ಟಿದ್ದ ಯುಟಿಲಿಟಿಗೆ ಅಡ್ಡವಾಗಿ ಗೋಡೆ ಕಟ್ಟಿರುವುದೇ ಈ ಅವಘಡಕ್ಕೆ ಕಾರಣವಾಗಿದ್ದು, ತಕ್ಷಣವೇ ಆ ಗೋಡೆಗಳನ್ನು ತೆರವು ಗೊಳಿಸಿ ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಮಳಿಗೆಗಳ ಬಾಡಿಗೆದಾರರು ವಿವಿಧ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಇಲ್ಲಿನ ಬೇತೂರು ರಸ್ತೆಯ ಎ.ಕೆ. ಕಾಲೋನಿ ಸೇರಿದಂತೆ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಅಲ್ಲಿಯ ನಿವಾಸಿಗಳು ರಾತ್ರಿ ಇಡೀ ಮನೆಯೊಳಗೆ ನುಗ್ಗಿರುವ ಮಳೆ ನೀರನ್ನು ಹೊರ ಹಾಕುವುದರಲ್ಲಿ ನಿರತರಾಗಿದ್ದರು.
ಇನ್ನೂ ಇಲ್ಲಿನ ನರಹರಿ ಸೇಟ್ ಸಭಾ ಭವನದ ಬಳಿಯಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ವಾಸವಾಗಿದ್ದ ಅಲೆಮಾರಿ ಜನಾಂಗದವರ ಟೆಂಟ್ಗಳಿಗೆ ಮಳೆ ನೀರು ನುಗ್ಗಿರುವ ಕಾರಣ ಇಲ್ಲಿ ವಾಸವಾಗಿದ್ದ 40 ಜನರನ್ನು ಜಿಲ್ಲಾಡಳಿತ ಭಾನುವಾರ ರಾತ್ರಿಯೇ ನರಹರಿ ಸೇಟ್ ಸಭಾಭವನಕ್ಕೆ ಸ್ಥಳಾಂತರಿಸಿ ವಸತಿ ಸೌಲಭ್ಯ ಕಲ್ಪಿಸಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ನಗರದ ಪಿಬಿ ರಸ್ತೆಯಲ್ಲಿನ ರಾಜನಹಳ್ಳಿ ಛತ್ರ, ರೇಣುಕಾ ಮಂದಿರ, ಗಾಂಧಿ ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಅಗ್ನಿ ಶಾಮಕ ದಳ ಕಚೇರಿ ಆವರಣ ಮಳೆಯ ನೀರಿನಿಂದ ಜಲಾವೃತವಾಗಿತ್ತು.ಡಿಸಿಎಂ ಲೇಔಟ್, ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಗಡಿಯಾರ ಕಂಬಕ್ಕೆ ಹೋಗು ರಸ್ತೆಯಲ್ಲಿನ, ರೇಣುಕಾ ಮಂದಿರದ ಪಕ್ಕದ ರಸ್ತೆಯಲ್ಲಿನ ಹಾಗೂ ಶಿವಾಲಿ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿಯಲ್ಲಿರುವ ರೈಲ್ವೆ ಕೆಳ ಸೇತುವೆಗಳಲ್ಲಿ ಮೊಣಕಾಲು ವರೆಗೆ ನೀರು ನಿಂತಿದ್ದರಿಂದ ಈ ಎಲ್ಲಾ ಅಂಡರ್ ಪಾಸ್ಗಳ ಮೂಲಕ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗುವ ವಾಹನ ಸವಾರರು ಎಪಿಎಂಸಿಯಲ್ಲಿನ ಮತ್ತು ದೂಡಾ ಕಚೇರಿ ಬಳಿಯ ಎರಡೂ ಫ್ಲೈ ಓವರ್ಗಳನ್ನು ಅವಲಂಬಿಸಿದ್ದರು.
ಅಲ್ಲದೆ, ಕೊರೊನಾ ನಿಯಂತ್ರಣ ಕ್ರಮವಾಗಿ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಶೇ.90 ರಷ್ಟು ಜನ ಮನೆಯೊಳಗೆ ಇದ್ದರು. ಹೀಗಾಗಿ ಮಳೆಯ ಆರ್ಭಟದಿಂದ ತೊಂದರೆಗೆ ಒಳಗಾಗುವರ ಸಂಖ್ಯೆ ತಗ್ಗಿದಂತಾಗಿದೆ.ಮಳೆಯ ಆರ್ಭಟಕ್ಕೆ ದಾವಣಗೆರೆ ತಾಲೂಕಿನ ಕಡ್ಲೇಬಾಳು, ಅರಸಾಪುರ, ಕಕ್ಕರಗೊಳ್ಳ, ಕೋಡಿಹಳ್ಳಿ ಗ್ರಾಮಗಳ ರೈತರ ಭತ್ತದ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಅಲ್ಲದೆ, ದಾವಣಗೆರೆ ಮತ್ತು ಜಗಳೂರು ತಾಲೂಕುಗಳಲ್ಲಿ ಭತ್ತ, ಬಾಳೆ, ಮೆಕ್ಕೆಜೋಳ, ರಾಗಿ ಬೆಳೆಯು ಮಳೆಯಿಂದ ನಷ್ಟಕ್ಕೆ ತುತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
