ಚಳ್ಳಕೆರೆ
ಶಾಲೆಯಲ್ಲಿ ಗಲಾಟೆ ಮಾಡಿ, ಬಾಗಿಲು ಬಡಿದರು ಎಂಬ ನೆಪವೊಡ್ಡಿ ಅದೇ ಶಾಲೆಯ ಎ.ಐಶ್ವರ್ಯ, ಜಿ.ಮೀನಾ ಮತ್ತು ಐಶ್ವರ್ಯ ಇವರನ್ನು ಶಾಲೆಯ ಕೊಠಡಿಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಕೈಗಳ ಮೂಳೆಗಳಿಗೆ ಪೆಟ್ಟಾಗಿದ್ದು, ಮುಖ್ಯ ಶಿಕ್ಷಕ ವರ್ತನೆಯ ಬಗ್ಗೆ ಪೋಷಕ ಮಂಜುನಾಥ(ಜಾಲಿಮಂಜು) ಆರೋಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿದ್ಧಾರೆ. ಮಕ್ಕಳ ಮೇಲೆ ಹಲ್ಲೆ ನಡೆಸಿದ ಮುಖ್ಯ ಶಿಕ್ಷಕ ಚಿಕಿತ್ಸೆಗಾಗಿ ಚಳ್ಳಕೆರೆ ಆಸ್ಪತ್ರೆಗೆ ಮಕ್ಕಳನ್ನು ಕರೆತಂದು ದಾಖಲಿಸಿದಾಗ ಆಸ್ಪತ್ರೆಗೆ ಬಂದು ಭೇಟಿ ನೀಡುವುದಾಗಿ ತಿಳಿಸಿದ ಮುಖ್ಯ ಶಿಕ್ಷಕ ಆಸ್ಪತ್ರೆಗೂ ಬಾರದೆ ನಿರ್ಲಕ್ಷ್ಯೆ ತೋರಿದ್ದಾರೆಂದು ಅವರು ಆರೋಪಿಸಿದ್ಧಾರೆ.
ಘಟನೆಯ ವಿವರ
ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಎಂದಿನಂತೆ ಬೆಳಗಿನ ಅವಧಿಯಲ್ಲಿ ಶಾಲಾ ತರಗತಿ ಪ್ರಾರಂಭವಾಗಿದೆ. ಮುಖ್ಯ ಶಿಕ್ಷಕ ರವೀಂದ್ರ ಹೊಸಮನಿ ಪಾಠ ಮಾಡುತ್ತಿದ್ದರು. ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಯ ಬಾಗಿಲನ್ನು ಬಡಿದಿದ್ದು, ಹೊರ ಬಂದ ಮುಖ್ಯ ಶಿಕ್ಷಕ ಪಕ್ಕದ ಕೊಠಡಿಯಲ್ಲಿ 6ನೇ ತರಗತಿ ಐಶ್ವರ್ಯ, ಎ.ಐಶ್ವರ್ಯ, 5ನೇ ತರಗತಿ ಜಿ.ಮೀನಾರನ್ನು ಕಂಡು ಕುಪಿತಗೊಂಡು ಶಾಲೆಯ ಕೊಠಡಿಯ ಬಾಗಿಲನ್ನು ಭದ್ರಪಡಿಸಿ ಕೋಲಿನಿಂದ ಮೂವರು ವಿದ್ಯಾರ್ಥಿಗಳ ಕೈಗಳಿಗೆ ಥಳಿಸಿದ ಪರಿಣಾಮವಾಗಿ ಕೈಮೂಳೆಗಳಿಗೆ ಪೆಟ್ಟಾಗಿದೆ ಎಂದು ಜಾಲಿಮಂಜುನಾಥ ಆರೋಪಿಸಿ, ವಿದ್ಯಾರ್ಥಿನಿಯರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ಧಾನೆ.
ಮುಖ್ಯ ಶಿಕ್ಷಕ ರವೀಂದ್ರಹೊಸಮನಿ ಅನಗತ್ಯವಾಗಿ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಈ ರೀತಿ ಹೊಡೆದು ಮಕ್ಕಳಿಗೆ ತೊಂದರೆ ನೀಡುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಈ ಹಿಂದೆಯೂ ಸಹ ಈ ಮುಖ್ಯ ಶಿಕ್ಷಕ ಬೇರೆ ವಿದ್ಯಾರ್ಥಿಗಳ ಮೇಲೆ ಇದೇ ರೀತಿ ಹಲ್ಲೆ ನಡೆಸಿದ್ದು, ಇವರ ವರ್ತನೆಗೆ ಮಕ್ಕಳು ಬೇಸತ್ತಿದ್ಧಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಬಿಆರ್ಸಿ ಮಂಜಪ್ಪ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಪೆಟ್ಟು ತಿಂದ ಮಕ್ಕಳಿಂದ ಘಟನೆಯ ಮಾಹಿತಿಯನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಕ್ಷೇತ್ರ ಶೀಕ್ಷಣಾಧಿಕಾರಿಗಳು ಸದರಿ ಮುಖ್ಯ ಶಿಕ್ಷಕ ರವೀಂದ್ರ ಹೊಸಮನಿ ಸೂರನಹಳ್ಳಿ ಶಾಲೆಯಲ್ಲೂ ಸಹ ಮಕ್ಕಳ ಹೊಡೆದ ಆರೋಪದಲ್ಲಿ ಅಮಾನತ್ತು ಪಡಿಸಿ ಇಲ್ಲಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಪುನಃ ಮುಖ್ಯ ಶಿಕ್ಷಕ ತನ್ನ ವರ್ತನೆಯನ್ನು ಮುಂದುವರೆಸಿದ್ದು, ಈ ಬಗ್ಗೆ ಇಂದು ಶಾಲೆಗೆ ತೆರಳಿ ತನಿಖೆ ನಡೆಸಿ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.