ಕೋಮುವಾದಿ ಬಿಜೆಪಿ ಪಾರ್ಟಿ ಕಿತ್ತು ಹಾಕಬೇಕು ಬಿಎಸ್‍ಪಿ ಕಾರ್ಯಕರ್ತರಿಗೆ ತೋಮರ್ ಕರೆ

ಚಿತ್ರದುರ್ಗ:

         ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಮಾನವಾಗಿ ನೀಡಿರುವ ಮತದಾನದ ಮೌಲ್ಯವನ್ನು ತಿಳಿದುಕೊಂಡು ಚುನಾವಣೆಯಲ್ಲಿ ಅರ್ಹರಿಗೆ ಮತ ನೀಡಿ ಕೋಮುವಾದಿ ಬಿಜೆಪಿ.ಯನ್ನು ದೇಶದಿಂದ ತೊಲಗಿಸಿ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಸ್ತುವಾರಿ ಮಾಜಿ ಎಂ.ಎಲ್.ಸಿ. ಎಂ.ಎಲ್.ತೋಮರ್ ಕಾರ್ಯಕರ್ತರಿಗೆ ಕರೆ ನೀಡಿದರು.

       ಬಹುಜನ ಸಮಾಜ ಪಾರ್ಟಿ ಬೆಂಗಳೂರು ವಲಯ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ವಿಭಾಗೀಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಶುಕ್ರವಾರ ಪತ್ರಕರ್ತರ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

          ಪ್ರಜಾಪ್ರಭುತ್ವದಡಿ ಬಡವ-ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಒಬ್ಬರಿಗೆ ಒಂದು ಮತದಾನದ ಹಕ್ಕು ನೀಡಲಾಗಿದೆ. ಅಂತಹ ಪವಿತ್ರವಾದ ಮತವನ್ನು ಚುನಾವಣೆಯಲ್ಲಿ ಹಣ, ಹೆಂಡಕ್ಕೆ ಮಾರಿಕೊಂಡು ದೇಶವನ್ನು ಅದೋಗತಿಗೆ ತಳ್ಳಬೇಡಿ. ಮತದಾನದ ಮೌಲ್ಯ ಮರೆತು ಮಲಗಿದ್ದವರನ್ನು ಬಿಎಸ್‍ಪಿ.ನಾಯಕ ಕಾನ್ಷಿರಾಂ ಮತ್ತು ಅಂಬೇಡ್ಕರ್ ಬಡಿದೆಬ್ಬಿಸಿದ್ದಾರೆ.

         ಅಂಬೇಡ್ಕರ್‍ರವರು ಹಾಕಿಕೊಟ್ಟಿರುವ ಚಳುವಳಿ ಮೂಲಕ ಸಮಾಜವನ್ನು ಪರಿವರ್ತನೆ ಮಾಡುವ ಜವಾಬ್ದಾರಿ ದಲಿತರು, ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಧಾರ್ಮಿಕ ಅಲ್ಪಸಂಖ್ಯಾತರು, ಮುಸ್ಲಿಂರ ಮೇಲಿದೆ ಎನ್ನುವುದನ್ನು ಮರೆಯಬೇಡಿ ಎಂದು ಎಚ್ಚರಿಸಿದರು.

          ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದೆ. ಇಲ್ಲಿಯವರೆಗೂ ನಿಮ್ಮ ಮತಗಳನ್ನು ಪಡೆದುಕೊಂಡು ದೇಶ ಆಳುತ್ತಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ.ಯವರು ನಿಮ್ಮ ಅಭಿವೃದ್ದಿಗೆ ಬಗ್ಗೆ ಒಂದು ದಿನವೂ ಚಿಂತಿಸಿಲ್ಲ. ಇನ್ನು ಎಷ್ಟು ದಿನಗಳ ಕಾಲ ಮತಗಳನ್ನು ಮಾರಿಕೊಳ್ಳುತ್ತೀರ. ಮುಂಬರುವ ಪಾರ್ಲಿಮೆಂಟ್ ಚುನಾಣೆಯಲ್ಲಿ ಬಿಎಸ್‍ಪಿ.ಗೆ ಮತ ನೀಡಿ ಅಕ್ಕ ಮಾಯಾವತಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಬಿಎಸ್‍ಪಿ. ಕಾರ್ಯಕರ್ತರಲ್ಲಿ ಮನವಿ ಮಾಡಿದರು.

         ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಸರ್ಕಾರ ಶಿಕ್ಷಣ ನೀಡಬೇಕು ಎನ್ನುವುದನ್ನು ಸಂವಿಧಾನದಲ್ಲಿ ಅಂಬೇಡ್ಕರ್ ಬರೆದಿದ್ದಾರೆ. ಮಾಹಿತಿ ಹಕ್ಕು ಶಿಕ್ಷಣ, ಅನ್ನ, ಆಹಾರ, ವಸತಿ ಇವುಗಳೆಲ್ಲವನ್ನು ಆಳುವ ಸರ್ಕಾರಗಳು ಬಡವರಿಗೆ ನೀಡಬೇಕು ಎನ್ನುವ ಕಾನೂನಿದ್ದರೂ ಅನುಷ್ಟಾನಗೊಳ್ಳುತ್ತಿಲ್ಲ. ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ. ಇನ್ನಾದರೂ ಜಾತಿ ಬಿಡಿ ಸಮಾಜ ಒಂದುಗೂಡಿಸಿ ಅದಕ್ಕಾಗಿ ಮೊದಲು ನೀವುಗಳೆಲ್ಲರೂ ಸಂಘಟಿತರಾಗಿ ಎಂದು ತಿಳಿಸಿದರು.

          ಹಚ್ಚೆ ದಿನ್ ಆಯೇಗಾ ಎಂದು ಹೇಳಿಕೊಂಡೆ ನಾಲ್ಕುವರೆ ವರ್ಷಗಳನ್ನು ಕಳೆದಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ಬಡವರ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ. ವರ್ಷಕ್ಕೆ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇನೆ ಎಂದು ಹೇಳಿ ವಂಚಿಸಿದ್ದಾರೆ. ಈಗಲಾದರೂ ನಿಮ್ಮ ಮತದ ಶಕ್ತಿಯನ್ನು ಅರ್ಥಮಾಡಿಕೊಂಡು ಬಿಎಸ್‍ಪಿ.ಗೆ ಮತ ನೀಡಿ ಅಕ್ಕ ಮಯಾವತಿಯನ್ನು ದೇಶದ ಪ್ರಧಾನಿಯನ್ನಾಗಿಸಿ ನಿಮಗೆ ನ್ಯಾಯಯುತವಾಗಿ ದೊರಕುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಜೀವನದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಿ ಎಂದು ಹೇಳಿದರು.

       ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರಮುನಿಯಪ್ಪ ಮಾತನಾಡಿ ದಲಿತರು, ಎಸ್.ಸಿ., ಎಸ್.ಟಿ, ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರು, ಮುಸ್ಲಿಂ, ಕ್ರಿಶ್ಚಿಯನ್, ಸಿಕ್, ಪಾರ್ಸಿ, ಜೈನ್, ರೈತರು, ಕಾರ್ಮಿಕರು ದೇಶದ ಪ್ರತಿಯೊಬ್ಬರ ಪರವಾಗಿ ಅಂಬೇಡ್ಕರ್ ಸಂವಿಧಾನವನ್ನು ಬರೆದಿದ್ದಾರೆ. ಐವತ್ತು ವರ್ಷಗಳಿಂದಲೂ ದೇಶವನ್ನು ಆಳುತ್ತಿರುವ ಕಾಂಗ್ರೆಸ್‍ನಿಂದ ಬಡತನ, ನಿರುದ್ಯೋಗ, ಜಾತಿವಾದ, ಕೋಮುವಾದ ಇನ್ನು ಜೀವಂತವಾಗಿದೆ. ಸಂವಿಧಾನ ನಮ್ಮ ಪರವಾಗಿದೆ. ಹೇರಳವಾದ ಸಂಪತ್ತಿದೆ. ಆದರೆ ಇನ್ನು ಕೈಗೆ ಸಿಗುತ್ತಿಲ್ಲ. ಅದಕ್ಕಾಗಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಎಸ್‍ಪಿ.ಗೆ ಮತ ನೀಡಿ ಮಾಯಾವತಿಯನ್ನು ದೇಶದ ಪ್ರಧಾನಿಯನ್ನಾಗಿಸಿ ಎಂದು ಕಾರ್ಯಕರ್ತರಲ್ಲಿ ಕೋರಿದರು.

       ಚುನಾವಣೆಗೂ ಮುನ್ನಾ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ ಎಂದು ಆಸೆ ತೋರಿಸಿ ಗೆದ್ದು ದೇಶದ ಪ್ರಧಾನಿಯಾಗಿ ನಾಲ್ಕುವರೆ ವರ್ಷಗಳನ್ನು ಕಳೆದಿರುವ ನರೇಂದ್ರಮೋದಿ ಯಾರ ಖಾತೆಗೂ ಇದುವರೆವಿಗೂ ಹದಿನೈದು ಪೈಸೆಯನ್ನು ಹಾಕಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿ ಅದನ್ನು ಈಡೇರಿಸಿಲ್ಲ. ಏಕಾಏಕಿ ಐದುನೂರು ಹಾಗೂ ಒಂದು ಸಾವಿರ ರೂ.ಮುಖ ಬೆಲೆಯ ನೋಟುಗಳನ್ನು ರದ್ದುಗೊಳಿಸಿ ಜನಸಾಮಾನ್ಯರು, ಬಡವರು, ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರನ್ನು ಬೀದಿ ತಳ್ಳಿರುವುದೇ ಬಿಜೆಪಿ.ಸಾಧನೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು 2019 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಎಸ್‍ಪಿಗೆ ಮತಚಲಾಯಿಸಿ ಎಂದು ಜಾಗೃತಿಗೊಳಿಸಿದರು.

        ಗೋವಿನ ಹೆಸರಿನಲ್ಲಿ ದೇಶಾದ್ಯಂತ ಅಮಾಯಕರ ಹತ್ಯೆಯಾಗುತ್ತಿದೆ. ಗೋವಿನ ಜಪ ಮಾಡುವವರು ಒಂದು ದಿನವಾದರೂ ಗೋಸೇವೆ ಮಾಡಿದ್ದಾರಾ ಎಂದು ಕೋಮುವಾದಿಗಳನ್ನು ಪ್ರಶ್ನಿಸಿದ ಮಾರಸಂದ್ರಮುನಿಯಪ್ಪ ದೌರ್ಜನ್ಯ, ದಬ್ಬಾಳಿಕೆ ವಿರುದ್ದ ರಾಜ್ಯಸಭೆಯಲ್ಲಿ ಮಾಯಾವತಿ ಪ್ರಶ್ನಿಸಿದ್ದನ್ನು ಬಿಜೆಪಿ.ಯವರು ತಡೆದರು. ಚುನಾವಣೆಯಲ್ಲಿ ಸಣ್ಣಪುಟ್ಟ ಆಸೆ ಆಮಿಷಗಳಿಗೆ ಬಲಿಯಾಗುವುದನ್ನು ಇನ್ನಾದರೂ ನಿಲ್ಲಿಸಿ ದಲಿತರು, ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರ ಪರವಾಗಿರುವ ಬಿಎಸ್‍ಪಿ.ಯನ್ನು ಬೆಂಬಲಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ತನ್ನಿ. ಗಣಿಲೂಟಿಕೋರ ಜನಾರ್ಧನರೆಡ್ಡಿ ಜೈಲಿಗೆ ಹೋಗಿ ಬಂದಿರುವುದನ್ನು ರಾಜ್ಯದ ಜನತೆಗೆ ತಿಳಿಸಿ ಎಂದು ಹೇಳಿದರು.

       2007 ರಿಂದ 12 ರತನಕ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಒಂದು ಕೋಟಿ ಇಪ್ಪತ್ತು ಲಕ್ಷ ಎಕರೆ ವೇಸ್ಟ್ ಜಮೀನನ್ನು ಮೂವತ್ತು ಲಕ್ಷ ಕುಟುಂಬಗಳಿಗೆ ಹಂಚಿಕೆ ಮಾಡಿ ಉತ್ತರಪ್ರದೇಶದಲ್ಲಿ ಬಡತನ ನಿರ್ಮೂಲನೆಗೆ ಶ್ರಮಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್., ಬಿಜೆಪಿ.ಇದುವರೆವಿಗೂ ಯಾರಿಗೂ ತುಂಡು ಭೂಮಿಯನ್ನು ಕೊಟ್ಟಿಲ್ಲ.ಹತ್ತರಿಂದ ಹನ್ನೆರಡು ಪ್ರಾದೇಶಿಕ ಪಕ್ಷಗಳು ಮಾಯಾವತಿ ಜೊತೆಯಲ್ಲಿರುವುದರಿಂದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಎಸ್‍ಪಿ.ಅಧಿಕಾರಕ್ಕೆ ಬರುವುದು ಖಚಿತ. ಕರ್ನಾಟಕದಿಂದ ಬಿಎಸ್‍ಪಿ.ಯನ್ನು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಬೇಕಾಗಿರುವುದರಿಂದ ಸಣ್ಣಪುಟ್ಟ ವೈಮಸ್ಸುಗಳನ್ನು ಬಿಟ್ಟು ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರು.

        40 ವರ್ಷಗಳ ಕಾಲ ಹೋರಾಡಿ ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಚುನಾವಣೆಯಲ್ಲಿ ನಿಮ್ಮ ಮತಗಳನ್ನು ಚಿತ್ರನ್ನ, ಬಿರಿಯಾನಿ, ನೂರಿನ್ನೂರು ರೂ, ಸೀರೆ, ಕುಪ್ಪಸಕ್ಕೆ ಮಾರಿಕೊಳ್ಳದೆ ಯೋಚಿಸಿ ಮತ ನೀಡಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.

        ಬಿಎಸ್‍ಪಿ.ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್, ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ, ವಲಯ ಉಸ್ತುವಾರಿ ಜಿ.ಎಸ್.ಪಾಂಡುರಂಗಪ್ಪ, ಶಿವಮೊಗ್ಗ ಜಿಲ್ಲಾಧ್ಯಕ್ಷ ಶಿವಪ್ಪ, ತುಮಕೂರು ಜಿಲ್ಲಾಧ್ಯಕ್ಷ ದಾಸಪ್ಪ, ವಿಭಾಗೀಯ ಉಸ್ತುವಾರಿ ಸೂರಯ್ಯ, ರಾಜ್ಯ ಕಾರ್ಯದರ್ಶಿ ಪ್ರಕಾಶ್, ಎಸ್.ವೆಂಕಟೇಶ್ ವೇದಿಕೆಯಲ್ಲಿದ್ದರು.ಜಿಲ್ಲಾ ಉಸ್ತುವಾರಿ ಕೆ.ಕುಮಾರ್ ಹಾಗೂ ನಾಲ್ಕು ಜಿಲ್ಲೆಗಳ ಬಿಎಸ್‍ಪಿ. ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link