ಕ್ಯಾನ್ಸರ್‍ನಂತಿರುವ ಬಿಜೆಪಿಯನ್ನ ಕಿತ್ತೊಗೆಯಿರಿ

ದಾವಣಗೆರೆ :

      ಕ್ಯಾನ್ಸರ್ ಸ್ವರೂಪ ಪಡೆದಿರುವ ಬಿಜೆಪಿಯನ್ನು ಕಿತ್ತೊಗೆಯಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಎಸ್ಸಿ ಘಟಕದಿಂದ ಏರ್ಪಡಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಸಂವಿಧಾನ ವಿರೋಧಿ ಬಿಜೆಪಿಯು ಕ್ಯಾನ್ಸರ್ ಸ್ವರೂಪ ಪಡೆದಿದ್ದು, ಈ ಚುನಾವಣೆಯಲ್ಲಿ ಮತದಾರರು ‘ಮತ’ ಎಂಬ ಔಷದೋಪಚಾರದ ಮೂಲಕ ಬಿಜೆಪಿಯನ್ನು ಕಿತ್ತೊಗೆಯಬೇಕೆಂದು ಕಿವಿಮಾತು ಹೇಳಿದರು.

 ಲೆಕ್ಕ ಕೊಟ್ಟರೆ ನಿವೃತ್ತಿ:

        ಸತತ ಮೂರು ಬಾರಿ ಜಿಲ್ಲೆಯನ್ನು ಪ್ರತಿನಿಧಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ ಒಂದು ಸಣ್ಣ ಗುಡಿ ಕೈಗಾರಿಕೆಯನ್ನು ಸಹ ತರುವ ಪ್ರಯತ್ನ ಮಾಡಿಲ್ಲ. ಕಳೆದ ಐದು ವರ್ಷದಲ್ಲಿ 10 ಸಾವಿರ ಅನುದಾನ ತಂದಿರುವುದಾಗಿ ಅಪ್ಪಟ ಸುಳ್ಳು ಹೇಳುತ್ತಿರುವ ಸಿದ್ದೇಶ್ವರ್ ರೂಪಾಯಿ, ರೂಪಾಯಿಗೂ ಲೆಕ್ಕ ನೀಡಿ, ತಂದಿರುವ ಅನುದಾನದ ಬಗ್ಗೆ ಸಾಬೀತು ಪಡಿಸಿದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸವಾಲು ಹಾಕಿದರು.

ಶಾಸನಬದ್ಧ ಅನುದಾನವೇ ಸಾಧನೆ:

       ಸಿದ್ದೇಶ್ವರ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಐದು ಸಾವಿರ ಕೋಟಿ ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಹೆದ್ದಾರಿ ಅಭಿವೃದ್ಧಿಗೆ ವಾಸ್ತವದಲ್ಲಿ 100 ಕೋಟಿ ರೂ. ಸಹ ಅನುದಾನ ಬಂದಿಲ್ಲ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಒಂದು ಸಾವಿರ ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ, ನಮ್ಮ ಪಾಲಿಕೆ ಸದಸ್ಯರು, ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಕೈಗೊಂಡಿರುವ ಅಭಿವೃದ್ಧಿಯ ಹಿನ್ನೆಲೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಪರಿಣಾಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 500 ಕೋಟಿ ಅನುದಾನ ನೀಡಿವೆ ಅರಿಯಲಿ ಎಂದರು.

         ಕಳೆದ ಐದು ವರ್ಷದ ಅವಧಿಯಲ್ಲಿ ವಾರ್ಷಿಕ ಸಿಗುವ ಶಾನಬದ್ಧ ಅನುದಾನ ಐದು ಕೋಟಿಯಂತೆ ಜಿಲ್ಲೆಗೆ 25 ಕೋಟಿ ರೂ. ಅನುದಾನ ತಂದಿರುವುದೇ ಸಿದ್ದೇಶ್ವರ್ ಸಾಧನೆಯಾಗಿದೆ ಎಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಯಾಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೊಂಡು ಮತ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ಗೆ ಶುಕ್ರದೆಸೆ:

        ಕಾಂಗ್ರೆಸ್ ಎಲ್ಲಾ ಜಾತಿ-ಧರ್ಮಗಳ ಜನರನ್ನು ಪ್ರೀತಿಸುವ ಪಕ್ಷವಾಗಿದ್ದು, ನಮ್ಮ ಪಕ್ಷದ ಜೊತೆಗೆ ಬ್ರಾಹ್ಮಣ, ವೀರಶೈವ-ಲಿಂಗಾಯತ, ಅಹಿಂದ ಸಮುದಾಯ ಸೇರಿದಂತೆ ಎಲ್ಲಾ ವರ್ಗದ ಜನರಿದ್ದು, ಈ ಬಾರಿ ಹಾಲುಮತ ಸಮಾಜದ ಬೋಣಿಗೆಯೊಂದಿಗೆ 25 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ದಾವಣಗೆರೆ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದು, ಕುರುಬ ಸಮಾಜದಿಂದ ಪಕ್ಷಕ್ಕೆ ಮತ್ತೆ ಶುಕ್ರದೆಸೆ ಆರಂಭವಾಗಲಿದ್ದು, ಪಕ್ಷದ ಕಾರ್ಯಕರ್ತರು ಈಗಾಗಲೇ ನಮ್ಮ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವ ಜೆಡಿಎಸ್, ಕಮ್ಯುನಿಷ್ಟ್ ಪಕ್ಷಗಳ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

          ವೀಕ್ಷಕ ಮಲ್ಲೇಶಪ್ಪ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ತಂಡಗಳನ್ನು ಮಾಡಿಕೊಂಡು, ಜಿಲ್ಲೆಯ ತಾಂಡ, ಎಕೆ ಕಾಲೋನಿ ಸೇರಿದಂತೆ ಪರಿಶಿಷ್ಟ ಜಾತಿಯ ಜನರು ನೆಲೆಸಿರುವ ಕಡೆಗಳಲ್ಲಿ ಹೋಗಿ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಗೂ ಈಗಿನ ಮೈತ್ರಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮನವರಿಕೆ ಮಾಡಿಕೊಡಬೇಕು ಹಾಗೂ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ, ದಲಿತರಿಗೆ ಆಗುವ ಅನ್ಯಾಯವನ್ನು ತಿಳಿಸಿಕೊಟ್ಟು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.

         ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಎಸ್.ಮಲ್ಲಿಕಾರ್ಜುನ್ ನಿರೂಪಿಸಿದರು.

         ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಬಸವರಾಜ, ಮಾಜಿ ಮೇಯರ್ ಹೆಚ್.ಬಿ.ಗೋಣೆಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುಖಂಡರಾದ ಬಳ್ಳಾರಿ ಷಣ್ಮುಖಪ್ಪ, ಎ.ನಾಗರಾಜ್, ಅರಸೀಕೆರೆ ಪೂಜಾರ್ ಮರಿಯಣ್ಣ, ಹನುಮಂತಪ್ಪ, ಬಸವರಾಜ ಡಗ್ಗಿಬಸಾಪುರ, ಹಲಗೇರಿ ಮಂಜಪ್ಪ, ಪ್ರಭಾಕರ್, ರಮೇಶ್, ಎನ್.ರಂಗಸ್ವಾಮಿ, ಟಿ.ರಂಗನಾಥ್, ಬಿ.ಎಂ.ಈಶ್ವರ್, ತಮ್ಮಣ್ಣ, ಪರಸಪ್ಪ, ಆನಂದಪ್ಪ, ರಾಮಯ್ಯ, ಬಸವನಾಳ್ ಹಾಲೇಶ್, ಚಂದ್ರಣ್ಣ, ಉಮಾಮಹೇಶ್ವರ್, ಎಲ್.ಹೆಚ್.ಸಾಗರ್, ಇಟ್ಟಿಗುಡಿ ಮಂಜುನಾಥ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link