ಬೆಂಗಳೂರು
ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇವಲ ಒಂದು ತಿಂಗಳಲ್ಲಿ 4 ಕಡೆಗಳಲ್ಲಿ ಇರಿದು ಸುಲಿಗೆ ಮಾಡಿದ್ದ ಕುಖ್ಯಾತ ರೌಡಿ ಜಯಂತ್ ಕಾಲಿಗೆ ಗುಂಡು ಹೊಡೆದು ನೆಲಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಒಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಚಾಕುವಿನಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದ ಸೋಲೂರಿನ ಹಾಲನೂರಿನ ರೌಡಿ ಜಯಂತ್(23)ನೆಲಮಂಗಲದ ಬಲಗಾಲಿಗೆ ಪೊಲೀಸರ ಗುಂಡೇಟು ತಗುಲಿ ಗಾಯಗೊಂಡು ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುಲಿಗೆ, ದರೋಡೆ ಕಳ್ಳತನ ಡಕಾಯಿತಿ ಸೇರಿ 25ಕ್ಕೂ ಹೆಚ್ಚು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜಯಂತ್ ಕೂದೂರು ಹಾಗೂ ದಾಬಸ್ಪೇಟೆ ಪೊಲೀಸ್ ಠಾಣೆಗಳ ರೌಡಿಪಟ್ಟಿಯಲ್ಲಿದ್ದನು.ದರೋಡೆ,ಡಕಾಯಿತಿ, ಸುಲಿಗೆ ಸೇರಿ 25ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜಯಂತ್ ಕಳ್ಳತನ ಕೃತ್ಯವೊಂದರಲ್ಲಿ ಬಂಧಿತನಾಗಿ ಜೈಲಿಗೆ ಸೇರಿ ಜಾಮೀನ ಮೇಲೆ ಒಂದು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ರಾಮ್ನಿವಾಸ್ ತಿಳಿಸಿದ್ದಾರೆ.
ಸಹಚರ ಕೂದೂರಿನ ಸೀನ(21)ನ ಜೊತೆ ಸೇರಿ ಒಂದು ತಿಂಗಳಲ್ಲಿಯೇ ಮೂರು ಕಡೆಗಳಲ್ಲಿ ಸುಲಿಗೆ ಒಂದು ಕಳ್ಳತನ ಕೃತ್ಯ ನಡೆಸಿ ತಲೆಮರೆಸಿಕೊಂಡಿದ್ದ.ಸುಲಿಗೆ ಕೃತ್ಯಗಳನ್ನು ದಾಖಲಿಸಿದ್ದ ನೆಲಮಂಗಲ ಪೊಲೀಸರು ಜಯಂತ್ಗಾಗಿ ಹುಡುಕಾಟ ನಡೆಸಿದಾಗ ಆತ ಬೈಕ್ನಲ್ಲಿ ಇಂದು ಮುಂಜಾನೆ ನೆಲಮಂಗಲ ತಾಲೂಕಿನ ವೀರನಂಜೀಪುರ ಗೇಟ್ ಬಳಿ ಬೈಕ್ನಲ್ಲಿ ಸೀನ ಜೊತೆ ಹೋಗುತ್ತಿರುವ ಖಚಿತ ಮಾಹಿತಿ ಪತ್ತೆಯಾಗಿದೆ.
ಪಿಎಸ್ಐ ಮೇಲೆ ಹಲ್ಲೆ
ಕೂಡಲೇ ನೆಲಮಂಗಲ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡು ಸ್ಥಳಕ್ಕೆ ಧಾವಿಸಿ ಬೈಕ್ನಲ್ಲಿ ಹೋಗುತ್ತಿದ್ದ ಜಯಂತ್ನನ್ನು ಅಡ್ಡಗಟ್ಟಿದ್ದಾರೆ ಬೈಕ್ನಿಂದ ಇಳಿದು ಓಡಿ ಹೋಗಲು ಯತ್ನಿಸಿದ ಜಯಂತ್ನನ್ನು ಬೆನ್ನಟ್ಟಿ ಹೋಗಿ ಹಿಡಿಯಲು ಹೋದ ಕುಮಾರಸ್ವಾಮಿ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆತನ ಮೇಲೆ ಮತ್ತೊಂದು ಗುಂಡು ಹಾರಿಸಿದ್ದು ಅದು ಬಲಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾನೆ ಆತ ಅಲ್ಲದೇ ಜೊತೆಯಲ್ಲಿದ್ದ ಸೀನನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪಿಎಸ್ಐ ಕುಮಾರಸ್ವಾಮಿಯವರ ಎಡಗೈಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
