ದಾವಣಗೆರೆ:
ವಾಹನ ಚಾಲಕರಿಗೆ ಡಿಎಲ್ ಪಡೆಯಲು ಕೇಂದ್ರ ಸರ್ಕಾರ 8ನೇ ತರಗತಿ ಉತ್ತೀರ್ಣ ಕಡ್ಡಾಯ ಗೊಳಿಸಿರುವ ಹಿನ್ನೆಲೆಯಲ್ಲಿ 18 ವರ್ಷವಾದವರು ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾ 3-4 ಚಕ್ರ ಸರಕು ವಾಹನಗಳ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಳನಿಸ್ವಾಮಿ ತಿಳಿಸಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ಮಂದಿ ಚಾಲಕರು ಅನಕ್ಷರಸ್ಥರಾಗಿದ್ದು, ಕ್ಲೀನರ್ ಕೆಲಸದಿಂದ ಆರಂಭಿಸಿ ಚಾಲಕರಾಗಿರುತ್ತಾರೆ. ಆದರೆ, ಬಹುತೇಕ ಚಾಲಕರಿಗೆ ಚಾಲನ ಪರವಾನಿಗೆ ಇಲ್ಲವಾಗಿದೆ. ಆದ್ದರಿಂದ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಡಿಎಲ್ ಇಲ್ಲದ ಕಾರಣಕ್ಕೆ ವಿಮಾ ಕಂಪನಿಗಳು ಪರಿಹಾರ ನಿರಾಕರಿಸುತ್ತಿವೆ. ಆದ್ದರಿಂದ ಎಲ್ಲರೂ ಚಾಲನಾ ಪರವಾನಿಗೆ ಹೊಂದುವುದು ಅತ್ಯವಶ್ಯವಾಗಿದೆ ಎಂದರು.
ಕೇಂದ್ರ ಸರ್ಕಾರ 2008ರಲ್ಲಿ ವಿದ್ಯಾರ್ಹತೆ ನಿಯಮ ಜಾರಿಗೆ ತಂದಿದ್ದು, 2018ರವರೆಗೆ ಸುಮಾರು 55,011 ಸಾರಿಗೆ ವಾಹನಗಳು ನೋಂದಣಿಯಾಗಿವೆ. ಆದರೆ, ಕೇವಲ 21,124 ಜನರು ಮಾತ್ರ ವಾಹನ ಚಾಲನೆ ಪರವಾನಿಗೆ ಹೊಂದಿದ್ದಾರೆ. ಇನ್ನುಳಿದ ಸರಿಸುಮಾರು 33,887 ವಾಹನಗಳು ಹಳದಿ ಬೋರ್ಡ್ ವಾಹನ ಚಾಲನೆ ಪರವಾನಿಗೆ ಇಲ್ಲದೆ ಚಲಿಸುತ್ತಿವೆ. ಆದ್ದರಿಂದ ಡಿಎಲ್ ಪಡೆಯಲು 8ನೇ ತರಗತಿ ಪಾಸ್ ಆಗುವುದು ಕಡ್ಡಾಯವಾಗಿದೆ.
ಇದನ್ನು ಮನಗಂಡ ನಮ್ಮ ಸಂಘವು ದಾವಣಗೆರೆಯ ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್.ರಮೇಶ ಹಾಗೂ ಡಿಡಿಪಿಇ ಕೋದಂಡರಾಮ ಜೊತೆಗೆ ಚರ್ಚಿಸಿ, ಚಾಲಕರಿಗೆ 8ನೇ ತರಗತಿ ಪರೀಕ್ಷೆ ತೆಗೆದುಕೊಳ್ಳಲು ನೆರವಾಗಿತ್ತು. ಇದೀಗ ಚಿತ್ರದುರ್ಗ ಡಿಸಿ ಆರ್.ಗಿರೀಶ, ಡಿಡಿಪಿಇ ಅಂಥೋಣಿ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಪರೀಕ್ಷೆ ತೆಗೆದುಕೊಳ್ಳುವ ಚಾಲಕರು ಹೆಚ್ಚಿನ ಮಾಹಿತಿಗಾಗಿ ದೂ:96112 29635, 83108 99735, 63612 26997 ಸಂಪರ್ಕಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಸುವರ್ಣ ಕರ್ನಾಟಕ ವೇದಿಕೆಯ ಅಧ್ಯಕ್ಷ ಆರ್.ಸಂತೋಷ ಕುಮಾರ, ಶಾಂತಪ್ಪ, ಕುಮಾರ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
