ರಾಯಚೂರು
ಈ ಮೊದಲು ರಾಜ್ಯದಲ್ಲಿ ಶಾಖೋತ್ಪನ್ನ ಸ್ಥಾವರಗಳಿಂದಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಈಗ ಇಂಧನ ಮೂಲಗಳು ಬದಲಾಗಿವೆ. ಇದರಿಂದ ದುಬಾರಿಯಾಗುವ ಕಲ್ಲಿದ್ದಿಲ್ಲು ಆಧಾರಿತ ಶಾಖೋತ್ಪನ್ನ ಸ್ಥಾವರಗಳ ಕೆಲಸ ಕಡಿಮೆಯಾಗಿದೆ. ಜೊತೆಗೆ ರಾಜ್ಯದಲ್ಲಿ ಲಾಕ್ಡೌನ್ ಹಾಗೂ ಮಳೆಯಾಗುತ್ತಿರುವುದರಿಂದ ಶಾಖೋತ್ಪನ್ನ ಸ್ಥಾವರಗಳಿಗೆ ವಿಶ್ರಾಂತಿ ನೀಡಲಾಗಿದೆ.
ರಾಜ್ಯದಲ್ಲಿ ಶೇ.60ರಷ್ಟು ವಿದ್ಯುತ್ ಶಾಖೋತ್ಪನ್ನ ಸ್ಥಾವರಗಳಿಂದಲೇ ಉತ್ಪಾದನೆಯಾಗುವ ಕಾಲ ಒಂದಿತ್ತು. ಆದರೆ ಈಗ ಜಲಮೂಲ, ಪವನ ಶಕ್ತಿ, ಸೌರಶಕ್ತಿಯಿಂದಲೂ ವಿದ್ಯುತ್ ಉತ್ಪಾದನೆಯಾಗುತ್ತದೆ. ಕಲ್ಲಿದ್ದಲು ಉರಿಸಿ ಉತ್ಪಾದಿಸುವ ಶಾಖೋತ್ಪನ್ನ ಸ್ಥಾವರದ ವಿದ್ಯುತ್ ಉತ್ಪಾದನೆಯ ವೆಚ್ಚ ಅಧಿಕವಾಗುತ್ತದೆ. ಈ ಕಾರಣಕ್ಕಾಗಿ ಅವಶ್ಯವಿದ್ದಾಗ ಮಾತ್ರ ಶಾಖೋತ್ಪನ್ನ ಸ್ಥಾವರಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಈಗ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆ ಲಾಕ್ಡೌನ್ನಿಂದಾಗಿ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಈ ಕಾರಣಕ್ಕಾಗಿ ಈಗ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ವಿದ್ಯುತ್ ಬೇಡಿಕೆಗೆ ತಕ್ಕಂತೆ ಜಲ, ಪವನ ಹಾಗೂ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ರಾಜ್ಯದ ನಾಲ್ಕು ವಿದ್ಯುತ್ ಸ್ಥಾವರಗಳಾದ ರಾಯಚೂರು, ಯರಮರಸ್, ಬಳ್ಳಾರಿ ಹಾಗು ಉಡುಪಿ ಶಾಖೋತ್ಪನ್ನ ಸ್ಥಾವರಗಳು ಈಗ ಸಂಪೂರ್ಣವಾಗಿ ಉತ್ಪಾದನೆ ಸ್ಥಗಿತಗೊಳಿಸಿವೆ.
ರಾಜ್ಯದಲ್ಲಿ ಈಗ 6115 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಸೌರ, ಪವನ, ಹಾಗೂ ಜಲಮೂಲದಿಂದ 3700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಜಲಮೂಲದಿಂದ 1229 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾದರೆ, ಇನ್ನೂ ಆರ್ ಟಿಪಿಎಸ್, ಬಿಟಿಪಿಎಸ್, ವೈಟಿಪಿಎಸ್ ಹಾಗೂ ಯುಪಿಸಿಎಲ್ ನಿಂದ ಒಟ್ಟು 2178 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈಗ ನಾಲ್ಕು ಶಾಖೋತ್ಪನ್ನ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
