ತುಮಕೂರು:
ತುಮಕೂರು ತಾಲ್ಲೂಕು ವಿಶ್ರಾಂತ ಸರ್ಕಾರಿ ಉದ್ಯೋಗಿಗಳ ಪತ್ತಿನ ಸಹಕಾರ ಸಂಘವು ಈಗ್ಗೆ 10 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದರೆ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಬಹುದಾಗಿತ್ತು. ತಡವಾಗಿ ಸ್ಥಾಪನೆಗೊಂಡಿದ್ದರೂ ಕೂಡ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ತುಮಕೂರು ತಾಲ್ಲೂಕು ವಿಶ್ರಾಂತ ಸರ್ಕಾರಿ ಉದ್ಯೋಗಿಗಳ ಪತ್ತಿನ ಸಹಕಾರ ಸಂಘದ 4ನೇ ವರ್ಷದ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ಸಾಹಿತಿ ನಾಗಣ್ಣ ಮಾತನಾಡಿ ಯಾವುದೇ ಸಹಕಾರ ಸಂಘಗಳು ಆರ್ಥಿಕವಾಗಿ ಬಲಗೊಳ್ಳಬೇಕಾದರೆ ಸದಸ್ಯರುಗಳು ಪಡೆಯುವ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ಸಂಘವು ಆರ್ಥಿಕವಾಗಿ ಬಲಗೊಂಡು ಸದಸ್ಯರಿಗೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡಬಹುದಲ್ಲದೆ, ತನ್ನದೇ ಆದ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡು ಸಹಕಾರ ಸಂಘಗಳ ತತ್ವದಡಿ ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸುಜಾತ 2017-18ನೇ ಸಾಲಿನ ವರದಿ ಓದಿದರು. ಉಪಾಧ್ಯಕ್ಷ ಎನ್.ರಂಗಪ್ಪ ಈ ಸಾಲಿನ ಆಡಿಟ್ ಆದ ಲೆಕ್ಕಪತ್ರಗಳನ್ನು, ಲಾಭ ನಷ್ಟಗಳನ್ನು ಮಂಡಿಸಿದರು. ನಿರ್ದೇಶಕ ಪಿ.ನರಸಿಂಹರೆಡ್ಡಿ ಆಯವ್ಯಯ ಮಂಡಿಸಿದರು. ಸಂಘದ ಅಧ್ಯಕ್ಷರಾದ ಎಂ.ಆರ್.ಬೋಬಡೆ ಮಾತನಾಡಿ ಎಲ್ಲಾ ನಿವೃತ್ತ ನೌಕರ ಬಂಧುಗಳು ಷೇರುದಾರರಾಗಿ , ಸಂಘದ ಪ್ರಗತಿಗೆ ಸಹಕರಿಸಬೇಕೆಂದು ಕೋರಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಎಸ್.ವೆಂಕಟರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಪುಟ್ಟನರಸಯ್ಯ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ