ಹರಿಹರ :
ನಮ್ಮಲ್ಲಿ ಇಂದು ಸಮಾಜದ ಸಂಘಟನೆ ಹೊಂದಾಣಿಕೆಯ ಕೊರತೆಯಿಂದ ತಿಂಗಳುಗಟ್ಟಲೆ ನಡೆಯಬೇಕಾದ ಧಾರ್ಮಿಕ ಸಭೆಗಳು ಕೇವಲ 2-3 ದಿನಗಳಿಗೆ ಸೀಮಿತವಾಗುತ್ತಿದೆ ಎಂದು ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ವಿಷಾದ ವ್ಯಕ್ತಪಡಿಸಿದರು.
ಅವರು ನಗರದ ದೇವಸ್ಥಾನ ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಜನಜಾಗೃತಿ ಧರ್ಮ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಸಮಾಜಗಳು ಇಂದು ತಮ್ಮ ಸಂಘಟನೆಗಳನ್ನು ಭದ್ರ ವಾಗಿಸಿಕೊಳ್ಳುವ ಸಂದರ್ಭದಲ್ಲಿ ನಮ್ಮವರು ಸಮಾಜದಲ್ಲಿ ಉಪ ಪಂಗಡಗಳನ್ನು ಸೃಷ್ಟಿಸಿಕೊಂಡು ಸಮಾಜದ ಶಕ್ತಿಯನ್ನು ಕೂಗಿಸಿ ಕೊಂಡಿದ್ದಾರೆ ಈ ನಿಟ್ಟಿನಲ್ಲಿ ಶ್ರೀ ರಂಭಾಪುರಿ ಶ್ರೀಗಳು ಅಚಲ ನಿರ್ಧಾರದಿಂದ ಮುಂದೆ ಒಂದು ದಿನ ನಮಗೆ ಜಯ ಲಭಿಸಲಿದೆ ಎಂದರು.
ಇಂದು ಸಮಾಜದಲ್ಲಿ ದುರ್ಜನರ ಅಟ್ಟಹಾಸ ಜಾಸ್ತಿಯಾಗುತ್ತಿದೆ ಇದಕ್ಕೆ ಕಾರಣ ಸಜ್ಜನರು ಸಂಸ್ಕಾರವಂತರು ಧ್ವನಿ ಎತ್ತದೆ ಇರುವುದೇ ಕಾರಣವಾಗಿದೆ ಆದ್ದರಿಂದ ಧರ್ಮಕ್ಕೆ ಕಂಟಕ ಬಂದಾಗ ಎಲ್ಲರೂ ಕೂಡ ಧ್ವನಿ ಎತ್ತಲೇ ಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸುಮಾರು ವರ್ಷಗಳಿಂದ ಪಂಚಪೀಠಗಳು ಧರ್ಮದ ಉದ್ಧಾರಕ್ಕಾಗಿ, ಧರ್ಮದ ರಕ್ಷಣೆಗಾಗಿ ಸಮಾಜವನ್ನು ರಕ್ಷಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿವೆ. ಈ ಹೋರಾಟದಲ್ಲಿ ಶ್ರೀ ರಂಭಾಪುರಿ ಶ್ರೀಗಳ ಪಾತ್ರ ಬಹಳ ಮುಖ್ಯವಾಗಿದೆ ಅದರ ಫಲವಾಗಿ ನಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ ಇತ್ತೀಚೆಗೆ ಧರ್ಮ,ಭಕ್ತಿ, ಆಚಾರ, ವಿಚಾರಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಅದೇ ರೀತಿ ಧರ್ಮ, ಭಕ್ತಿ, ಆಚಾರ, ವಿಚಾರಗಳ ಬಗ್ಗೆ ವಿರೋಧಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಏನೇ ಆದರೂ ಸಹ ಶ್ರೀಗಳಂತಹ ಧರ್ಮಗುರುಗಳು ಧರ್ಮದ ರಕ್ಷಣೆಗಿರುವತನಕ ಧರ್ಮಕ್ಕೆ ಯಾವುದೇ ಅಪಾಯ ಬಂದು ಒದಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವೀರಶೈವ ಪರಂಪರೆಯನ್ನು ಹೆಚ್ಚು ತಿಳಿಸುವಂತಹ ಉದ್ದೇಶದಿಂದ ಹರಿಹರ ನಗರದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಬಸವಣ್ಣನ ದೇವಸ್ಥಾನ ಮತ್ತು ರೇಣುಕಾಚಾರ್ಯ ಮಂಗಲ ಕಾರ್ಯಾಲಯ ಉದ್ಘಾಟನೆಯಾಗಿದೆ ಈ ಭವನ ಧರ್ಮದ ಬಹುಮುಖ ಕಾರ್ಯಗಳಿಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೊಟ್ಟೂರು ಕಟ್ಟಿಮನಿ ಹಿರೇಮಠದ ಡಾ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು,ಅವರಗೊಳ್ಳ ಪುರವರ್ಗಓಂಕಾರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ದಾವಣಗೆರೆ ಲೋಕಸಭಾ ಸದಸ್ಯ ಜಿಎಂ ಸಿದ್ದೇಶ್ವರ್ ,ಹರಿಹರ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಜಾತಾ , ನಗರಸಭಾ ಸದಸ್ಯರಾದ ಡಿ.ಉಜ್ಜೆಶ್,ಪಿ.ಎನ್. ವಿರೂಪಾಕ್ಷ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ ಚಿದಾನಂದಪ್ಪ, ಸಿರಿಗೆರೆ ಪರಮೇಶ ಗೌಡ್ರು, ಗಜಾಪುರ ಪ್ರವೀಣ್ ಕುಮಾರ್ ,ಎಚ್ ವಿಶ್ವನಾಥಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
