ಹೊಸದುರ್ಗ :
ಕಾನೂನಿಗೆ ವಿರುದ್ದವಾಗಿ ಮರಳು ತುಂಬಿದ್ದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸಿ ಪ್ರಸನ್ನ ಕುಮಾರ್ ತಿಳಿಸಿದರು.ತಾಲೂಕಿನ ವೇದಾವತಿ ನದಿ ಪಾತ್ರದಲ್ಲಿ ಸರಕಾರದ ನಿಯಮವಳಿ ಮೀರಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ರೈತ ಸಂಘದ ದೂರಿನ ಮೇರೆಗೆ ಕನ್ನಾಗೊಂದಿ ಮರಳು ಬ್ಲಾಕ್ಗೆ ಬುಧವಾರ ಭೇಟಿ ನೀಡಿ ಮಾತನಾಡಿದರು.
ಮರಳು ನೀತಿ ಇಡೀ ರಾಜ್ಯಕ್ಕೆ ಅನ್ವಯಿಸುತ್ತವೆ. ಪ್ರದೇಶಕ್ಕನುಗುಣವಾಗಿ ನಿಯಮಗಳನ್ನು ಬದಲಾಯಿಸಲು ಬರುವುದಿಲ್ಲ. ಕೊಳವೆಬಾವಿ ಮತ್ತು ನೀರಿನ ಲಭ್ಯತೆ ಇರುವ ಕಡೆ ಮರಳು ತೆಗೆಯಬಾರದು. ಸರ್ವೇ ಮಾಡಿ ಗಡಿ ಗುರುತಿಸಿ ಸಿಸಿ ಕ್ಯಾಮರೆ ಅಳವಡಿಸಬೇಕು ಎಂದು ಆದೇಶ ನೀಡಿದರು.
ನಂತರ ಪೊಲಿಸ್ ಹಾಗೂ ಡಿಎಂಜಿ ಸಿಬ್ಬಂದಿಯವರು ಪ್ರತಿದಿನ ತಹಸೀಲ್ದಾರ್ ಕಚೇರಿಯಲ್ಲಿ ಹಾಜರಾತಿ ಪಡೆದು ಪ್ರತಿ ಮರಳು ಬ್ಲಾಕ್ನಲ್ಲಿ ಕರ್ತವ್ಯ ನಿರ್ವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆದೇಶ ನೀಡಿದರು.
ಈ ವೇಳೆ ಅಡಿಷನಲ್ ಎಸ್ಪಿ ನಂದಗಾವಿ, ತಹಸೀಲ್ದಾರ್ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ಪೈಜುಲ್ಲಾ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕಾರಿಗಳು, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ, ತಾಲೂಕು ಅಧ್ಯಕ್ಷ ಮಹೇಶ್ವರಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
