ದಾವಣಗೆರೆ
ತರಳಬಾಳು ಬೃಹನ್ಮಠದ ಸಾಣೇಹಳ್ಳಿ ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ ಹೇಳಿಕೆ ನೀಡಿರುವ, ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರ ನಗರದ ಜನ ಸಂಪರ್ಕ ಕಚೇರಿಯ ಮೇಲಿರುವ ನಾಮಫಲಕಕ್ಕೆ ಮಸಿ ಬಳಿದು ಸೋಮವಾರ ಶಿವಸೈನ್ಯ ಯುವಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಪಿ.ಬಿ. ರಸ್ತೆಯಲ್ಲಿರುವ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಜನಸಂಪರ್ಕ ಕಚೇರಿ ಎದುರು ಜಮಾಯಿಸಿದ ಸಾಣೇಹಳ್ಳಿ ಮಠದ ಭಕ್ತರು, ಸಾದರ ಸಮಾಜದವರು ಕಚೇರಿಯ ನಾಮಫಲಕಕ್ಕೆ ಮಸಿ ಬಳಿದು, ರಘು ಆಚಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಭಕ್ತರು ಮಠಗಳಿಗೆ ಹೋಗುವುದು ತೆವಲಿಗಾಗಿ ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಹೇಳಿಕೆ ನೀಡಿದ್ದಾರೆ. ಮಠಗಳಿಗೆ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಡಾ.ಜಿ.ಪರಮೇಶ್ವರ, ಹೆಚ್.ಡಿ.ದೇವೇಗೌಡ ಸೇರಿದಂತೆ ಅನೇಕ ರಾಜಕಾರಣಿಗಳು ಹೋಗುತ್ತಾರೆ. ಇವರೆಲ್ಲರೂ ಯಾವ ತೆವಲಿಗೆ ಮಠಗಳಿಗೆ ಹೋಗುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಮಠದ ಭಕ್ತ ಎಂ.ಶಿವಕುಮಾರ, ಸಾಣೇಹಳ್ಳಿಯಲ್ಲಿ ನಡೆದ ನಾಟಕೊತ್ಸವದಲ್ಲಿನ ಸಾಣೇಹಳ್ಳಿ ಶ್ರೀಗಳ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿಕೊಂಡ ರಘು ಆಚಾರ್, ಪಂಡಿತಾರಾಧ್ಯ ಸ್ವಾಮಿಗಳ ಬಗ್ಗೆ ಉದ್ಧಟತನದಿಂದ ಮಾತನಾಡಿದ್ದಾರೆ. ತಮಗೆ ಸಂಬಂಧವೇ ಇಲ್ಲದ ವಿಷಯವಾಗಿ ರಘು ಆಚಾರ್ ಹೇಳಿಕೆ ನೀಡಿರುವುದು ತರಳಬಾಳು ಮಠಕ್ಕೆ ಮಾತ್ರವಲ್ಲದೆ, ಸಮಸ್ತ ಧಾರ್ಮಿಕ ಶ್ರದ್ಧಾಕೇಂದ್ರಗಳ ಭಕ್ತವೃಂದ ಮತ್ತು ಅಭಿಮಾನಿಗಳಿಗೆ ಮಾಡಿರುವ ಅಪಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಮಮಾರ್ಗದಲ್ಲಿ ಗೆದ್ದಿರುವ ರಘು ಆಚಾರ್ ರಾಜಕೀಯವನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. ಸಾಮಾನ್ಯ ಜನರಿಗೆ ಇವರ ಪರಿಚಯವೇ ಇಲ್ಲ. ಇಂತಹ ವ್ಯಕ್ತಿಯು ಸಾಣೇಹಳ್ಳಿ ಶ್ರೀಗಳ ವಿರುದ್ಧ ಮಾತನಾಡಿರುವುದು ಸಾದರ ಸಮಾಜಕ್ಕೆ ನೋವುಂಟು ಮಾಡಿದೆ. ಇವರ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವವರೆಗೂ ನಾಡಿನಾದ್ಯಂತ ನಿರಂತರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರಾದ ಎಂ.ಶಿವಕುಮಾರ, ಶಿವಕುಮಾರಸ್ವಾಮಿ ಕುರ್ಕಿ, ಶಶಿಧರ, ವಿನಯ ಕುಮಾರ, ನಿರ್ಮಲಮ್ಮ, ವೀಣಾ ಮಂಜುನಾಥ, ವನಜಾ ಮಹಾಲಿಂಗಯ್ಯ, ಬಿ.ಸಿದ್ದಯ್ಯ, ಕೆ.ಆರ್.ಸಿದ್ದಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
