ಸಾಂಕ್ರಾಮಿಕ ಕಾಯಿಲೆ ಕಡಿವಾಣಕ್ಕೆ ಮುಂಜಾಗ್ರತೆ ಅವಶ್ಯ

ದಾವಣಗೆರೆ:

     ಜಿಲ್ಲೆಯಲ್ಲಿ ಈಗಾಗಲೇ ಕರಳುಬೇನೆ, ವಾಂತಿ-ಬೇಧಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಕೆಲ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚಿಸಿದೆ.

      ಸಾಮಾನ್ಯವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನಿಂದ ಕಾಲರಾ, ಕರುಳುಬೇನೆ, ವಾಂತಿ ಭೇದಿ, ಅತಿಸಾರ ಭೇಧಿ, ಕಾಮಾಲೆ, ವಿಷಮಶೀತ ಜ್ವರ ಸೇರಿದಂತೆ ಇತರೆ ಸಾಂಕ್ರಾಮಿಕ ಖಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಿರಲಿದೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕೆಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.

       ಗ್ರಾಮಾಂತರ ಪ್ರದೇಶದಲ್ಲಿ ಎಲ್ಲಾ ಕುಡಿಯುವ ನೀರಿನ ಮೂಲಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿ ಕಲುಷಿತವಾಗಿರುವ ಮೂಲಗಳನ್ನು ತಕ್ಷಣ ಕ್ಲೋರಿನೇಷನ್ ಮಾಡಿಸಬೇಕು. ಲಿಕೇಜ್‍ಗಳನ್ನು ಪತ್ತೆ ಹಚ್ಚಿ ಸರಿಪಡಿಸಬೇಕು. ಗ್ರಾಮ ಮಟ್ಟದಲ್ಲಿ ರೋಗ ಉಲ್ಬಣಗೊಂಡಾಗ ಕುಡಿಯುವ ನೀರಿಗೆ ಹ್ಯಾಲೋಜಿನ್ ಮಾತ್ರೆಗಳನ್ನು ಉಪಯೋಗಿಸಬೇಕು. ವೈಯಕ್ತಿಕ ಸ್ವಚ್ಛತೆ, ಶುದ್ದ ಕುಡಿಯುವ ನೀರು ಹಾಗೂ ಆಹಾರದ ಸಂರಕ್ಷಣೆ, ಪರಿಸರ ನೈರ್ಮಲ್ಯದ ನಿರ್ವಹಣೆ ಕಡೆಗೆ ನಿಗಾ ವಹಿಸಬೇಕೆಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

       ರಸ್ತೆ ಬದಿಗಳಲ್ಲಿ ಮಾರುವ ಕತ್ತರಿಸಿದ ಹಣ್ಣು ಹಾಗೂ ತೆರಿದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್ ಮತ್ತು ಅಂಗಡಿಗಳ ತಪಾಸಣೆ ನಡೆಸಿ, ಆಹಾರ ಮತ್ತು ನೀರಿನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ತುರ್ತು ಸಂದರ್ಭಗಳಲ್ಲಿ ಬಿಸಿನೀರು ಸರಬರಾಜು ಮಾಡಲು ಹೋಟೆಲ್ ಮಾಲೀಕರು ಸಹ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

       ಗ್ರಾಮ ಪಂಚಾಯತಿ ಮತ್ತು ಗ್ರಾಮ ಆರೋಗ್ಯ, ನೈರ್ಮಲ್ಯ ಸಮಿತಿಗಳು ನೀರು ಸಂಗ್ರಹಿಸುವ ಟ್ಯಾಂಕ್‍ಗಳನ್ನು ಕನಿಷ್ಟ 20 ದಿನಗಳಿಗೊಮ್ಮೆ ಬ್ಲೀಚಿಂಗ್ ಪೌಡರ್‍ನಿಂದ ಸ್ವಚ್ಛಗೊಳಿಸಬೇಕು. ಕುಡಿಯುವ ನೀರು ಕಲುಷಿತವಾಗದಂತೆ ಪೂರೈಕೆ ವ್ಯವಸ್ಥೆಯಲ್ಲಿನ ಸೋರುವಿಕೆಯನ್ನು ಗುರುತಿಸಿ ತಕ್ಷಣ ದುರಸ್ಥಿಗೊಳಿಸಬೇಕು. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವ ಜೊತೆಗೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಬೇಕು.

       ಸೂಕ್ತ ಚಿಕಿತ್ಸೆಗಾಗಿ ಅಗತ್ಯವಾದ ಜೀವರಕ್ಷಕ ಔಷಧಿ ಹಾಗೂ ಕ್ರಿಮಿನಾಶಕಗಳು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆರೋಗ್ಯ ಕೇಂದ್ರ, ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯ ಇವೆ. ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ಔಷಧಿಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಅಂಡ್ ಲಾಜಿಸ್ಟಿಕ್, ವೇರ್‍ಹೌಸ್ ಸೊಸೈಟಿ(ಕೆ.ಡಿ.ಎಲ್.ಡಬ್ಯೂ.ಎಸ್) ಇವರಿಂದ ಪಡೆಯಲಾಗುವುದು. ಲಭ್ಯವಿಲ್ಲದ ಪಕ್ಷದಲ್ಲಿ ಎನ್‍ಎಫ್‍ಡಿಎಸ್ ಅನುದಾನದಿಂದ ಖರೀದಿಸಲಾಗುವುದು. ಓಆರ್‍ಎಸ್ ಹಾಗೂ ಹ್ಯಾಲೋಜಿನ್ ಮಾತ್ರೆಗಳು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇವೆ.

        ಜಿಲ್ಲಾ, ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆರೋಗ್ಯ ಕೇಂದ್ರ ಮಟ್ಟದಲ್ಲಿ ಕ್ಷಿಪ್ರ ಕಾರ್ಯಪಡೆ ರಚಿಸಿ, ರೋಗಪೀಡಿತ ಸ್ಥಳಕ್ಕೆ ಧಾವಿಸಲು ಸೂಚಿಸಲಾಗಿದೆ. ಕ್ಷಿಪ್ರ ಕಾರ್ಯಪಡೆ ತಂಡವನ್ನು ತಕ್ಷಣ ಖಾಯಿಲೆಪೀಡಿತ ಸ್ಥಳಕ್ಕೆ ಕಳುಹಿಸಿ, ಗ್ರಾಮದಲ್ಲಿಯೇ ಒಂದು ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ರೋಗವು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ದಿನದ 24 ಗಂಟೆ ನಿಗಾವಣೆ ಹಾಗೂ ವೈದ್ಯಕೀಯ ಸೇವಾ ಸೌಲಭ್ಯ ನೀಡಲಾಗುವುದು.

     ಗಂಭೀರ ಸ್ವರೂಪದ ರೋಗಿಗಳನ್ನು ಆಂಬುಲೆನ್ಸ್ ಮೂಲಕ ಹತ್ತಿರದ ತಾಲ್ಲೂಕು/ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಕಲುಷಿತ ಕುಡಿಯುವ ನೀರು, ಆಹಾರದಂತಹ ಸಾಂಕ್ರಾಮಿಕ ರೋಗಗಳ ಕಾರಣವನ್ನು ಗುರುತಿಸಿ, ಪರ್ಯಾಯ ವ್ಯವಸ್ಥೆಯಲ್ಲಿ ಸುರಕ್ಷಿತ ನೀರು ಪೂರೈಸಲು ಹಾಗೂ ಸೋರುವಿಕೆಯನ್ನು ತಡೆಗಟ್ಟಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ.

      ಸಾಂಕ್ರಾಮಿಕ ರೋಗಗಳು ಹರಡದಂತೆ ರೋಗಪೀಡಿತ ಪ್ರದೇಶದಲ್ಲಿ ಸಕ್ರಿಯ ರೋಗ ಸಮೀಕ್ಷೆ ಕಾರ್ಯವನ್ನು ರೋಗವು ಸಂಪೂರ್ಣವಾಗಿ ಹತೋಟಿಗೆ ಬಂದ ಹತ್ತು ದಿನಗಳವರೆಗೆ ಮುಂದುವರೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ತ್ರಿಪುಲಾಂಭ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link