ಚಿತ್ರದುರ್ಗ
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಿಂದಿನ ಶಾಸಕರಾಗಿದ್ದ ಹೆಚ್.ಆಂಜನೇಯ ಅವರು ತಂದಿರುವ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ತಾವೇ ತಂದಿದ್ದು ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ
ಶಾಸಕರಾದ ಚಂದ್ರಪ್ಪರವರು ಕ್ಷೇತ್ರದ ಅಭಿವೃದ್ದಿಗೂ ತೊಡಕಾಗಿದ್ದಾರೆ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯಲು ಸಹ ಅಡ್ಡಿ ಮಾಡುತ್ತಿದ್ದಾರೆ ಎಂದು ಶುಕ್ರವಾರ ಕಾಂಗ್ರೆಸ್ ಮುಖಂಡರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಮಾತನಾಡಿ, ಅಂಜನೇಯರವರು ಸಚಿವರಾಗಿದ್ದ ಸಮಯದಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಕೋಟ್ಯಾಂತರ ರೂ.ಗಳನ್ನು ವಿವಿಧ ಯೋಜನೆಯ ಮೂಲಕ ಹಾಕಿಸಿದ್ದಾರೆ ಅದರಲ್ಲಿ ಅವರ ಅವಧಿಯಲ್ಲಿ ಕೆಲವು ಕಾಮಗಾರಿಗಳು ಪ್ರಾರಂಭವಾದವು ಮತ್ತೇ ಕೆಲವು ತಾಂತ್ರಿಕ ಕಾರಣಗಳಿಂದ ಈಗ ಕಾಮಗಾರಿಗಳು ಪ್ರಾರಂಭವಾಗುತ್ತಿವೆ. ಶಾಸಕರಾಗಿ ಕಾಮಗಾರಿಗೆ ಚಾಲನೆ ನೀಡುವುದು ಅವರ ಕೆಲಸವಾಗಿದೆ ಆದರೆ ಸಭೆ, ಸಮಾರಂಭಗಳಲ್ಲಿ ಈ ಅನುದಾನವನ್ನು ನಾನು ತಂದಿದ್ದು ಎಂದು ಹೇಳುವುದರ ಮೂಲಕ ಕ್ಷೇತ್ರದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಸರ್ಕಾರದ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಭೀವೃದ್ದಿಗಾಗಿ 300 ಕೋಟಿ ರೂ.ಗಳನ್ನು ತಂದಿರುವುದಾಗಿ ತಿಳಿಸಿದ್ದಾರೆ ಅದನ್ನು ಯಾವ ಯೋಜನೆಯಡಿ, ಯಾವ ಕಾಮಗಾರಿಗೆ, ಎಷ್ಟು ಅನುದಾನ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಆಗ್ರಹಿಸಿದ್ದು, ಹಿಂದಿನ ಸರ್ಕಾರದಲ್ಲಿ ಆದ ಕಾಮಗಾರಿಗಳಿಗೆ ಈಗ ಚಾಲನೆ ನೀಡಲಾಗುತ್ತಿದ್ದು ಬೇರೆಯವರು ಮಾಡಿದ ಕಾರ್ಯವನ್ನು ತನ್ನದು ಎಂದು ಹೇಳುವುದು ಸರಿಯಲ್ಲ ಎಂದು ಶಿವಮೂರ್ತಿ ಶಾಸಕರ ಕಾರ್ಯ ವೈಖರಿಯನ್ನು ಟೀಕಿಸಿದರು.
ಸರ್ಕಾರ ಗಂಗಾಕಲ್ಯಾಣ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಸಹಾಯವನ್ನು ಮಾಡಲಾಗಿದೆ ಇದರಿಂದ ಕೆಲವರಿಗೆ ಕೊಳವೆಬಾವಿಯನ್ನು ಕೊರಯಲಾಗಿದೆ ಆದರೆ ಮೋಟಾರು ಪಂಪ್ ನೀಡಿಲ್ಲ ವಿದ್ಯುತ್ ಸಂಪರ್ಕ ಕೊಡಿಸಿಲ್ಲ ಇದರಿಂದ ಬಾವಿಯಲ್ಲಿ ನೀರಿದ್ದರು ಸಹಾ ಬಳಕೆ ಮಾಡದಂತ ಪರಿಸ್ಥಿತಿಯನ್ನು ಶಾಸಕರು ನಿರ್ಮಾಣ ಮಾಡಿದ್ದಾರೆ, ಇನ್ನೂ ಕೊರೆಯದೇ ಇರುವವರಿಗೆ ಕೊರೆಯದ ರೀತಿಯಲ್ಲಿ ಮಾಡಿದ್ದಾರೆ ಅಧಿಕಾರಿಗಳಿಂದ ವಿನಾಕಾರಣ ತೊಂದರೆ ಮಾಡುತ್ತಿದ್ದಾರೆ, ಈ ಯೋಜನಯಡಿಯಲ್ಲಿ ಅವ್ಯವಹಾರ ಆಗಿದೆ ತನಿಖೆ ಮಾಡಿಸುತ್ತೇನೆ ಎಂದು ಹೇಳುತ್ತಾರೆ ಮಾಡಿಸಲಿ ಆದರೆ ಫಲಾನುಭವಿಗೆ ತೊಂದರೆ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ಸರ್ಕಾರದ ಎಸ್.ಇಪಿ.ಯೋಜನಯಡಿ 1345 ಕೊಳವೆಬಾವಿಗಳನ್ನು ಕೊರೆಯಲು ಅನುಮತಿ ಸಿಕ್ಕಿದ್ದು ಅದರಲ್ಲಿ 1082 ಮಾತ್ರ ಕೊರೆಯಲಾಗಿದ್ದು, 263 ಬಾಕಿ ಇದೆ ಇದೇ ರೀತಿ ಟಿ.ಎಸ್.ಪಿ. ಯಡಿಯಲ್ಲಿ 1260ರಲ್ಲಿ 720 ಮಾತ್ರವೇ ಕೊರೆದಿದ್ದು ಉಳಿದ 440 ಬಾಕಿ ಇದೆ ಸಾಮಾನ್ಯ ವರ್ಗದಲ್ಲಿ 860ಕ್ಕೆ 90 ಮಾತ್ರವೇ ಕೊಳವೆಬಾವಿಯನ್ನು ಕೊರೆಯಲಾಗಿದ್ದು ಇನ್ನೂ ನೂರಾರು ಬಾಕಿ ಇದನ್ನು ಮಾಡಲು ಅಧಿಕಾರಿಗಳಿಗೆ ಶಾಸಕ ಚಂದ್ರಪ್ಪ ಅಡ್ಡಿ ಮಾಡುತ್ತಾ ವಿನಾಕಾರಣ ಇಲ್ಲ ಸಲ್ಲದ ನೆಪವನ್ನು ಹೇಳುವುದರ ಮೂಲಕ ಫಲಾನುಭವಿಗಳಿಗೆ ತೊಂದರೆ ಮಾಡುತ್ತಿದ್ದಾರೆ.
ಈ ಹಿಂದೆ ಚಂದ್ರಪ್ಪ ಶಾಸಕರಾಗಿದ್ದ ಸಮಯದಲ್ಲಿ ಅರ್ಧಕ್ಕೆ ನಿಂತಿದ್ದ ಹಲವಾರು ಕಾಮಗಾರಿಗಳನ್ನು ಅಂಜನೇಯರವರು ಸಚಿವರಾಗಿ ಬೇರೆ ಕಡೆಯಿಂದ ಅನುದಾನ ತರುವುದರ ಮೂಲಕ ಕಾಮಗಾರಿಗಳನ್ನು ಪೂರ್ಣ ಮಾಡಿದ್ದಾರೆ ಎಂದು ಶಿವಮೂರ್ತಿ ತಿಳಿಸಿದರು. ಗೋಷ್ಟಿಯಲ್ಲಿ ಹನುಮಂತಪ್ಪ, ಮಧು ಪಾಲೇಗೌಡ, ಕಿರಣ್ ಕುಮಾರ್, ರಂಗಸ್ವಾಮಿ,ತಿಪ್ಪೇಸ್ವಾಮಿ ಸುರೇಶ್ ಭಾಗವಹಿಸಿದ್ದರು.