ದಾವಣಗೆರೆ
ಕನ್ನಡ ಸಾಹಿತ್ಯ ಕಂಡ ಶ್ರೇಷ್ಠ ಕವಿ, ದಾರ್ಶನಿಕ, ಸಂತ ಹಾಗೂ ತ್ರಿಪದಿಯ ಬ್ರಹ್ಮನೆಂದರೆ ಸರ್ವಜ್ಞ ಮಾತ್ರ. ಶ್ರೀ ಮಹರ್ಷಿ ಸರ್ವಜ್ಞರು ಕೇವಲ ಒಂದು ಜಾತಿಗೆ ಸೀಮಿತವಾಗದೇ ಸರ್ವಜನಾಂಗದ ಸರ್ವಜ್ಞಾನಿ ಆಗಿದ್ದರು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಶ್ರೀ ಜಿಲ್ಲಾ ಕುಂಬಾರರ ಸಂಘ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ದೊಡ್ಡಪೇಟೆಯ ಶ್ರೀ ವಿರಕ್ತಮಠ ಸಭಾಂಗಣದಲ್ಲಿ ಏರ್ಪಡಿಸಿದ್ದ ತ್ರಿಪದಿಕವಿ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಸರ್ವಜ್ಞನು 16 ಶತಮಾನದಲ್ಲಿ ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನಲ್ಲಿ ಜನಿಸಿದರು. ಇವರ ಮೂಲ ನಾಮ ಪುಷ್ಪದಾಸ. ಇವರು 7,500 ತ್ರಿಪದಿಗಳನ್ನು ರಚಿಸಿದ್ದರೂ ಅದರಲ್ಲಿ ಕೇವಲ 3 ರಿಂದ 4 ಸಾವಿರ ತ್ರಿಪದಿ ವಚನಗಳು ಮಾತ್ರ ಸಿಕ್ಕಿವೆ. ಸರ್ವಜ್ಞ ರಚಿತ ವಚನಗಳು ಜೀವನಕ್ಕೆ ಹತ್ತಿರವಾಗುವಂತಹವು. ಒಗಟು, ಆಧ್ಯಾತ್ಮ, ವೈಚಾರಿಕತೆಯಂತಹ ವಿಚಾರಗಳ ಕುರಿತು ತಮ್ಮ ತ್ರಿಪದಿಗಳಲ್ಲಿ ಸೂಕ್ಷ್ಮ ಮತ್ತು ಮೌಖಿಕವಾಗಿ ತಿಳಿಸಿದ್ದಾರೆ ಎಂದರು.
ಸರ್ವಜ್ಞನ ಕುಲಬಾಂಧವರಾದ ನೀವುಗಳು ನಿಮ್ಮ ಕುಲಕಸುಬನ್ನು ಸೂರ್ಯ, ಚಂದ್ರ ಇರುವ ತನಕ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು. ಸರ್ವಜ್ಞನ ವಚನಗಳ ಅಧ್ಯಯನ ಮಾಡಿದಾಗ ಜಾತಿ ಮೀರಿದ ಸಂಸ್ಕಾರವನ್ನು ಕಾಣಬಹುದಾಗಿದೆ. 16ನೇ ಶತಮಾನದಲ್ಲಿ ಸಮಾಜದಲ್ಲಿದ್ದ್ದ ತಾರತಮ್ಯಗಳ ಕುರಿತು ತಮ್ಮ ತ್ರಿಪದಿಗಳ ರಚನೆ ಮೂಲಕ ಎಚ್ಚರಿಕೆ ನೀಡುತ್ತಿದ್ದರು ಎಂದ ಅವರು ಸರ್ವಜ್ಞನು ತೋರಿಸಿಕೊಟ್ಟ ಮಾರ್ಗದಲ್ಲಿ ನಾವೆಲ್ಲರು ಸಾಗಿಬೇಕಿದೆ ಎಂದರು.
ಆನಗೋಡು ಕ್ಷೇತ್ರದ ಜಿ.ಪಂ ಸದಸ್ಯ ಕೆ.ಎಸ್ ಬಸವಂತಪ್ಪ ಮಾತನಾಡಿ, ಸರ್ವಜ್ಞ ಒಬ್ಬ ಮಹಾನ್ ಕಾಯೋಕ ಯೋಗಿ. ಸರ್ವಜ್ಞ ರಚಿತ ವಚನಗಳನ್ನು ಕೇವಲ ಓದಿದರೆ ಸಾಲದು. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಅನುಯಾಯಿಗಳಾಗಲು ಸಾಧ್ಯ ಎಂದರು.
ಕುಂಬಾರ ಜನಾಂಗ ಕಾಯಕದಲ್ಲಿ ಪ್ರಾಮಾಣಿಕತೆ ಮೆರೆದ ಜನಾಂಗ. ವೈಜ್ಞಾನಿಕವಾಗಿ ಮಣ್ಣಿನಿಂದ ತಯಾರಿಸಿದ ಸಾಮಾಗ್ರಿಗಳ ಬಳಕೆ ಆರೋಗ್ಯಕ್ಕೆ ಪೂರಕವಾಗಿವೆ. ಆದರೆ, ಪ್ರಸ್ತುತ ಕುಂಬಾರರ ಕುಲ ಕಸುಬು ನಶಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಇದನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದರು.
ಜಿಲ್ಲೆಯಲ್ಲಿ ಕುಂಬಾರ ಜನಾಂಗದ ಅಭಿವೃದ್ಧಿ ಕಾರ್ಯಕ್ಕೆ ನನ್ನಿಂದಾಗುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಈ ಸಮುದಾಯವೂ ಇತರೆ ಜನಾಂಗಗಳಂತೆ ಅಭಿವೃದ್ಧಿಗೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಆಶಿಸಿದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಸರ್ವಜ್ಞ ಒಬ್ಬ ಮಹಾಕವಿ ಎಂಬುವುದಕ್ಕೆ ಅವರ ಹೆಸರೇ ಸಾಕ್ಷಿ. ಸರ್ವಜ್ಞ ಎಂದರೆ ಸರ್ವವನ್ನೂ ಬಲ್ಲವನು. ಸರ್ವಜ್ಞರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ನಿಮ್ಮ ಮಕ್ಕಳನ್ನು ಸುಶಿಕ್ಷಿತರಾಗಿ ಮಾಡಿ ಮತ್ತು ನೀವುಗಳು ಸಂಘಟಿತರಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಬಸವರಾಜ್ ಕುಂಚೂರು ಮಾತನಾಡಿ, ಸರ್ವಜ್ಞನ ಜೀವನವೇ ಒಂದು ನಿಗೂಢ. ಅವರ ಜೀವನ ಕುರಿತು ಸ್ಪಷ್ಟ ಮಾಹಿತಿ, ಪುರಾವೆಗಳು ಸಿಗದೇ ಅವರ ನೈಜ ಜೀವನ ಕುರಿತು ಸ್ಟಷ್ಟ ಮಾಹಿತಿಗಳಿಲ್ಲ. ಸರ್ವಜ್ಞನ ಜೀವನ ಬಾಲ್ಯದಿಂದ ಅಂತ್ಯದವರೆಗೆ ಕಷ್ಟಮಯವಾಗಿತ್ತು. ರಾಜ್ಯದ ಎಲ್ಲಾ ಭಾಗಗಳಲ್ಲಿ ಸುತ್ತಾಡಿ ಸಮಾಜದಲ್ಲಿ ಇದ್ದ ತಾರತಮ್ಯಗಳನ್ನು ನೋಡಿ ತ್ರಿಪದಿಗಳನ್ನು ರಚಿಸುವ ಮೂಲಕ ಸಮಾಜದ ಬದಲಾಣೆಗೆ ಪಾತ್ರರಾದರು.
ಸರ್ವಜ್ಞನು ಎಂದೂ ಜಾತಿಯನ್ನು ಪುರಸ್ಕರಿಸಲಿಲ್ಲ. ಸರ್ವಜ್ಞನು ಸಂತರಲ್ಲಿಯೇ ಅತ್ಯಂತ ಶ್ರೇಷ್ಠ ಮತ್ತು ಸರ್ವಶುದ್ಧರಾಗಿದ್ದರು. ಸರ್ವಜ್ಞರು ಗುಡಿ ಮತ್ತು ಗುಡಿಸಲು ಎರಡಕ್ಕೂ ನೆರವಾದ ದೀಪವಿದ್ದಂತೆ. ತ್ರಿಪದಿಗಳು ಕನ್ನಡ ಸಾಹಿತ್ಯಕ್ಕೆ ಸಿಹಿನೀರ ಹಳ್ಳವಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕುಂಬಾರರ ಸಂಘದ ಕಾರ್ಯದರ್ಶಿ ಚಂದ್ರಶೇಖರಪ್ಪ, ಕುಂಬಾರ ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಉಪನ್ಯಾಸಕಿ ಸುಮತಿ ಜಯಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
