ದಾವಣಗೆರೆ:
ಸರ್ವ ಧರ್ಮಿಯರನ್ನು ಪ್ರೀತಿಯಿಂದ ಕಂಡಾಗ ಮಾತ್ರ ಸಾಮರಸ್ಯದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಶಿವಯೋಗಾಶ್ರಮದಲ್ಲಿ ಬುಧವಾರ ಸಂಜೆ ಶ್ರೀಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಧಾರ್ಮಿಕ ಸಾಮರಸ್ಯ, ಪ್ರಗತಿ ಮತ್ತು ನೆಮ್ಮದಿ ಕುರಿತು ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಗಳು ಸಹಬಾಳ್ವೆ ಸಂದೇಶ ಸಾರುತ್ತವೆ. ಪ್ರತಿಯೊಬ್ಬರು ಧಾರ್ಮಿಕ ಸಾಮರಸ್ಯ ಉಳಿಸಿ ಬೆಳಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ಶಾಂತಿ ಮತ್ತು ಮಾನವೀಯತೆ ಎಲ್ಲಾ ಧರ್ಮಗಳ ಮೂಲ ಆಶಯ. ಹಾಗಾಗಿ ಎಲ್ಲಾ ಧರ್ಮಿಯರು ಸಹೋದರರಂತೆ ಜೀವನ ನಡೆಸಿದಾಗ ಮಾತ್ರ ಪ್ರಗತಿ ಮತ್ತು ನೆಮ್ಮದಿ ಕಾಣಲು ಸಾಧ್ಯ. ವಿಶ್ವದಲ್ಲಿಯೇ ಭಾರತವು ಧಾರ್ಮಿಕ ಸಾಮರಸ್ಯಕ್ಕೆ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ್, ಲಿಂಗಾಯತ ಹೀಗೆ ಸರ್ವಜನಾಂಗದವರು ಸಾಮರಸ್ಯದಿಂದ ಬದುತ್ತಿದ್ದಾರೆ. ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿನ ಭಾವೈಕ್ಯತೆಯನ್ನು ಪ್ರಪಂಚದಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಜಾತಿ ಧರ್ಮ ಬೇರೆ ಬೇರೆಯಾದರೂ ಎಲ್ಲರೂ ಸೇರಿ ಹಬ್ಬಗಳನ್ನು ಆಚರಿಸುತ್ತಾರೆ ಎಂದರು.
ದೇಶದಲ್ಲಿರುವ ಕೆಲವು ಮೂಲಭೂತವಾದಿಗಳು, ಸಂಪ್ರದಾಯವಾದಿಗಳು, ಭಯೋತ್ಪಾದಕರು ಸಾಮರಸ್ಯ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಸಾಮರಸ್ಯ ಕೆಡಿಸುವ ಕಾರ್ಯಕ್ಕಿಂತ ಉಳಿಸಿ ಬೆಳೆಸುವ ಕಾರ್ಯ ದೊಡ್ಡದು ಎಂದರು.ಶಾಂತಿ ಸಾಮರಸ್ಯದ ಬದುಕಿಗೆ ಬಸವಾದಿ ಶರಣರ ಕೊಡುಗೆ ಅಪಾರ. ಅವರು ನೀಡಿರುವ ವಿಶ್ವ ಕುಟುಂಬ, ವಿಶ್ವ ಭಾತೃತ್ವ, ತತ್ವಗಳನ್ನು ಅನುಷ್ಠಾನ ಮಾಡಿದರೆ ಭಯೋತ್ಪಾದನೆಗೆ ಕಡಿವಾಣ ಹಾಕಲು ಸಾಧ್ಯ. ದ್ವೇಷಭಾವನೆ ಅಳಿಯಬೇಕು. ಪ್ರೀತಿ ಭಾವನೆ ಅರಳಬೇಕು. ಆಗ ಮಾನವ ವಿಶ್ವಮಾನವನಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿ ಜಯಪ್ರಕಾಶ್ ಅಂಬರ್ಕರ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪಾಧಿಕಾರದ ಆಯುಕ್ತ ಆದಪ್ಪ, ಶಿಕ್ಷಕಿ ಎ.ಸಿ.ಶಶಿಕಲಾ ಶಂಕರಮೂರ್ತಿ, ರೇವಣಸಿದ್ದಪ್ಪ, ಕಣಕುಪ್ಪಿ ಮುರುಗೇಶಪ್ಪ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
