ಸಂವಿಧಾನಕ್ಕೆ ಕತ್ತರಿ ಹಾಕುವ ಕೆಲಸ ಮಾಡಿದ್ರೆ ಜನ ಸಹಿಸರು.

ಚಳ್ಳಕೆರೆ

      ಕಳೆದ ಹಲವಾರು ದಶಕಗಳಿಂದ ರಾಷ್ಟ್ರದ ಸುಭದ್ರತೆ ಹಾಗೂ ಉತ್ತಮ ಆಡಳಿತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಮೂಲವಾಗಿದೆ. ಸಂವಿಧಾನದ ಸಹಕಾರದಿಂದ ಈ ದೇಶದ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ನೀಡಲು ಸಾಧ್ಯ.

      ಸಂವಿಧಾನವನ್ನು ರಕ್ಷಿಸುವಂತಹ ಮತ್ತು ಗೌರವಿಸುವಂತಹ ಶಕ್ತಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಮಾತ್ರ ಇದ್ದು, ಸಂವಿಧಾನದ ಮೌಲ್ಯವನ್ನು ಮೂಲೆಗುಂಪು ಮಾಡುವ ಭಾರತೀಯ ಜನತಾ ಪಕ್ಷದ ಉದ್ದೇಶವನ್ನು ಈ ಕ್ಷೇತ್ರದ ಮತದಾರ ಎಂದೂ ಈಡೇರಿಸುವುದಿಲ್ಲವೆಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.

      ಅವರು, ಶುಕ್ರವಾರ ಇಲ್ಲಿನ ನೆಹರೂ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಅನೇಕ ಪಕ್ಷಗಳ ರಾಜಕೀಯ ನಾಯಕರು ರಾಷ್ಟ್ರದ ಆಡಳಿತ ನಡೆಸಿದ್ಧಾರೆ. ಆದರೆ, ಕಳೆದ 2014ರಲ್ಲಿ ಈ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರಮೋದಿ ಮಾತ್ರ ಸಂವಿಧಾನದ ಬದಲಾವಣೆಗೆ ಕೈಹಾಕಿದ್ಧಾರೆ.

      ಸಂವಿಧಾನವನ್ನು ನಮ್ಮ ವಿಶ್ವವೇ ಒಪ್ಪಿಕೊಂಡಾಡುವಾಗ ಇದರ ಬದಲಾವಣೆಯ ಯಾವುದೇ ಅವಶ್ಯಕತೆ ಇಲ್ಲ. ಸಂವಿಧಾನದ ಸಹಕಾರದಿಂದ ಮಾತ್ರ ದೇಶದ ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ ಸೌಲಭ್ಯವನ್ನು ಪಡೆಲು ಸಾಧ್ಯವಾಗುತ್ತದೆ. ಬಡ ಜನತೆಯನ್ನು ಮೇಲೆತ್ತಲು ಸಂವಿಧಾನದಿಂದ ಮಾತ್ರ ಸಾಧ್ಯ. ಆದರೆ, ಕಳೆದ 5 ವರ್ಷಗಳಿಂದ ಜನತೆಗೆ ಸುಳ್ಳು ಭರವಸೆಯನ್ನು ನೀಡಿ ಅಧಿಕಾರ ನಡೆಸಿದ ನರೇಂದ್ರಮೋದಿ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ.

       ನನಗೆ ವಿಶ್ವಾಸವಿದೆ ಈ ದೇಶದ ಮತದಾರ ಮೋದಿಯವರ ಸುಳ್ಳು ಪ್ರಚಾರಕ್ಕೆ ಕಿವಿಗೊಡದೆ ರಾಷ್ಟ್ರದ ಸಂವಿಧಾನವನ್ನು ಗೌರವಿಸುವ ಕಾಂಗ್ರೆಸ್ ಪಕ್ಷವನ್ನೇ ಅಯ್ಕೆ ಮಾಡುತ್ತಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಎಂದಿಗೂ ಸಹ ಸಂವಿಧಾನಕ್ಕೆ ಕತ್ತರಿಹಾಕುವ ಕಾರ್ಯಕ್ಕೆ ಬೆಂಬಲ ನೀಡುವುದಿಲ್ಲ. ಸಂವಿಧಾನವನ್ನು ಬದಲಾವಣೆ ಮಾಡುವ ಪಕ್ಷವನ್ನು ಕ್ಷೇತ್ರದ ಮತದಾರ ಕಡ್ಡಾಯವಾಗಿ ಸೋಲಿಸಬೇಕೆಂದು ವಿನಂತಿಸಿದರು.

      ಈ ಭಾಗದ ರೈತರು ಹಾಗೂ ಸಾರ್ವಜನಿಕರು ಕಳೆದ ಹಲವಾರು ದಶಕಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಆದರೆ, ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಹೆಚ್ಚು ಪ್ರಗತಿಯಲ್ಲಿದ್ದು, ಅಜ್ಜಂಪುರದಿಂದ ವಿವಿ ಸಾಗರಕ್ಕೆ ನೀರು ಹರಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇಲ್ಲ.

        ಬರುವ ಜೂನ್ 2019ರೊಳಗೆ ಈ ಭಾಗದ ಜನ ಭದ್ರಾ ನೀರಿನ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಕ್ಷೇತ್ರದ ಎಲ್ಲಾ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆ ನೀರಿನ ಮೂಲಕ ಭದ್ರಿ ಮಾಡಿಸುವ ಕನಸು ನನಸಾಗಲಿದೆ. ನಾನು ಸಹ ಕೇವಲ ಅಧಿಕಾರಕ್ಕಾಗಿ ಆಸೆ ಪಡದೆ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಈ ಜಿಲ್ಲೆಗೆ ಸುಲಭವಾಗಿ ಹರಿದು ಬರುವಂತೆ ಸಹಕಾರ ನೀಡಿದ್ದೇನೆ.

        ಈ ಕ್ಷೇತ್ರದ ಮತದಾರನು ಎರಡನೇ ಬಾರಿಗೆ ನನಗೆ ಸಂಸದನಾಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಕಳೆದ ಐದು ವರ್ಷಗಳಲ್ಲಿನಾನು ಈ ಕ್ಷೇತ್ರದ ಸಂಸದನಾಗಿ ದುಡಿಯುವ ಬದಲು ಸಮಸ್ತ ಜನರ ಸೇವಕನಾಗಿ ಕಾರ್ಯನಿರ್ವಹಿಸಿದ್ದೇನೆಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link