ತುಮಕೂರು
ಪರಿಸರವನ್ನು ಹಸಿರೀಕರಣಗೊಳಿಸಲು ಸೀಡ್ಬಾಲ್(ಬೀಜದುಂಡೆ) ವಿಧಾನ ಹೆಚ್ಚು ಪ್ರಯೋಜಕಾರಿ ಎಂದು ಕೊರಟಗೆರೆ ತಾಲ್ಲೂಕಿನ ಸಾಮಾಜಿಕ ಅರಣ್ಯ ವಲಯಾಧಿಕಾರಿ ನವನೀತ್ ತಿಳಿಸಿದರು.
ಕೊರಟಗೆರೆ ತಾಲ್ಲೂಕು ಪಂಚಾಯತಿ ಆವರಣದಲ್ಲಿಂದು ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪೂರ್ವಭಾವಿಯಾಗಿ ಸ್ವಸಹಾಯ ಗುಂಪಿನ ಮಹಿಳೆಯರಿಗಾಗಿ ಬೀಜದುಂಡೆ ಉಪಯುಕ್ತತೆ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರಲ್ಲದೆ, ಬೀಜಕ್ಕೆ ಮಣ್ಣು, ಗೊಬ್ಬರ ಹಾಗೂ ಗೋಮೂತ್ರವನ್ನು ಬೆರೆಸಿ ಬೀಜದುಂಡೆಯನ್ನು ತಯಾರಿಸಿ ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಗಳಲ್ಲಿ ದೊರೆಯುವ ಹುಣಸೆ, ಹೊಂಗೆ ಮರಗಳ ಕಾಯಿಯಿಂದ ಬೀಜದ ಉಂಡೆಗಳನ್ನು ತಯಾರಿಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಪ್ರಮುಖವಾಗಿ ಶಾಲೆ, ಕಾಲೇಜು, ವಸತಿ ನಿಲಯಗಳ ಆವರಣ, ರೈತರ ಜಮೀನಿನ ನಾಲಾ ಬದು, ಸರ್ಕಾರಿ ಗೋಮಾಳ, ದೇವಸ್ಥಾನ ಮತ್ತಿತರ ಸಮುದಾಯ ಆಧಾರಿತ ಪ್ರದೇಶಗಳಲ್ಲಿ ಗಿಡಗಳನ್ನು ಬೆಳೆಸಲು ಈ ಬೀಜದುಂಡೆಗಳು ಸಹಕಾರಿಯಾಗಲಿವೆ. ಸಾರ್ವಜನಿಕರು ಗಿಡಗಳನ್ನು ನೆಡೆವುದರ ಜೊತೆಗೆ ಪರಿಸರ ರಕ್ಷಣೆಗಾಗಿ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸಾಮಾಜಿಕ, ಪ್ರಾದೇಶಿಕ ಅರಣ್ಯ ಇಲಾಖೆ, ಪಂಚಾಯತ್ ರಾಜ್, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಅರಣ್ಯ ರಕ್ಷಕ ಸತೀಶ್, ಎನ್ಆರ್ಎಲ್ಎಂ ಕ್ಲಸ್ಟರ್ ಸೂಪರ್ವೈಸರ್ ಮಂಜುನಾಥ, ಎಂಐಎಸ್ ಕೋ-ಆರ್ಡಿನೇಟರ್ ಕಣ್ಣಪ್ಪ, ಸೇರಿದಂತೆ ಸುಮಾರು 150 ಸ್ವಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
