ಬಾಗಲಕೋಟೆ
ಮಾಸಾಶನ ದುರ್ಬಳಕೆ ತಡೆಯಲು ಸರಕಾರ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಯೋ ವೃದ್ಧರು ಸೇರಿದಂತೆ ಫಲಾನುಭವಿಗಳು ದಾಖಲೆ ಸಲ್ಲಿಸಲು ಪಟ್ಟಣದ ಚಾವಡಿಗೆ ಎರಡು ದಿನಗಳಿಂದ ಮುಗಿಬೀಳುತ್ತಿದ್ದಾರೆ.
ಸಂಧ್ಯಾ ಸುರಕ್ಷಾ, ವಿಧವಾ, ವಿಶೇಷ ಚೇತನ, ಮನಸ್ವಿನಿ ಸೇರಿದಂತೆ ಸರಕಾರದಿಂದ ನಾನಾ ಯೋಜನೆಗಳ ಅಡಿ ಮಾಸಾಶನ ಪಡೆಯುವರ ಸಂಖ್ಯೆ ತೇರದಾಳ ಪಟ್ಟಣವೊಂದರಲ್ಲೇ ಸಾವಿರಾರು ಸಂಖ್ಯೆಯಲ್ಲಿದೆ. ಕೆಲವರು ಅಂಚೆ ಕಚೇರಿ ಇನ್ನೂ ಕೆಲವರು ಬ್ಯಾಂಕಿನಲ್ಲಿ ಮಾಸಾಶನ ಪಡೆಯುತ್ತಾರೆ.
ಆದರೆ ಕೆಲವರು ಖೊಟ್ಟಿ ದಾಖಲೆ ಸಲ್ಲಿಸಿ ಸರಕಾರ ನೀಡುವ ಮಾಸಾಶನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ಇನ್ನೂ ಕೆಲ ಫಲಾನುಭವಿಗಳು ಮರಣ ಹೊಂದಿದ್ದರೂ ಕೂಡ ಅವರ ಹೆಸರಿನಲ್ಲಿಮಾಸಾಶನ ಬರುತ್ತಿರುವ ಅಂಶಗಳು ಕೂಡ ಬೆಳಕಿಗೆ ಬಂದಿವೆ. ಅವುಗಳನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಈಗ ಆಧಾರ್ ಲಿಂಕ್ ಮಾಡಲಾಗುತ್ತಿದೆ ಎಂಬುದು ಅಧಿಕಾರಿಗಳ ಮಾತು.
ಸಲ್ಲಿಸಬೇಕಾದ ದಾಖಲೆಗಳು :
ಮಾಸಾಶನ ಪಡೆಯುವ ಫಲಾನುಭವಿಗಳು ತಮ್ಮ ಮಾಸಾಶನ ಮಂಜೂರು ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಪಾಸ್ ಬುಕ್ ಝರಾಕ್ಸ್ ಪ್ರತಿಗಳನ್ನು ಸರಕಾರಿ ಚಾವಡಿಯಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಇದರಿಂದ ಝರಾಕ್ಸ್ ಅಂಗಡಿಗಳು ಹೌಸ್ಫುಲ್ ಆಗಿವೆ. ವೃದ್ಧರು ದಾಖಲೆಗಳನ್ನು ಸಲ್ಲಿಸಲು ಚಾವಡಿ ಮುಂದೆ ಬಂದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಸರಕಾರದಿಂದ ಮಾಸಾಶನ ಪಡೆಯುವ ಫಲಾನುಭವಿಗಳು ಮಾಸಾಶನ ಆದೇಶ ಪ್ರತಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ ಝರಾಕ್ಸ್ ಪ್ರತಿಗಳನ್ನು ಚಾವಡಿಗೆ ಸಲ್ಲಿಸಬೇಕು. ಮಾಸಾಶನ ದುರ್ಬಳಕೆ ಆಗುತ್ತಿದ್ದು, ಆದ್ದರಿಂದ ಫಲಾನುಭವಿಗಳ ಆಧಾರ್ ಲಿಂಕ್ ಮಾಡಲಾಗುತ್ತಿದೆ ಎಂದು ತೇರದಾಳ ಹೋಬಳಿ ಪ್ರಭಾರಿ ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ತಿಳಿಸಿದ್ದಾರೆ.








