ತುಮಕೂರು
ಸರ್ಕಾರವೇ ಮನೆ-ಮನೆಗೆ ಮದ್ಯ ಸರಬರಾಜು ಮಾಡಲು, ಎಲ್ಲಾ ಹಳ್ಳಿಗಳಲ್ಲೂ ಎಂಎಸ್ಐಎಲ್ನ ಮದ್ಯದಂಗಡಿ ತೆರೆಯಲು ಚಿಂತನೆ ನಡೆದಿದೆ. ಈ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಮಾಡಲಾಗುತ್ತದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿ ಸರ್ಕಾರವನ್ನು ಮುಜುಗರಕ್ಕೀಡುಮಾಡಿದ್ದಾರೆ. ಸಚಿವರ ಈ ಅಭಿಪ್ರಾಯಕ್ಕೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿ, ಸಚಿವರು ತಮ್ಮ ಹೇಳಿಕೆ ಹಿಂಪಡೆದಿದ್ದಾರೆ.
ಲಂಬಾಣಿ ತಾಂಡಗಳಲ್ಲಿ ಜನ ಕಳ್ಳಭಟ್ಟಿ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ, ಅವರಿಗೆ ಸರ್ಕಾರದವತಿಯಿಂದ ಹಾಲಿನ ವಾಹನಗಳ ರೀತಿಯ ವಾಹನಗಳಲ್ಲಿ ಗುಣಮಟ್ಟದ ಮದ್ಯ ವಿತರಿಸಲಾಗುತ್ತದೆ ಎಂದು ಸಚಿವರು ಹೇಳಿದ್ದರು. ಆದರೆ, ಎಷ್ಟು ತಾಂಡಗಳಲ್ಲಿ ಜನರಿಗೆ ಶುದ ್ಧಕುಡಿಯುವ ನೀರನ್ನು ಸರ್ಕಾರ ಪೂರೈಸುತ್ತಿದೆ ಎಂಬುದನ್ನು ಮೊದಲು ಹೇಳಲಿ, ಸರ್ಕಾರದ ಆದ್ಯತೆ ಏನು ಎಂಬುದನ್ನು ಖಚಿತಪಡಿಸಲಿ ಎಂದು ಹಲವರು ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ
ಪ್ರಧಾನಿ ಮೋದಿಯವರು ಫಿಟ್ ಇಂಡಿಯಾ ಎಂದು ಜನರ ಆರೋಗ್ಯ ಜಾಗೃತಿ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ರಾಜ್ಯದ ಬಿಜೆಪಿ ಸರ್ಕಾರ ಆರೋಗ್ಯ ಕೆಡಿಸುವ, ಸಂಸಾರ ಹಾಳು ಮಾಡುವ ಮದ್ಯವನ್ನು ಮನೆಮನೆಗೆ ವಿತರಿಸುವುದಾಗಿ ಹೇಳಿ ಫಿಟ್ ಇಂಡಿಯಾ ಬದಲು ಕಿಕ್ ಇಂಡಿಯಾ ಮಾಡಲು ಹೊರಟಿದೆ ಎಂದು ಪ್ರಗತಿಪರ ಚಿಂತಕ ಸಿ. ಯತಿರಾಜು ಟೀಕೆ ಮಾಡಿದ್ದಾರೆ.
ಇವರಿಗೆಲ್ಲಾ ನಾಚಿಕೆಯಾಗಬೇಕು, ಮಾನ-ಮರ್ಯಾದೆ ಇದೆಯೇನ್ರಿ ಇವರಿಗೆ? ಶಾಸಕರು, ಅಧಿಕಾರಿಗಳು ಕಾಸಿಗೆ ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ, ಜನ ಸಾಯುತ್ತಿದ್ದಾರೆ, ಜನರ ಕಷ್ಟ ಇವರಿಗೆ ಬೇಕಿಲ್ಲ. ಮದ್ಯ ನಿಷೇಧ ಮಾಡಿ ಎಂದು ಹೆಣ್ಣು ಮಕ್ಕಳು ಬೆಂಗಳೂರಿಗೆ ಪಾದಯಾತ್ರೆ ಹೋಗಿ ಕೇಳಿಕೊಂಡರು. ಆದರೆ ಸರ್ಕಾರ ಮಾಡುತ್ತಿರುವುದು ಏನು ಎಂದ ಯತಿರಾಜು, ಫುಡ್ ಅಂಡ್ ಸಿವಿಲ್ ಸಪ್ಲೈ ಇಲಾಖೆ ಇದ್ದಂತೆ ಅಬಕಾರಿ ಇಲಾಖೆಯಲ್ಲು ಲಿಕ್ಕರ್ ಸಪ್ಲೈ ಇಲಾಖೆ ಎಂದು ಬದಲಾಯಿಸಲಿ ಎಂದು ಆಕ್ರೋಶವ್ಯಕ್ತಪಡಿಸಿದರು.
ದೇಶದ ಇತರೆ ರಾಜ್ಯಗಳಲ್ಲಿ ಮದ್ಯ ನಿಷೇಧದ ಪ್ರಯತ್ನಗಳು ನಡೆಯುತ್ತಿರುವಾಗ ರಾಜ್ಯ ಸರ್ಕಾರ ಜನರಿಗೆ ಅಮಲೇರಿಸುವ ಪ್ರಯತ್ನ ಮಾಡುತ್ತಿದೆ. ಆರ್ಥಿಕ ಸಂಪನ್ಮೂಕ ಕ್ರೂಢೀಕರಣಕ್ಕೆ ಮದ್ಯ ಸರಬರಾಜು ಹೊರತಾಗಿ ಇನ್ನಾವುದೇ ದಾರಿ ಕಾಣಲಿಲ್ಲವೆ? ಕೆರೆಗಳಿಗೆ ನೀರು ಹರಿಸುವ ಬಗ್ಗೆ ಮಾತನಾಡಲಿಲ್ಲ, ಜನರ ಆರೋಗ್ಯ, ಶಿಕ್ಷಣದ ಬಗ್ಗೆ ಪ್ರಸ್ತಾಪವಿಲ್ಲ, ಬಡವರ ಆರ್ಥಿಕ ಸ್ಥಿತಿ ಸುಧಾರಣೆ ಕುರಿತ ವಿಚಾರವಿಲ್ಲ, ಆರ್ಥಿಕ ಹೊಡೆದದಿಂದ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಕಂಗಾಲಾಗುತ್ತಿರುವ ಸಂಕಷ್ಟ ಪರಿಸ್ಥಿತಿ ನಿವಾರಣೆ ವಿಚಾರ ಪ್ರಸ್ತಾಪ ಮಾಡದ ಸರ್ಕಾರ ಮನೆಮನೆಗೆ ಮದ್ಯ ಮಾರಲು ಎಷ್ಟೊಂದು ಕಾಳಜಿವಹಿಸುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್. ಕೆ. ಸುಬ್ರಹ್ಮಣ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮದ್ಯ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವೆಡೆಗಳಿಂದ ಮಹಿಳೆಯರು ಬೆಂಗಳೂರಿಗೆ ಪಾದಯಾತ್ರೆ ಬಂದು ಗೋಗರೆದರೂ ಆ ಸರ್ಕಾರ ಕೇಳಿರಲಿಲ್ಲ, ಆ ಅಹವಾಲು ಕಡೆಗಣಿಸಿ ಈ ಸರ್ಕಾರ ಮದ್ಯ ವ್ಯವಹಾರವನ್ನು ಇನ್ನಷ್ಟು ಹೇರುವ ಮೂಲಕ ಸಂಸಾರಗಳನ್ನು ಬೀದಿಗೆ ತರುವ ಪ್ರಯತ್ನ ಮಾಡುತ್ತಿದೆ.
ಈಗಾಗಲೇ ಹಳ್ಳಿಗಳಲ್ಲಿ ಅನಧಿಕೃತ ಮದ್ಯದಂಗಡಿಗಳು ಹುಟ್ಟಿಕೊಂಡು ಹಳ್ಳಿಗಳ ಸೌಹಾರ್ದ ವಾತಾವರಣ ಕೆಡಿಸಿವೆ. ಹದಿಹರೆಯದವರನ್ನು ಮದ್ಯವ್ಯಸನಕ್ಕೆ ದೂಡುತ್ತಿವೆ. ಮನೆಗಳಲ್ಲಿ ಶಾಂತಿ, ನೆಮ್ಮದಿ ಹಾಳು ಮಾಡಿವೆ. ಈ ಸ್ಥಿತಿಯಲ್ಲಿ ಊರೂರಲ್ಲೂ ಮದ್ಯದ ಅಂಗಡಿ ತೆರೆದು ಕುಡುಕರ ಸಂಖ್ಯೆ ಹೆಚ್ಚು ಮಾಡಿದರೆ ಸರ್ಕಾರಕ್ಕೆ ಆದಾಯ ಬರಬಹುದೇ ಹೊರತು ಊರುಗಳು ಹಾಳಾಗದೆ ಉಳಿಯುವುದಿಲ್ಲ ಮದ್ಯ ಮಾರಾಟವನ್ನೇ ಮುಖ್ಯ ಮಾಡಲು ಹೊರಟ ಲಜ್ಜೆಗೇಡಿ ಸರ್ಕಾರ ಇದು ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ. ಆರ್. ನಾಗರಾಜ್ ಟೀಕಿಸಿದರು.
ಈಗಾಗಲೇ ಹಳ್ಳಿಗಳಲ್ಲಿ ಮದ್ಯವ್ಯಸನಿಗಳು ಹೆಚ್ಚಾಗಿದ್ದಾರೆ. ಹದಿಹರೆಯದವರು ಕುಡಿತದ ಚಟಕ್ಕೆ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡಿದರೆ ಸಂಸಾರಗಳು ಉಳಿಯುತ್ತವೆಯೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಸರ್ಕಾರದ ಧೋರಣೆ ವಿರುದ್ಧ ಹರಿಹಾಯ್ದರು.
ಸರ್ಕಾರ ಆದಾಯದ ಮೂಲ ಹೆಚ್ಚಿಸಿಕೊಳ್ಲಲು ಬೇರೆ ಮಾರ್ಗ ಹುಡುಕಲಿ, ಅದುಬಿಟ್ಟು ಜನರಿಗೆ ಮದ್ಯ ಕುಡಿಸಿ ಅವರ ಸಂಸಾರವನ್ನು ಬೀದಿಗೆ ತಂದು ಅದರಿಂದ ಲಾಭ ಮಾಡಲು ಹೊರಟಿರುವುದು ನಾಚಿಕೆಗೇಡಿನ ವಿಚಾರ ಎಂದರು.
ಮದ್ಯ ಸೇವನೆ ಈಗ ವಿಶೇಷವೇನಲ್ಲ, ಕುಡಿಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ, ಜನ ಬಯಸುತ್ತಿದ್ದಾರೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ. ಯೂರೋಪ್ ದೇಶಗಳಲ್ಲಿ ಮದ್ಯ ಸೇವನೆ ಆಹಾರ ಕ್ರಮಗಳಲ್ಲಿ ಒಂದಾಗಿರಬಹುದು, ಆದರೆ ಭಾರತದಂತಹ ದೇಶಗಳಲ್ಲಿ ಮದ್ಯ ಆಹಾರದೊಡನೆ ಸೇವಿಸುವ ಪಾನಿಯವಾಗಿಲ್ಲ, ಅದೊಂದು ವ್ಯಸನವಾಗಿದೆ. ಅದರಿಂದ ದುಷ್ಪರಿಣಾಮಗಳೇ ಹೆಚ್ಚಾಗಿವೆ.
ಮದ್ಯವ್ಯಸನಿಗಳಿಂದ ಅಪಘಾತ, ಅನಾಹುತ, ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರದ ಗಮನದಲ್ಲಿಲ್ಲವೆ. ಈ ಪರಿಸ್ಥಿತಿಯಲ್ಲಿ ಮದ್ಯವನ್ನು ಹೀಗೆ ಸಾರ್ವಜನಿಕ ಗೊಳಿಸುವ ಪ್ರಯತ್ನಕ್ಕೆ ಮಹಿಳಾ ಸಂಘಟನೆಗಳೂ ವಿರೋಧ ಮಾಡಿವೆ.ಮದ್ಯದಿಂದ ಸರ್ಕಾರಕ್ಕೆ ಲಾಭ ಆಗುವುದಕ್ಕಿಂತಾ ಕುಡಿತದ ಪರಿಣಾಮದಿಂದ ಆಗುವ ಅನಾಹುತಗಳಿಗೆ ಭರಿಸುವ ಹಣವೇ ಹೆಚ್ಚು ಖರ್ಚಾಗುತ್ತದೆ. ಮದ್ಯ ನಿಷೇಧ ಮಾಡಬೇಕು ಎಂದು ಒತ್ತಾಯಿಸುವ ಕಾಲದಲ್ಲಿ ಮನೆಗೇ ಮದ್ಯ ಸರಬರಾಜು ಮಾಡುತ್ತೇವೆಂದು ಸರ್ಕಾರ ಹೊರಟಿರುವುದು ದುರಾದೃಷ್ಟಕರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ. ಹ. ರಮಾಕುಮಾರಿ ಹೇಳಿದರು.
ಇದರಿಂದ ರಾಜಕಾರಣಿಗಳ ವೈಯಕ್ತಿಕ ಲಾಭಕ್ಕಾಗಿ ಇಂತಹ ಪ್ಯತ್ನಗಳು ನಡೆಯುತ್ತವೆ ಹೊರತು ಇದರಿಂದ ಸಾರ್ವಜನಿಕರಿಗೆ ತೊಂದರೆಯೇ ಹೆಚ್ಚು. ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ಜವಾಬ್ದಾರಿ ಸ್ಥಾನದಲ್ಲಿರುವವರು ಚಿಂತಿಸದಿದ್ದರೆ ಇಂತಹ ಅಭಾಸಗಳು ಸೃಷ್ಟಿಯಾಗುತ್ತವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
