ಹರಿಹರ:
ನಗರದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸುಮಲತಾ ಬೆಣ್ಣೆಕಲ್ ಕಸಬಾ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ದಿಡೀರ್ ಬೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.ಎಕ್ಕೆಗೊಂದಿ, ಭಾನುವಳ್ಳಿ, ಹನಗವಾಡಿ, ಷಂಶೀಪುರ, ಬ್ಯಾಲದಹಳ್ಳಿ, ಬನ್ನಿಕೋಡು ಮುಂತಾದ ಗ್ರಾಮಗಳ ಸರ್ಕಾರಿ ಹಾಗೂ ಖಾಸಗೀ ಶಾಲೆಗಳಿಗೆ ಬೇಟಿ ನೀಡಿದ್ದರು.
ಸರ್ಕಾರ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆಯೆ, ಕಾಲಕಾಲಕ್ಕೆ ಮಕ್ಕಳಿಗೆ ಅಗತ್ಯ ಲಸಿಕೆ, ಪೌಷ್ಟಿಕಾಂಶಗಳ ಮಾತ್ರೆಗಳನ್ನು ನೀಡಲಾಗುತ್ತಿದೆಯಾ, ಆಗಾಗ್ಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆಯೆ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆಯೆ, ಅಂಗವಿಕಲ ವಿದ್ಯಾರ್ಥಿಗಳಿಗೆ ಏನೇನು ಅನುಕೂಲತೆಗಳನ್ನು ಮಾಡಿಕೊಡಲಾಗಿದೆ ಮುಂತಾದವುಗಳನ್ನು ದಾಖಲೆ ಸಮೇತ ಪರಿಶೀಲಿಸಿದರು.
ನಂತರ ಮಕ್ಕಳೊಂದಿಗೆ ವೈಯಕ್ತಿಕವಾಗಿ ಮಾತನಾಡಿ, ದಾಖಲೆಯಲ್ಲಿ ನಮೂದಿಸಿದಂತೆ ಸೌಲಭ್ಯಗಳನ್ನು ನೀಡಲಾಗುವ ಬಗ್ಗೆ ಖಾತರಿಪಡಿಸಿಕೊಂಡರು. ಅಲ್ಲದೆ ಮಕ್ಕಳಿಗೆ ಸಿದ್ದಪಡಿಸಿದ್ದ ಬಿಸಿಯೂಟ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. ಕೆಲ ಶಾಲೆಗಳಲ್ಲಿ ಪಾಕಶಾಲೆಗಳನ್ನು ಸ್ವಚ್ಚವಾಗಿಡಲು ಕ್ರಮ ಕೈಗೊಳ್ಳುವಂತೆ ಮುಖ್ಯೋಪಾದ್ಯಾಯರಿಗೆ ಸೂಚಿಸಿದರು. ಲಸಿಕೆ ಹಾಕುವ ದಿನ ಶಾಲೆಗೆ ಗೈರು ಹಾಜರಾಗುವ ಮಕ್ಕಳಿಗೆ ಮತ್ತೊಂದು ದಿನ ಲಸಿಕೆ ಹಾಕಿಸಲು ಏರ್ಪಾಡು ಮಾಡಿಕೊಳ್ಳಬೇಕು ಎಂದರು. ನ್ಯಾಯಾಲಯದ ಸಿಬ್ಬಂದಿಯಾದ ವಿಜಯಲಕ್ಷ್ಮಿ, ಪೊಲೀಸ್ ಸಿಬ್ಬಂದಿಯಾದ ನಾಗರಾಜ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
