ಹರಪನಹಳ್ಳಿ:
1 ರಿಂದ 5ನೇ ತರಗತಿ ವರೆಗೆ ಮಾತ್ರ ಬೋಧಿಸಲು ನಿರ್ಬಂಧಿಸಿ ನಮಗೆ ಹಿಂಬಡ್ತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಪಟ್ಟಣದಲ್ಲಿ ಬೆಂಗಳೂರಿನ ಡಿಎಸ್ ಇ ಆರ್ ಟಿ ಹಾಗೂ ಬಳ್ಳಾರಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯವರು ಒಂದು ವಾರ ಕಾಲ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಮಂಗಳವಾರ ಬಹಿಷ್ಕರಿಸಿದರು.
ಸ್ಥಳೀಯ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ಶಿಕ್ಷಕರಿಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಅಂದಾಜು 100ಕ್ಕಿಂತ ಹೆಚ್ಚು ವಿಜ್ಞಾನ ಶಿಕ್ಷಕರು ತರಬೇತಿಗೆ ಹಾಜರಾಗಿದ್ದರು.
ಪ್ರಾರ್ಥನೆ, ಸ್ವಾಗತ ಮುಗಿದು ಉದ್ಘಾಟನೆಯೂ ನೆರವೇರಿತು. ಸರ್ಕಾರಿ ನೌಕರರ ಸಂಘದ ನಿರ್ದಶಕ ಸಿ.ಗಂಗಾಧರ ಮಾತನಾಡಿ ಪದವೀಧರರಾದ ನಮ್ಮನ್ನು ಕೇವಲ 1 ರಿಂದ 5 ನೇ ತರಗತಿ ವರೆಗೆ ಮಾತ್ರ ಬೋಧನೆ ಮಾಡಲು ಸೂಚಿಸುವುದು ಇಡೀ ನಮ್ಮ ವೃತ್ತಿ ಬದುಕಿಗೆ ಹಿನ್ನಡೆ, ನಾವು ಕಷ್ಟ ಪಟ್ಟು ವಿವಿದ ಪದವಿ ಪಡೆದಿದ್ದೇವೆ, ನಮ್ಮನ್ನು ಪ್ರಾಥಮಿಕ ಶಾಲಾ ಶಿಕ್ಷಕರೆಂದು ನೇಮಕ ಮಾಡಿಕೊಳ್ಳಲಾಗಿದೆ, ಆದರೆ ಈಗ 5 ನೇ ತರಗತಿ ವರೆಗೂ ಮಾತ್ರ ಬೋಧಿಸಿ ಎಂದು ನಿರ್ಬಂಧ ಹೇರುವುದು ತಪ್ಪು ಎಂದ ಅವರು ಆದ್ದರಿಂದ ನಮಗೆ ತರಬೇತಿ ಏತಕ್ಕೆ, ಬಹಿಷ್ಕರಿಸುತ್ತೇವೆ ಎಂದು ಹೇಳಿದರು.
ಡಯಟ ನ ಹಿರಿಯ ಉಪನ್ಯಾಸಕಿ ಪಾವರ್ತಮ್ಮ ಮಾತನಾಡಿ ಶಿಕ್ಷಕರ ಸಮಸ್ಯೆ ನಮಗೂ ಗೊತ್ತಿದೆ, ನಮಗೆ ಇಕ್ಕಟ್ಟಿನ ಪರಿಸ್ಥಿತಿ, ಜುಲೈ ತಿಂಗಳನ್ನು ತರಬೇತಿ ರಹಿತ ದಿನವನ್ನಾಗಿ ಮಾಡಬಾರದು ಎಂಬ ಸರ್ಕಾರದ ಆದೇಶವಿದೆ, ಆದ್ದರಿಂದ ತರಬೇತಿಗೆ ಸಹಕಾರ ಕೊಡಿ ಎಂದು ಕೋರಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ ಮಾತನಾಡಿ ನಿಮ್ಮ ಕಷ್ಟ ನಮ್ಮ ಕಷ್ಟ, ನಿಮ್ಮ ಜೊತೆ ನಾವಿದ್ದೇವೆ, ಮಾನಸಿಕವಾಗಿ ಕೊರಗುವ ಅವಶ್ಯಕತೆ ಇಲ್ಲ, ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ, ಮನವಿ ಪತ್ರ ಕೊಡಿ ನಾವು ಮೇಲಾಧಿಕಾರಿಗಳಿಗೆ ಕಳಿಸುತ್ತೇವೆ, ತರಬೇತಿ ನಡೆಯುವುದಕ್ಕೆ ಸಹಕಾರ ಕೊಡಿ ಎಂದು ಕೋೀರಿದರು.
ಕ್ಷೇತ್ರ ಸಮನ್ವಯಾಧಿಕಾರಿ ಲಿಂಗೇ± ಮಾತನಾಡಿ ತರಬೇತಿಗೆ ಬರುವ 100ಕ್ಕೂ ಹೆಚ್ಚು ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ , ನೀವು ಹೀಗೆ ತರಬೇತಿ ಬಹಿಷ್ಕರಿಸಿ ಹೋದರೆ ಊಟ ಮಾಡುವವರು ಯಾರು ಎಂದು ಪ್ರಶ್ನಿಸಿದರು.ಸರ್ಕಾರಿ ನೌಕರರ ಒಕ್ಕೂಟದ ಅದ್ಯಕ್ಷ ಆಂಜನೇಯ ಮಾತನಾಡಿ ನಮಗೆ ತರಬೇತಿ ಅಗತ್ಯವಿದೆ, ಆದರೆ ಈ ಸಮಯದಲ್ಲಿ ತರಬೇತಿ ಬೇಡ, 6 ರಿಂದ 8 ರವರೆಗೆ ಬೋಧನೆಗೆ ನೇರ ನೇಮಕಾತಿ ಮಾಡಿಕೊಂಡರೆ ನಮ್ಮ ಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು ತರಬೇತಿ ಮುಂದೆ ಕೊಡುವಿರಿ, ಈಗ ನಾವು ಬಹಿಷ್ಕರಿಸು ತ್ತೇವೆ ಎಂದು ಹೇಳಿದಾಗ ತರಬೇತಿ ಕೊಠಡಿಯಲ್ಲಿದ್ದ ಎಲ್ಲಾ ಶಿಕ್ಷಕರು ಹೊರಗಡೆ ಬಂದು ಘೋಷಣೆ ಕೂಗಿ ಮನೆಗೆ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
