ದಾವಣಗೆರೆ:
ಶಿಕ್ಷಣ ತಜ್ಞರು ರಾಷ್ಟ್ರೀಯ ಶಿಕ್ಷಣ ನೀತಿ-2019ಕ್ಕೆ ಸಂಬಂಧಿಸಿದಂತೆ ನೀಡುವ ಸಲಹೆ, ಮಾರ್ಗದರ್ಶನವು ನೀತಿಯನ್ನು ಆಡಳಿತಾತ್ಮಕವಾಗಿ ಜಾರಿಗೊಳಿಸುವಾಗ ಗೊಂದಲಕ್ಕೆ ಎಡೆ ಮಾಡಿಕೊಡದಂತಿರಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಸಲಹೆ ನೀಡಿದರು.
ನಗರದ ಡಯಟ್ ಕಾಲೇಜ್ನಲ್ಲಿ ಸೋಮವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2019ರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ-2019ನ್ನು ರೂಪಿಸಲು ಶಿಕ್ಷಣ ತಜ್ಞರು ನೀಡುವ ಸಲಹೆ, ರೀತಿ-ನೀತಿಗಳು ಆಡಳಿತಾತ್ಮಕವಾಗಿ ಜಾರಿಗೊಳಿಸುವಲ್ಲಿ ಗೊಂದಲ ಹಾಗೂ ಅವ್ಯವಸ್ಥೆಗೆ ಎಡೆ ಮಾಡಿಕೊಡು ವಂತಿರಬಾರದು. ಬದಲಿಗೆ ಉತ್ತಮ ಸಲಹೆಗಳನ್ನು ಕೊಡುವ ಮೂಲಕ ಭಾರತವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ನೀತಿ ರೂಪಿಸಲು ನಾರ್ಗದರ್ಶನ ನೀಡಬೇಕೆಂದು ಕಿವಿಮಾತು ಹೇಳಿದರು.
ಪರಿವರ್ತನೆ ಜಗದ ನಿಯಮವಾಗಿದೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಕಾಲಕ್ಕೆ ತಕ್ಕಂತೆ ಬದಲಾಗಬೇಕಾದ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯಲಿರುವ ಆವಿಷ್ಕಾರ ಶಿಕ್ಷಣದ ಮೂಲ ಧ್ಯೇಯೋದ್ಧೇಶಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಶಿಕ್ಷಣ ವ್ಯವಸ್ಥೆಯ ಮೇಲೆ ಇಡೀ ದೇಶ ನಿಂತಿದ್ದು, ಶೈಕ್ಷಣಿಕ ಕ್ಷೇತ್ರವನ್ನು ಬಲಿಷ್ಠಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ಶಿಕ್ಷಣ ತಜ್ಞರು, ಶಿಕ್ಷಣ ಪಡೆಯುವ ಮಕ್ಕಳಲ್ಲಿ ಮೌಲ್ಯಗಳನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಬೇಕಾಗಿದೆ. ಯಾವುದೇ ಕ್ಷೇತ್ರಗಳಲ್ಲಿ ಆವಿಷ್ಕಾರಗಳು ನಡೆಯಬೇಕಾದರೆ ಅಲ್ಲಿರುವ ತಜ್ಞರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಆವಿಷ್ಕಾರ ಮಾಡಬೇಕಾದರೆ, ಅತೀ ಎಚ್ಚರ ವಹಿಸಬೇಕಿದೆ. ಈ ವಿಚಾರದಲ್ಲಿ ಸ್ವಲ್ಪ ತಾಳ ತಪ್ಪಿದರೂ ಸಮಾಜದಲ್ಲಿ ದೊಡ್ಡ ಗಂಡಾಂತರವೇ ಎದುರಾಗಲಿದೆ ಎಂದು ಸೂಚ್ಯವಾಗಿ ನುಡಿದರು.
ಡಯಟ್ನ ಉಪನಿರ್ದೇಶಕ ಹೆಚ್.ಕೆ.ಲಿಂಗರಾಜು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ-2019ರ ಮುಖ್ಯಸ್ಥರಾಗಿರುವ ಕಸ್ತೂರಿ ರಂಗನ್ ಅವರು ದೇಶ ಜ್ಞಾನದಲ್ಲಿ ಮಹತ್ತರ ಸಾಧನೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ನೀತಿ ರೂಪಿಸಬೇಕೆಂಬ ಆಶಯ ಹೊಂಒದಿದ್ದಾರೆ. ಇಡೀ ವಿಶ್ವದಲ್ಲಿಯೇ ಅತಿದೊಡ್ಡ ಮಾನವ ಸಂಪನ್ಮೂಲ ಹೊಂದಿರುವ ಭಾರತ ಅದನ್ನು ಬಳಸಿಕೊಂಡು ಪ್ರಗತಿ ಸಾಧಿಸಬಹುದೆಂಬ ಕನಸನ್ನು ಅವರು ಹೊಂದಿದ್ದಾರೆ. ಅದಕ್ಕೆ ಪೂರಕವಾಗುವಂತೆ ಶಿಕ್ಷಣ ತಜ್ಞರು ಸಲಹೆ-ಸೂಚನೆಗಳನ್ನು ನೀಡುವ ಮೂಲಕ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದು ಹೇಳಿದರು.
ಸಿರಿಗೆರೆ ಶ್ರೀತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಬಿ.ರಂಗನಾಥ್, ಬಿಐಇಟಿ ನಿದೇರ್ಶಕ ಪ್ರೊ| ವೈ.ವೃಷಬೇಂದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ, ಶಿಕ್ಷಣ ತಜ್ಞ ಡಾ. ಹೆಚ್.ವೈ.ವಾಮದೇವಪ್ಪ, ಬಿಐಇಟಿ ಪ್ರಾಧ್ಯಾಪಕ ಡಾ.ಬಿ.ಇ.ರಂಗಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ದಾವಣಗೆರೆ ವಿವಿಯ ಸಿಂಡಿಕೇಟ್ನ ಮಾಜಿ ಸದಸ್ಯ ಡಾ. ಮುರಿಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಮಂಜುಳ ಪ್ರಾರ್ಥಿಸಿದರು. ಉಪನ್ಯಾಸಕ ಲೋಪಾಕ್ಷಪ್ಪ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
