ಶಿಲ್ಪ ಪರಂಪರೆಗೆ ಅವಮಾನ ಸಹಿಸಲಾಗದು

ಚಿತ್ರದುರ್ಗ:

    ಅಮರಶಿಲ್ಪಿ ಜಕಣಾಚಾರಿಯನ್ನು ಕಾಲ್ಪನಿಕ ವ್ಯಕ್ತಿ ಎಂದು ಹೇಳುವ ಮೂಲಕ ಭಾರತದ ಶಿಲ್ಪ ಪರಂಪರೆಗೆ ಅವಮಾನ ಮಾಡುತ್ತಿದ್ದರೂ ವಿಶ್ವಕರ್ಮರು ಇನ್ನು ಕೈಕಟ್ಟಿ ಕುಳಿತಿರುವುದು ದೊಡ್ಡ ದುರಂತ ಎಂದು ಅರಕಲಗೂಡು ವಿಶ್ವಬ್ರಾಹ್ಮಣ ಜಗದ್ಗುರು ಅರೇಮಾದನಹಳ್ಳಿ ಮಹಾಸಂಸ್ಥಾನ ಮಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ವಿಶ್ವಕರ್ಮ ಜನಾಂಗವನ್ನು ಎಚ್ಚರಿಸಿದರು.

    ವಿಶ್ವಕರ್ಮ ಸಮಾಜದಿಂದ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರ ಷಷ್ಪಿಪೂರ್ತಿ ಗೌರವ ಸಮರ್ಪಣೆ, ಗುರುವಂದನಾ ಕಾರ್ಯಕ್ರಮ, ಜಕಣಾಚಾರ್ಯರ ಸಂಸ್ಕರಣಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

    ಶಿಲ್ಪಿಗಳು ಒಂದು ಸಮುದಾಯ, ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಗುಡಿ ಗೋಪುರ, ಮಠ ಮಾನ್ಯ, ಅರಮನೆಗಳಲ್ಲಿ ಶಿಲ್ಪಗಳನ್ನು ಕೆತ್ತಿದ್ದಾರೆ. ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್‍ನಲ್ಲಿರುವ ಏಸುವಿನ ಪ್ರತಿಮೆಯನ್ನು ಕೂಡ ನಿರ್ಮಿಸಿರುವುದು ವಿಶ್ವಕರ್ಮ ಸಮಾಜದ ಶಿಲ್ಪಿಗಳು. ಜಗತ್ತಿಗೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿಯನ್ನು ಕಾಲ್ಪನಿಕ ವ್ಯಕ್ತಿ ಎಂದು ಹೇಳಿರುವುದು ಮನಸ್ಸಿಗೆ ನೋವಾಗುತ್ತದೆ.

     ಕನ್ಯಾಕುಮಾರಿ, ರಾಮೇಶ್ವರ, ಮಧುರೆ, ಬೇಲೂರು, ಹಳೆಬೀಡು, ಪಟ್ಟದಕಲ್ಲು, ಐಹೊಳೆ, ಅಜಂತ, ಯಲ್ಲೋರಗಳಲ್ಲಿ ಅರಳಿರುವ ಶಿಲ್ಪಗಳು ನಮ್ಮ ವಿಶ್ವಕರ್ಮ ಸಮಾಜದವರ ಕೈಯಿಂದ ಎನ್ನುವುದು ಹೆಗ್ಗಳಿಕೆ. ಇಷ್ಟೆಲ್ಲಾ ಪ್ರತಿಭೆಯಿದ್ದರೂ ವಿಶ್ವಕರ್ಮ ಸಮಾಜ ತನ್ನ ತಾಲ ಮೇಲೆ ತಾನು ನಿಂತು ಸ್ವಾವಲಂಭಿಯಾಗಿ ಜೀವನ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ದುಷ್ಪರಿಣಾಮಗಳನ್ನು ಎದುರಿಸುವ ಶಕ್ತಿಯನ್ನು ವಿಶ್ವಕರ್ಮರು ಬೆಳೆಸಿಕೊಳ್ಳಬೇಕು. ಪ್ರಧಾನಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ ಬಹುದೊಡ್ಡದು. ಸಾವಿರಾರು ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ವಿಶ್ವಕರ್ಮ ಸಮಾಜದವರು ಬೇರೆ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರೆದು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಚಿಕ್ಕಬಳ್ಳಾಪುರ ನಂದಿ ಜ್ಞಾನಾನಂದ ಆಶ್ರಮದ ವೇದ ವೇದಾಂತಾಚಾರ್ಯ ರಾಷ್ಟ್ರಸಂತ ಸ್ವಾಮಿ ಶಿವಾತ್ಮಾನಂದ ಸರಸ್ವತಿ ಆಶೀರ್ವಚನ ನೀಡಿ ವಿಶ್ವಕರ್ಮ ಸಮಾಜ ಭಾರತದಲ್ಲಿಯೇ ಅಪರೂಪವಾದ ಸಮಾಜ. ತನ್ನದೇ ಆದ ಕಲಾಕುಂಚ ಕಸುಬುಗಳಿಂದ ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಪುರಾತನ ಸಂಸ್ಕøತಿಯುಳ್ಳ ಅರಪ್ಪ ಮಹಂಜೋದಾರ ಕಾಲದಿಂದಲೂ ವಿಶ್ವಕರ್ಮರು ಶಿಲ್ಪಕಲೆಗಳ ಕೆತ್ತನೆಯಿಂದ ದೇಶದ ಗೌರವವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಗುಣಗಾನ ಮಾಡಿದರು.

        ಮಹಾರಾಜರ ಕಾಲದಿಂದಲೂ ಶಿಲ್ಪಗಳನ್ನು ತಯಾರು ಮಾಡುತ್ತಿರುವ ವಿಶ್ವಕರ್ಮರು ತಮಗಾಗಿ ಏನನ್ನು ಕೇಳುತ್ತಿಲ್ಲ. ವಿಶ್ವಕರ್ಮರ ಕೈಯಿಂದ ಅರಳಿರುವ ಎಲ್ಲಾ ಶಿಲ್ಪಗಳು ವಿವಿಧ ದೇವಾಲಯಗಳಲ್ಲಿ ಪೂಜಿಸಲ್ಪಡುತ್ತಿವೆ. ಸಂಶೋಧಕರು, ಸಾಹಿತಿಗಳು ಅಷ್ಟೆ ಏಕೆ ನಾವುಗಳು ಕೂಡ ವಿಶ್ವಕರ್ಮರನ್ನು ಮರೆತಿದ್ದೇವೆ. ಅಮರಶಿಲ್ಪಿ ಜಕಣಾಚಾರಿ ಎಂದರೆ ಕನ್ನಡ ನಾಡಿನ ಜನರಿಗೆ ಮೈರೋಮಾಂಚನವಾಗುತ್ತದೆ.

      ಜಾನಪದ ಕಲೆಯಲ್ಲಿ ಜಕಣಾಚಾರಿ ಇನ್ನು ಜೀವಂತವಾಗಿದ್ದಾರೆ. ಕಪ್ಪೆಚನ್ನಿಗರಾಯ ಇದ್ದಾನೆಂದರೆ ಅಮರಶಿಲ್ಪಿ ಜಕಣಾಚಾರಿ ಕೂಡ ಇದ್ದಾರೆಂಬುದು ಮೂರ್ನಾಲ್ಕು ಶಾಸನಗಳಲ್ಲಿ ದಾಖಲಾಗಿದೆ ಎಂದು ಶ್ರೇಣಿಕೃತ ಸಮಾಜದ ಸಂಶೋಧಕರು ಹೇಳುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಧಾರ್ಮಿಕವಾಗಿ ಜಾಗೃತರಾಗಬೇಕಾಗಿರುವುದರಿಂದ ವಿಶ್ವಕರ್ಮ ಸಮಾಜದವರು ಎದ್ದುನಿಲ್ಲಬೇಕಾಗಿದೆ ಎಂದು ಅರಿವು ಮೂಡಿಸಿದರು.

       ಅಮರಶಿಲ್ಪಿ ಜಕಣಾಚಾರ್ಯರ ಸರ್ವಶ್ರೇಷ್ಟ ಗ್ರಂಥವನ್ನು ಬರೆಸುವ ಕೆಲಸವಾಗಬೇಕು. ಅವರ ನೈಜ ಜೀವನ ಕುರಿತು ಗ್ರಂಥ ಹೊರತರಲು ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಕೊಟ್ಟಿದೆ. ವಿಶ್ವಕರ್ಮರು ಹಣ ಹೆಸರಿಗೆ ಹೋರಾಡಿದವರಲ್ಲ. ತಮ್ಮಲ್ಲಿರುವ ಶಿಲ್ಪಕಲೆಯನ್ನು ಹೊರಹಾಕುವ ಮೂಲಕ ಸಮಾಜದ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿಶ್ವಕರ್ಮರಿಗೆ ಸರ್ಕಾರದ ಯೋಜನೆಗಳು ತಲುಪುವಂತಾಗಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಒಂದಾಗುವಂತೆ ವಿಶ್ವಕರ್ಮ ಸಮಾಜದವರಿಗೆ ಕಿವಿಮಾತು ಹೇಳಿದರು.

      ಜ್ಞಾನ ಭಾಸ್ಕರ ಸ್ವಾಮೀಜಿ, ಶಂಕರಾತ್ಮಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಎ.ಶಂಕರಾಚಾರ್ ಅಧ್ಯಕ್ಷತೆ ವಹಿಸಿದ್ದರು.ವಿ.ಗಂಗಾಧರಾಚಾರ್, ಪಿ.ನಾಗೇಂದ್ರಾಚಾರ್, ಎಸ್.ಕೃಷ್ಣಾಚಾರ್, ಆರ್.ಮಧುಸೂದನ್, ಬವರ್‍ಲಾಲ್ ಜೀ, ಶಿವಣ್ಣಾಚಾರ್, ತಿರುಪತಿ ರಾಜನ್, ಎಂ.ಎಸ್.ಬಾಲಾಜಿ, ಮಣಿವಾಸನ್, ಡಿ.ವೆಂಕಟೇಶಾಚಾರ್, ಸಿ.ನಾರಾಯಣಚಾರ್ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link