ದಾವಣಗೆರೆ:
ನಗರದ ಪ್ರೌಢಶಾಲಾ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯ ವಿಸರ್ಜನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಬೃಹತ್ ಶೋಭಾಯಾತ್ರೆ ನಡೆಯಿತು.
ಇಲ್ಲಿನ ಹೈಸ್ಕೂಲ್ ಮೈದಾನದಿಂದ ಉಜ್ಜಯಿನಿ ಜಗದ್ಗುರು ಡಾ.ಸಿದ್ದಲಿಂಗ ದೇಶೀಕೇಂದ್ರ ಸ್ವಾಮೀಜಿ, ಆರವಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ, ಶ್ರೀಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಂದ ಚಾಲನೆ ಪಡೆದ ಶೋಭಾಯಾತ್ರೆಯು ಎವಿಕೆ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಲಾಯರ್ ರಸ್ತೆಯಲ್ಲಿ ಸಾಗಿ, ಪಿಬಿ ರಸ್ತೆ ಸೇರಿ ಅಲ್ಲಿಂದ ನೇರವಾಗಿ ಜಿಎಂಐಟಿಯ ವರೆಗೂ ತೆರಳಿತು. ನಂತರ ಹರಿಹರದ ಹೊಳೆಗೆ ಹಿಂದೂ ಮಹಾಗಣಪತಿ ಮೂರ್ತಿಯನ್ನು ಕೊಂಡ್ಡೊಯ್ದು ವಿಸರ್ಜಿಸಲಾಯಿತು.
ಮಂಗಳೂರಿನ ಚಂಡೆ ಮದ್ದಳೆ, ಮಹಾರಾಷ್ಟ್ರದ ನಾಸಿಕ್ ಡೋಲು, ಕೀಲು ಕುದುರೆ ಸೇರಿದಂತೆ ಇತರೆ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು. ಅಲ್ಲದೆ, ಡಿಜೆಯಿಂದ ಹೊರ ಹೊಮ್ಮುತ್ತಿದ್ದ ಹಾಡುಗಳಿಗೆ ಯುವಕ, ಯುವತಿಯರು ಎನ್ನದೇ ಭಾವಪರವಷರಾಗಿ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿತ್ತು.
ಇನ್ನೂ ಭಾಗ್ವಾಧ್ವಜ ಹಿಡಿದ ಯುವಕರು, ಬಿಳಿ ವಸ್ತ್ರ ಹಾಗೂ ಕೇಸರಿ ಪೇಟ ಧರಿಸಿದ್ದ ಯುವಕ-ಯುವತಿಯರ ಗುಂಪುಗಳಲ್ಲಿದ್ದ ಸದಸ್ಯರಂತು ಒಬ್ಬರಿಗೆ ಒಬ್ಬರು ಪೈಪೋಟಿಗೆ ಬಿದ್ದವರಂತೆ ಹುಚ್ಚೆದ್ದು ಕುಣಿಯುತ್ತಿದ್ದರೆ, ಮೆರವಣಿಗೆಯ ಮುಂದೆ ಸಾಗುತ್ತಿದ್ದ ಆನೆಯು ಕಾಸು, ಹಣ್ಣು ಕೊಟ್ಟವರ ತಲೆಯ ಮೇಲೆ ಸೋಂಡಿಲಿನಿಂದ ಆಶೀರ್ವಾದ ಮಾಡುತ್ತಿತ್ತು. ಇನ್ನೂ ಚಿಣ್ಣರು ವಿವಿಧ ವೇಷಭೂಷಣ ಧರಿಸಿ, ಮೆರವಣಿಗೆಯಲ್ಲಿ ಆಕರ್ಷಣೆಗೆ ಒಳಗಾಗಿದ್ದರು.
ಮೆರವಣಿಗೆಯ ಮಾರ್ಗದ ಉದ್ದಕ್ಕೂ ಅಕ್ಕಪಕ್ಕದ ಕಟ್ಟಡಗಳ ಮೇಲೆ ಹತ್ತಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಜನಸ್ತೋಮಾ ನೋಡಿ, ಇದು ಬರು, ಬರುತ್ತಾ ಚಿತ್ರದುರ್ಗಾದ ಮಾದರಿಯಲ್ಲೆ ಮೆರವಣಿಗೆ ಆಗಲಿದೆ. ಮೊದಲ ಬಾರಿಯೇ ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದಾರೆಂದರೆ, ಮುಂದಿನ ವರ್ಷಗಳಲ್ಲಿ ಇನ್ನೂ ದುಪ್ಪಟ್ಟು ಜನರು ಸೇರಬಹುದಾ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು.
ಶೋಭಾಯಾತ್ರೆ ನೋಡಲು ದಾವಣಗೆರೆ ಜಿಲ್ಲೆ ಸೇರಿದಂತೆ ಪಕ್ಕದ ಶಿವಮೊಗ್ಗ, ಹಾವೇರಿ, ಚಿತ್ರದುರ್ಗದಿಂದಲೂ ಜನರು ಆಗಮಿಸಿದ್ದರು. ನಗರದ ಎಲ್ಲಾ ರಸ್ತೆಯ ಹಿಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ಮಹಿಳೆಯರು, ಮಕ್ಕಳು ಸೇರಿದಂತೆ ಸರ್ವರೂ ಮೆರವಣಿಗೆಯಲ್ಲಿನ ವಿಘ್ಞವಿನಾಶಕನ ಕಂಡು ಪುನೀತರಾದರು.
ವಿವಿಧ ಸಂಘಟನೆಗಳು ಸ್ವಯಂಪ್ರೇರಿತರಾಗಿ ಅಲ್ಲಲ್ಲಿ ರೈಸ್ಬಾತ್, ನೀರು, ತಂಪುಪಾನೀಯ, ಮಜ್ಜಿಗೆ, ಉಪಹಾರ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸೂಕ್ತ ಬಂದೋಬಸ್ತ್:
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯಾವುದೇ ಅಹಿತರಕ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿತ್ತು. 4 ಡಿಎಸ್ಪಿ, 14 ಸಿಪಿಐ, 38 ಪಿಎಸ್ಐ, 80 ಎಎಸ್ಐ, 510 ಕಾನ್ಸ್ಟೇಬಲ್, 330 ಹೋಂಗಾರ್ಡ್, 5 ಕೆಎಸ್ಆರ್ಸಿ, 7 ಡಿಎಆರ್ ತುಕುಡಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮೆರವಣಿಗೆಯ ಉದ್ದಕ್ಕೂ ಕ್ರಿಯಾಶೀಲವಾಗಿ ಅಡಾಡುತ್ತಾ ಯುವಕರನ್ನು ಮುಂದೆ ಸಾಗುವಂತೆ ತೀಳಿ ಹೇಳುತ್ತಿದ್ದರು.
ಮೆರವಣಿಗೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಮಾಜಿ ಮುಖ್ಯಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ರಾವ್ ಜಾಧವ್, ಮಾಜಿ ಶಾಸಕ ಬಿ.ಪಿ.ಹರೀಶ್, ಜಿ.ಪಂ. ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಹಿಂದುಮಹಾಗಣಪತಿ ಸಮಿತಿಯ ಅಧ್ಯಕ್ಷ ಜೊಳ್ಳಿ ಗುರು, ಬಿ.ಜೆ. ಅಜಯಕುಮಾರ್, ಪಾಲಿಕೆ ಸದಸ್ಯ ಡಿ.ಕುಮಾರ್, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
