ತುಮಕೂರು

ನರಹಂತಕ ಚಿರತೆಯನ್ನು ಸೆರೆ ಹಿಡಿಯಲು ಪ್ರಾಣಿಗಳ ಸಹಿತ ಬೋನುಗಳನ್ನಿಟ್ಟಿದ್ದರೂ ಚಿರತೆ ಅದರೊಳಕ್ಕೆ ಕಾಲಿಡುತ್ತಿಲ್ಲವೆಂಬುದು ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಚಿರತೆ ಕಂಡಲ್ಲಿ ಗುಂಡಿಕ್ಕಲು ಅರಣ್ಯ ಇಲಾಖೆ ನಿಲುವು ತಾಳಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಅನುಮತಿಯನ್ನು ಕೋರಿರುವ ಮಹತ್ವದ ಬೆಳವಣಿಗೆ ನಡೆದಿದೆ.
ಮಂಗಳವಾರ ಬೆಳಗ್ಗೆ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಗಂಗಾಂಜನೇಯ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ತುಮಕೂರು ತಾಲ್ಲೂಕು ವಲಯ ಅರಣ್ಯಾಧಿಕಾರಿ ಎಚ್.ಎಲ್. ನಟರಾಜ್ ಈ ಮಾಹಿತಿ ನೀಡಿದರು.
4 ತಂಡಗಳು, 18 ಬೋನು, 40 ಕ್ಯಾಮರಾ ಅಳವಡಿಕೆ
ತುಮಕೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ಚಿರತೆ ಹಾವಳಿ ಅಧಿಕಗೊಳ್ಳುತ್ತಿದೆ. ಈವರೆಗೆ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಚಿರತೆಯನ್ನು ಸೆರೆ ಹಿಡಿಯಲು ತಜ್ಞರಾದ ಡಾ.ಮುರಳಿ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಹೆಸರಾಂತ ಪರಿಸರ ತಜ್ಞ ಸಂಜಯ್ ಗುಬ್ಬಿ ಮತ್ತವರ ಸಂಘವು ಪೂರ್ಣ ಸಹಕಾರ ನೀಡಿದೆ.
ನವೆಂಬರ್ 28 ರಿಂದ ಈ ತಂಡಗಳು ಚಿರತೆಗಾಗಿ ಹಗಲು-ರಾತ್ರಿ, ರಜೆಯ ಬಿಡುವಿಲ್ಲದಂತೆ ನಿರಂತರವಾಗಿ ಕಾಯುತ್ತಿವೆ. 18 ಸ್ಥಳಗಳಲ್ಲಿ ಬೋನುಗಳನ್ನು ಇರಿಸಲಾಗಿದೆ. ಅವುಗಳಲ್ಲಿ ಆಡು, ಕುರಿ, ಮೊಲ, ನಾಯಿಗಳನ್ನಿಟ್ಟು ಚಿರತೆಗಾಗಿ ಕಾಯಲಾಗುತ್ತಿದೆ. ಚಿರತೆ ಸಂಚರಿಸಬಹುದಾದ 40 ಸ್ಥಳಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿ, ಪರಿಶೀಲಿಸಲಾಗುತ್ತಿದೆ ಎಂದು ಇಲಾಖೆಯ ಪ್ರಯತ್ನಗಳನ್ನು ಸಭೆಗೆ ಸವಿವರವಾಗಿ ತಿಳಿಸಿದರು.
ಬೋನಿಗೆ ಕಾಲಿಡದ ಚಿರತೆ
ಇಷ್ಟಾಗಿಯೂ ಚಿರತೆ ಬೋನಿಗೆ ಸಿಕ್ಕಿ ಬೀಳುತ್ತಿಲ್ಲ. ಬೋನಿನವರೆಗೆ ಬರುತ್ತಿದೆ. ಬೋನಿನ ಹೊರಗೆ ಸುತ್ತಾಡುತ್ತಿದೆ. ಬೋನಿಗೆ ಪ್ರದಕ್ಷಿಣೆ ಹಾಕುತ್ತಿದೆ. ಆದರೆ ಬೋನಿನೊಳಕ್ಕೆ ಕಾಲಿಡುತ್ತಿಲ್ಲ. ಬೋನಿನಲ್ಲಿ ಆಡು, ಕುರಿ, ಮೊಲ, ನಾಯಿಗಳನ್ನು ಕಟ್ಟಿ ಆಕರ್ಷಿಸಿದ್ದರೂ, ಚಿರತೆ ಮಾತ್ರ ಅದನ್ನು ಭಕ್ಷಿಸಲು ಮುಂದಾಗುತ್ತಿಲ್ಲ. ಬಂದಷ್ಟೇ ಸಲೀಸಾಗಿ ವಾಪಸ್ ಹೋಗಿಬಿಡುತ್ತಿದೆ ಎಂದು ಈಗ ತಲೆದೋರಿರುವ ಅಸಹಾಯಕ ಪರಿಸ್ಥಿತಿಯನ್ನು ಹೇಳಿಕೊಂಡರು.
ಪ್ರಾಣಿಗಳೂ ಸಹ ಒಮ್ಮೊಮ್ಮೆ ಜಾಣ್ಮೆ ಪ್ರದರ್ಶಿಸುತ್ತವೆ. ಅದೇ ರೀತಿ ಇಲ್ಲಿ ಚಿರತೆಗೂ ಸಹ ಬೋನಿನೊಳಕ್ಕೆ ಕಾಲಿಟ್ಟರೆ ತಾನು ಸೆರೆ ಸಿಕ್ಕಿಬಿಡಬಹುದೆಂಬ ಭೀತಿ ಅಥವಾ ಅರಿವು ಉಂಟಾಗಿರಬಹುದು. ಚಿರತೆಯು ಬೋನಿಗೆ ಸಿಗದೆ ತಪ್ಪಿಸಿಕೊಳ್ಳಲು ಇದೊಂದು ಕಾರಣವಾದರೆ, ಇದಕ್ಕಿಂತ ಮಿಗಿಲಾಗಿ ಗ್ರಾಮ-ಗ್ರಾಮಗಳಲ್ಲಿ ನಾಯಿ, ಕುರಿ, ಮೇಕೆ, ಜಾನುವಾರುಗಳು ಅತಿಸುಲಭವಾಗಿ ಚಿರತೆಗಳಿಗೆ ಆಹಾರವಾಗಿ ಸಿಗುತ್ತಿರುವುದರಿಂದ ಚಿರತೆಗೆ ಬೋನಿನಲ್ಲಿರುವ ಆಹಾರವು ಬೇಕಿಲ್ಲದೆಯೂ ಇರಬಹುದು.
ಇದರ ಜೊತೆಗೆ ಎಲ್ಲ ಗ್ರಾಮಗಳಲ್ಲೂ ಅನೇಕ ಮನೆಗಳ ಸುತ್ತಮುತ್ತ ಹಾಗೂ ಪಾಳು ಬಿದ್ದ ಕೃಷಿ ಭೂಮಿಗಳಲ್ಲಿ ಯಥೇಚ್ಛವಾಗಿ ಪೊದೆಗಳು ಬೆಳೆದಿರುವುದರಿಂದ ಚಿರತೆಯು ಯಾರ ಕಣ್ಣಿಗೂ ಬೀಳದಂತೆ ಸಲೀಸಾಗಿ ಪೊದೆಗಳಲ್ಲಿ ಅವಿತುಕೊಳ್ಳಲು ಅನುಕೂಲವಾಗಿದೆ. ಚಿರತೆಯು ಸುಲಭವಾಗಿ ಸೆರೆ ಸಿಗದಿರಲು ಇವೆರಡು ಪ್ರಬಲ ಕಾರಣಗಳು ಕಂಡುಬರುತ್ತಿವೆ ಎಂದು ಎಚ್.ಎಲ್. ನಟರಾಜ್ ವಿವರಣೆ ನೀಡಿದರು.
ಇದೇನೇ ಇದ್ದರೂ ಚಿರತೆ ಹಾವಳಿಯಿಂದ ಜನರು ಭಯಭೀತರಾಗಿರುವುದು ನಿಜ. ದಿನವೂ ಅರಣ್ಯ ಇಲಾಖೆಗೆ ಸಾರ್ವಜನಿಕರಿಂದ ಅಪಾರ ಸಂಖ್ಯೆಯ ದೂರವಾಣಿ ಕರೆಗಳು ಬರುತ್ತಿರುತ್ತವೆ. ಬೋನ್ ಇಡುವ ಬಗ್ಗೆ ಒತ್ತಾಯಿಸುತ್ತಾರೆ. ಜನರು ಕೇಳಿದಂತೆ ಕೆಲವೊಂದು ಸ್ಥಳವನ್ನು ಬದಲಾಯಿಸಿ ಬೋನ್ ಇಟ್ಟಿದ್ದೇವೆ. ಆದರೂ ಚಿರತೆ ಅದರೊಳಕ್ಕೆ ಕಾಲಿಟ್ಟಿಲ್ಲ ಎಂದರು.
ಪೊದೆಗಳ ತೆರವಿಗೆ ಕೋರಿಕೆ
ಚಿರತೆ ದಾಳಿಯಿಂದ ಜಾನುವಾರುಗಳನ್ನು, ಕುರಿ-ಮೇಕೆಗಳನ್ನು ರಕ್ಷಿಸಿಕೊಳ್ಳಲು ತಮ್ಮ ಮನೆಗಳಲ್ಲಿರುವ ದನಗಳ ಕೊಟ್ಟಿಗೆಯನ್ನು ಹೇಗೆ ಭದ್ರಪಡಿಸಿಟ್ಟುಕೊಳ್ಳಬೇಕೆಂಬ ಬಗ್ಗೆ ಅರಣ್ಯ ಇಲಾಖೆಯು ಗ್ರಾಮಸ್ಥರಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿದೆ. ಮನೆಗಳ ಸುತ್ತಮುತ್ತ ಹಾಗೂ ಖಾಲಿ ಜಮೀನಿನಲ್ಲಿರುವ ಪೊದೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಆಹಾರ ಸಿಗದಿದ್ದರೆ ಹಾಗೂ ಅವಿತುಕೊಳ್ಳಲು ಪೊದೆಗಳಿಲ್ಲದಿದ್ದರೆ ಚಿರತೆಗಳು ಸಹಜವಾಗಿಯೇ ಗ್ರಾಮಗಳತ್ತ ಬರುವುದಿಲ್ಲ ಎಂಬುದನ್ನೂ ತಿಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸದಸ್ಯರ ಆಕ್ರೋಶ
ಇವೆಲ್ಲ ವಿವರ ಕೇಳಿಸಿಕೊಂಡ ಬಳಿಕ ಬಿಜೆಪಿ ಸದಸ್ಯ ಆರ್.ಸಿ.ಶಿವಕುಮಾರ್ (ಬಿಸಿಲಹಳ್ಳಿ ಕ್ಷೇತ್ರ) ಅರಣ್ಯ ಇಲಾಖೆ ವಿರುದ್ಧ ಆಕ್ರೋಶಭರಿತರಾದರು. ಕಳೆದ ಮೂರು ತಿಂಗಳಿನಿಂದ ಈ ಸಮಸ್ಯೆ ಕಾಡುತ್ತಿದೆ. ಇಬ್ಬರು ವ್ಯಕ್ತಿಗಳು ಚಿರತೆಗೆ ಬಲಿಯಾಗಿದ್ದಾರೆ. ಜನರು ಭಯಗ್ರಸ್ಥರಾಗಿದ್ದಾರೆ. ಶಾಲಾ ಮಕ್ಕಳು ಶಾಲೆಗೆ ಹೋಗಿಬರಲು ಹೆದರುತ್ತಿದ್ದಾರೆ. ಜಾನುವಾರುಗಳು, ಕುರಿ ಮೇಕೆಗಳು ಚಿರತೆಗೆ ಬಲಿಯಾಗುತ್ತಿವೆ. ಗ್ರಾಮಗಳ ಜನರು ನಮ್ಮನ್ನು ಕಟುವಾಗಿ ನಿಂದಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ, ಅರಣ್ಯ ಇಲಾಖೆಯು ಇನ್ನೂ ಚಿರತೆಯನ್ನು ಹಿಡಿದಿಲ್ಲ ಎಂದು ಏರಿದ ದನಿಯಲ್ಲಿ ಆವೇಶದಿಂದ ಮಾತನಾಡಿದರು.
ಇವರ ಮಾತಿಗೆ ತಾ.ಪಂ. ಅಧ್ಯಕ್ಷ ಗಂಗಾಂಜನೇಯ , ಉಪಾಧ್ಯಕ್ಷ ಕೆ.ಎನ್. ಶಾಂತಕುಮಾರ್ , ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಲ್. ರಮೇಶ್ , ಕಾಂಗ್ರೆಸ್ ಸದಸ್ಯ ಎಸ್. ರಂಗಸ್ವಾಮಯ್ಯ ದನಿಗೂಡಿಸುತ್ತ, ಇಬ್ಬರು ಮನುಷ್ಯರು ಚಿರತೆಗೆ ಬಲಿಯಾಗಿರುವುದರಿಂದ ಈ ಸಮಸ್ಯೆ ಗಂಭೀರಸ್ವರೂಪದ್ದಾಗಿದೆ ಎಂದು ಹೇಳಿದರು.
ಈ ಮಧ್ಯೆ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಮಾತನಾಡಿ, ಚಿರತೆ ಕಾಟದಿಂದ ಜನರು ಗಾಬರಿಗೊಂಡಿದ್ದಾರೆ. ಚಿರತೆ ಹಿಡಿಯಲು ಆಗ್ರಹಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಂಡಲ್ಲಿ ಗುಂಡಿಕ್ಕುವ ನಿಲುವು
ಬಿರುಸಾದ ಚರ್ಚೆಯ ಮಧ್ಯೆ ಪ್ರವೇಶಿಸಿದ ತಾಲ್ಲೂಕು ವಲಯ ಅರಣ್ಯಾಧಿಕಾರಿ ಎಚ್.ಎಲ್. ನಟರಾಜ್, ಚಿರತೆ ಬೋನಿಗೆ ಸಿಗದೆ ತಲೆನೋವಾಗುತ್ತಿರುವ ಹಿನ್ನೆಲೆಯಲ್ಲಿ ಅದು ಕಾಣಿಸಿದಲ್ಲಿ ಗುಂಡಿಕ್ಕಿ ಕೊಲ್ಲುವ ನಿಲುವಿಗೆ ಬರಲಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಸರ್ಕಾರದ ಅನುಮತಿ ಕೋರಿದ್ದಾರೆ. ಅನುಮತಿ ದೊರೆತಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬ ಸಂಗತಿಯನ್ನು ಸಭೆಯ ಗಮನಕ್ಕೆ ತಂದರು.
ಇದಕ್ಕೂ ಸಹ ಸದಸ್ಯರಾದ ಆರ್.ಸಿ.ಶಿವಕುಮಾರ್ (ಬಿಸಿಲಹಳ್ಳಿ ಕ್ಷೇತ್ರ) ಮತ್ತು ಸದಸ್ಯ ಎಸ್. ರಂಗಸ್ವಾಮಯ್ಯ (ಸಿರಿವರ ಕ್ಷೇತ್ರ) ಪ್ರತಿಕ್ರಿಯಿಸುತ್ತ, ನರಹಂತಕ ಚಿರತೆಗಳನ್ನು ಮೊದಲು ಗುಂಡಿಕ್ಕಿ ಕೊಲ್ಲಲೇಬೇಕು ಎಂದು ಆಗ್ರಹಿಸಿದರು. ಸದಸ್ಯರೆಲ್ಲರ ಆಗ್ರಹದ ಮೇರೆಗೆ, ನರಹಂತಕ ಚಿರತೆಯನ್ನು ಕಂಡಲ್ಲಿ ಅದನ್ನು ಗುಂಡಿಕ್ಕಿ ಕೊಲ್ಲಲು ಸರ್ಕಾರ ತಕ್ಷಣವೇ ಅರಣ್ಯ ಇಲಾಖೆಗೆ ಅನುಮತಿಯನ್ನು ನೀಡಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ಜನರೂ ಸಹಕರಿಸಬೇಕು
ಈ ಸಂದರ್ಭದಲ್ಲಿ ಬಿ.ಜೆ.ಪಿ. ಸದಸ್ಯ ಆರ್.ವಿಜಯಕುಮಾರ್ (ಊರುಕೆರೆ ಕ್ಷೇತ್ರ) ಮಾತನಾಡಿ, ಇದೊಂದು ಗಂಭೀರ ಸಮಸ್ಯೆಯಾಗಿರುವುದರಿಂದ ಇಲಾಖೆಯ ಜೊತೆಗೆ ಜನರೂ ಸಹಕರಿಸಬೇಕು. ತಮ್ಮ ಮನೆÉ ಸುತ್ತಮುತ್ತ ಹಾಗೂ ಜಮೀನಿನಲ್ಲಿರುವ ಪೊದೆಗಳನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಪಿ.ಡಿ.ಓ. ಮತ್ತು ಗ್ರಾಮ ಲೆಕ್ಕಿಗರು ಜನಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್, ಆಡಳಿತಾಧಿಕಾರಿ ಆದಿಲಕ್ಷ್ಮಮ್ಮ ವೇದಿಕೆಯಲ್ಲಿದ್ದರು. ತಾಲ್ಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
