ಬೆಂಗಳೂರು
ಕಾಂಗ್ರೆಸ್ನವರು ಜೆಡಿಎಸ್ಗೆ ಬೇಷರತ್ ಬೆಂಬಲ ನೀಡುತ್ತೇವೆ ಎಂದು ಹೇಳಿ ಈಗ ಪ್ರತೀ ದಿನ ಷರತ್ತು ಹಾಕುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಖುರ್ಚಿಗೆ ಟವಲ್ ಹಾಕುತ್ತಿದ್ದು, ನಾವೇನೂ ಕಮ್ಮಿ ಎಂದು ಡಿ.ಕೆ.ಶಿವಕುಮಾರ್, ಪರಮೇಶ್ವರ್, ಎಂ.ಬಿ.ಪಾಟೀಲ್ ಸಹ ಟವಲ್ ಹಾಕುತ್ತಿದ್ದಾರೆ ಎಂದರು.
ಅಲ್ಲದೆ ಸಿದ್ದರಾಮಯ್ಯ ಚೇಲಾಗಳಾದ ಡಾ.ಸುಧಾಕರ್, ಪರಮೇಶ್ವರ್ ನಾಯ್ಕ್, ಬೈರತಿ ಬಸವರಾಜ, ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಎಲ್ಲಾ ಕಡೆ ಹೇಳುತ್ತಾ ಬರುತ್ತಿದ್ದಾರೆ. ಆದರೆ, ಇವರುಗಳ ಬಾಯಲ್ಲಿ ಹೇಳಿಸುತ್ತಿರುವುದು ಸಿದ್ದರಾಮಯ್ಯನವರೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರವನ್ನು ಅತಂತ್ರ ಮಾಡುವ ಯತ್ನವನ್ನು ಕಾಂಗ್ರೆಸ್ನವರೇ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಎರಡು ಗುಂಪುಗಳು ನೇರವಾಗಿ ಹೊಡೆದಾಟ ಮಾಡಿಕೊಳ್ಳುತ್ತಿವೆ. 23ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಕಾಂಗ್ರೆಸ್ನ ಬಡಿದಾಟ ಸ್ಟೋಟಗೊಳ್ಳುತ್ತದೆ ಎಂದರು.
ಸರ್ಕಾರ ಬಂದಾಗಿನಿಂದ ಕೈ ಪಕ್ಷದಲ್ಲಿ ಆಂತರಿಕ ಗೊಂದಲ ಮುಂದುವರೆದಿದೆ. ಬಿಎಸ್ವೈ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದು, ಇದಕ್ಕಾಗಿ ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಾ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಚೇಲಾಗಳಿಂದ ಹೇಳಿಸುತ್ತಿರುವ ಸಿದ್ದರಾಮಯ್ಯ ಹಾಗೂ ಅವರ ಚೇಲಾಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕಾಂಗ್ರೆಸ್ನಲ್ಲಿ ಸ್ವಲ್ಪ ಶಿಸ್ತು ಉಳಿದಿದೆಯೆಂದು ತೋರಿಸಲಿ ಎಂದು ಸವಾಲು ಹಾಕಿದರು.
ಎರಡು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ, ಇಬ್ಬರೂ ಪಕ್ಷೇತರರು ನಮ್ಮೂಂದಿಗಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ. ಆಗ ನಾವು ಸರ್ಕಾರ ರಚನೆ ಮಾಡುತ್ತೇವೆ, ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.