ಬೆಂಗಳೂರು
ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ. ಕೊರೊನಾ ವೈದ್ಯಕೀಯ ಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದಿದ್ದು, ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುನರ್ ಆಗ್ರಹಿಸಿದ್ದಾರೆ.
ವಿಧಾನಭೆಯಲ್ಲಿ ಕೊರೊನಾ ಉಪಕರಣಗಳ ಖರೀದಿಯ ಅವ್ಯವಹಾರ ಕುರಿತು ನಿಯಮ 69ರಡಿ ಮಾತನಾಡಿದ ಸಿದ್ದರಾಮಯ್ಯ, ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪೆ ತಿಂದವನು ಸಿಕ್ಕಾಕೊಂಡ ಎಂಬಂತೆ ಆಗಬಾರದು, ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾದರೆ ನ್ಯಾಯಾಂಗ ತನಿಖೆ ಸೂಕ್ತ ಎಂದು ಹೇಳಿದರು.
ನಮಸ್ತೆ ಟ್ರಂಪ್ ಮತ್ತು ತಬ್ಲೀಗ್ ಜಮಾಅತ್ ಸಮಾವೇಶಕ್ಕೆ ಅನುಮತಿ ನೀಡಿದ್ದು ಸರಿಯಲ್ಲ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ನಂತರ ಲಾಕ್ ಡೌನ್ ಘೋಷಿಸಬೇಕಿತ್ತು. ಆದರೆ ಸರ್ಕಾರ ಯಾರನ್ನೂ ವಿಶ್ವಾಸಕ್ಕೆತೆಗೆದುಕೊಳ್ಳಲಿಲ್ಲ. ಸರ್ವ ಪಕ್ಷ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದ್ದೆವು. ಅತ್ತೂ ಕರೆದು ಕಾಟಾಚಾರದ ಸಭೆ ನಡೆಸಿದರು. ಕೋವಿಡ್ ನಿಯಂತ್ರಣ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದೆವು. ಈ ಬಗ್ಗೆ ಸರ್ಕಾರಕ್ಕೆ 20 ಪತ್ರಗಳನ್ನು ಬರೆದೆ. 20 ಪತ್ರಗಳಿಗೂ ಸರ್ಕಾರದಿಂದ ಉತ್ತರವಿಲ್ಲ, ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಸರ್ಕಾರವೇ ? ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ಕೊಟ್ಟಿದ್ದೆವು. ಸರ್ಕಾರ ಉತ್ತರಿಸದ ಕಾರಣ ಮಾಧ್ಯಮಗಳ ಮುಂದೆ ಹೋಗಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಕೊರೊನಾ ವಿಷಯದಲ್ಲಿ ಸರ್ಕಾರಕ್ಕೆ ಜುಲೈ ಮಧ್ಯಭಾಗದವರೆಗೆ ಸಹಕಾರ ನೀಡಿದ್ದೇವೆ. ಆದರೆ ಸರ್ಕಾರ ನಮ್ಮನ್ನು ಸಂಪೂರ್ಣ ನಿರ್ಲಕ್ಷ್ಯವನ್ನ ತೋರಿತು. ಪ್ರತಿಪಕ್ಷ ನಾಯಕನಿಗೂ ಗೌರವ ಕೊಡಲಿಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೊರೊನಾ ಕಿಟ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ.ನಾವು ಇದರ ಬಗ್ಗೆ ಗಂಭೀರ ಆರೋಪ ಮಾಡಿದ್ದೆವು. ಮೆಡಿಕಲ್ ಕಿಟ್ನಲ್ಲಿ 4 ಸಾವಿರ ಕೋಟಿ ಅವ್ಯವಹಾರವಾಗಿದೆ. ಆದರೆ ಸಚಿವರಾದ ಶ್ರೀರಾಮುಲು, ಅಶ್ವಥ್ ನಾರಾಯಣ್ ಹೇಳಿದ್ದು 323 ಕೋಟಿ ಮಾತ್ರ ಖರೀದಿ ನಡೆದಿದೆ ಎಂದು ಹೇಳಿದರು. 4 ಸಾವಿರ ಕೋಟಿ ಬಗ್ಗೆ ಒಬ್ಬರೂ ಉತ್ತರಕೊಡಲಿಲ್ಲ. ಕೊನೆಗೆ ಆರೋಗ್ಯ ಕಾರ್ಯದರ್ಶಿ ಉತ್ತರ ನೀಡಿದರು. ಇದಕ್ಕೆ ನಾವು ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದೆವು ಎಂದು ಸ್ಮರಿಸಿದರು.
ಬಿಬಿಎಂಪಿಯಿಂದ 200 ಕೋಟಿ ರೂ. ಖರ್ಚಾಗಿದೆ, ಆರೋಗ್ಯ ಇಲಾಖೆಯಿಂದ 600 ಕೋಟಿ ಖರ್ಚಾಗಿದೆ ಎಂದು ಸರ್ಕಾರವೇ ಉತ್ತರ ನೀಡಿದೆ. ಕಾರ್ಮಿಕರಿಗೆ ಫುಡ್ ಕಿಟ್ ಕೊಟ್ಟಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ ಆದರೆ ಯಾರಿಗೆ ಎಷ್ಟು ಕೊಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ನಿರ್ವಹಣೆಯಲ್ಲಿ 2 ಸಾವಿರ ಕೋಟಿ ರೂ.ಅವ್ಯವಹಾರ ನಡೆದಿದೆ. ಎರಡು, ಮೂರು ಪಟ್ಟು ಹೆಚ್ಚು ಬೆಲೆ ಕೊಟ್ಟು ಸಾಮಾಗ್ರಿಗಳನ್ನು ಖರೀದಿ ಮಾಡಲಾಗಿದೆ. 330 ರೂಪಾಯಿಯ ಪಿಪಿಇ ಕಿಟ್ ಗಳಿಗೆ 620, 725, 800, 2100 ರೂಪಾಯಿ ಕೊಟ್ಟು ಖರೀದಿ ಮಾಡಲಾಗಿದೆ. ಕೆಲವು ಉಪಕರಣಗಳಿಗೆ 7 ಪಟ್ಟು ಹೆಚ್ಚು ಹಣ ನೀಡಲಾಗಿದೆ. ಚೀನಾದಿಂದಲೇ 3 ಲಕ್ಷ ಕಿಟ್ ಗಳನ್ನು ಆಮದು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಧ್ಯಮಗಳಲ್ಲಿ ಮಾತನಾಡುತ್ತಾ, ವಿರೋಧ ಪಕ್ಷದವರಿಗೆ 24 ಗಂಟೆಯೊಳಗೆ ಮಾಹಿತಿ ಕೊಡುತ್ತೇನೆ ಎಂದಿದ್ದರು. ಆದರೆ ಯಡಿಯೂರಪ್ಪ ಇಲ್ಲಿವರೆಗೆ ಉತ್ತರ ಕೊಟ್ಟಿಲ್ಲ, ಸಿದ್ದರಾಮಯ್ಯಗೆ ಯಾಕೆ ಕೊಡಬೇಕು ಎಂದು ಅದನ್ನೂ ಇಟ್ಟುಕೊಂಡು ಬಿಟ್ಟರು ಎಂದು ಬಿಎಸ್ ವೈ ಅವರತ್ತ ತಿರುಗಿ ಸಿದ್ದರಾಮಯ್ಯ ಹೇಳಿದರು.
ಲಾಕ್ ಡೌನ್ ಸಂದರ್ಭದಲ್ಲಿ ಸಮರ್ಪಕವಾಗಿ ಪರಿಹಾರ ವಿತರಿಸಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದರೆ 10 ಸಾವಿರ ಕೋಟಿ ಪ್ಯಾಕೇಜ್ ನೀಡುತ್ತಿದ್ದೆ. ಹೇಗೂ ಸಾಲ ಮಾಡಲು ಸರ್ಕಾರ ಮುಂದಾಗಿದೆ , ಸಾಲ ಮಾಡಿ ನೀವೇ ಕಾರ್ಮಿಕರಿಗೆ ನೀಡಬಹುದಿತ್ತು, ಪ್ರತಿಯೊಬ್ಬರಿಗೆ 10 ಸಾವಿರ ರೂ.ಕೊಡಬಹುದಿತ್ತು, ಕಾರ್ಖಾನೆ ಮುಚ್ಚಿದ್ದರಿಂದ ಕಾರ್ಮಿಕರಿಗೆ ಕೆಲಸ ಇರಲಿಲ್ಲ. ಕಾರ್ಮಿಕರಿಗೆ 10 ಸಾವಿರ ರೂ. ತಲಾ ಕೊಟ್ಟಿದ್ದರೆ ಅವರಿಂದ ಜಿಎಸ್ ಟಿ ಮೂಲಕ ಅದು ವಾಪಾಸ್ ಬರುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಕೊರೊನಾ ಓಡಿಸಲು ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಪ್ರಧಾನಿ ಮೋದಿ ಹೇಳಿದರು. ನಾನು ಚಪ್ಪಾಳೆ ತಟ್ಟಿದರೆ ಸೋಂಕು ಹೋಗುತ್ತೇನೋ ಅಂದ್ಕೊಂಡಿದ್ದೆ, ಅದರಲ್ಲಿ ಏನೋ ದೈವಿಕಶಕ್ತಿ ಇದೆ ಅಂದುಕೊಂಡಿದ್ದೆ, ನಾನು ಮಾತ್ರ ಚಪ್ಪಾಳೆ ತಟ್ಟಿಲ್ಲ, ನಮ್ಮವರೂ ಕೆಲವರು ದೀಪ ಹಚ್ಚಿಟ್ಟಿದ್ದರು, ಆದರೆ ಕೊರೊನಾ ಪ್ರಮಾಣ ದೇಶದಲ್ಲಿ ಹೆಚ್ಚಾಯಿತು ಎಂದು ಟೀಕಾಪ್ರಹಾರ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
