ನಾಲ್ಕನೇ ಬಾರಿಯೂ ಗೆಲುವಿನ ನಗೆ ಬೀರಿದ ಸಿದ್ದೇಶ್ವರ್

ದಾವಣಗೆರೆ:

      ಭಾರೀ ಕುತೂಹಲ ಮೂಡಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರು 1,69,702 ಮತಗಳ ಅಂತರದಿಂದ ನಾಲ್ಕನೇ ಬಾರಿಯೂ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಸೋತು ಕಂಗಾಲಾಗಿದ್ದಾರೆ.

       ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 23ರಂದು ನಡೆದಿದ್ದ ಮತದಾನದ, ಮತ ಎಣಿಕೆ ಕಾರ್ಯವು ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗುರುವಾರ ಬೆಳಿಗ್ಗೆ ಆರಂಭವಾಯಿತು. ಇದಕ್ಕೂ ಮುನ್ನ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್. ಶಿವಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ಕೌಂಟಿಂಗ್ ಅಬಸರ್ರವರ್ ಆನಂದ ಶರ್ಮ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂನ ಶೀಲ್ ತೆರೆಯಲಾಯಿತು.

        ಬಳಿಕ ಅಂಚೆ ಮತಪತ್ರಗಳ ಎಣಿಕೆ ಮುಗಿದ ನಂತರದಲ್ಲಿ ಇವಿಎಂಗಳಲ್ಲಿ ಅಡಕವಾಗಿದ್ದ ಮತ ಎಣಿಕೆ ಕಾರ್ಯವು ಸುಸೂತ್ರವಾಗಿ ಸಂಜೆಯ ವರೆಗೆ ನಡೆಯಿತು. ನಂತರದಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ತಲಾ ಐದು ವಿವಿಪ್ಯಾಟ್‍ಗಳಲ್ಲಿನ ಮತ ಚೀಟಿಗಳನ್ನು ಇವಿಎಂನಲ್ಲಿನ ಮತಗಳೊಂದಿಗೆ ತಾಳೆ ಹಾಕುವ ಕಾರ್ಯ ರಾತ್ರಿಯ ವರೆಗೆ ನಡೆಯಿತು.

     ಅಂಚೆ ಮತಗಳ ಎಣಿಕೆಯಿಂದ ಕೊನೆಯ 19ನೇ ಸುತ್ತಿನ ವರೆಗೂ ಲೀಡ್ ಪಡೆಯುತ್ತಾ ಬಂದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರು ಒಟ್ಟು 6,52,996 ಮತಗಳನ್ನು ಪಡೆಯುವ ಮೂಲಕ, 4,83,294 ಮತಗಳನ್ನು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು 1,69,702 ಮತಗಳ ಅಂತರದಿಂದ ಮಣಿಸುವ ಮೂಲಕ ಸತತವಾಗಿ ನಾಲ್ಕನೇಯ ಬಾರಿಯೂ ಗೆಲುವಿನ ನಗೆ ಬಿರಿದ್ದಾರೆ.

      ಮತದಾನ ನಡೆದ ಮಾರನೆಯ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಘೋಷಿಸಿದ್ದರು. ಆದರೆ, ಗುರುವಾರ ನಡೆದ ಮತ ಎಣಿಕೆಯಲ್ಲಿ ಅವರ ನಿರೀಕ್ಷೆಗೂ ಮೀರಿ ಮತಗಳನ್ನು ಪಡೆಯುವ ಮೂಲಕ ವಿಜಯಮಾಲೆ ಧರಿಸಿದ್ದಾರೆ.

       ಕಾಂಗ್ರೆಸ್‍ನ ಟಿಕೆಟ್ ಗೊಂದಲದಿಂದಾಗಿ, ಕೊನೆಯ ಕ್ಷಣಕ್ಕೆ ಕುರುಬ ಸಮಾಜದ ಹೆಚ್.ಬಿ.ಮಂಜಪ್ಪನವರಿಗೆ ವರಿಷ್ಠರು ಟಿಕೆಟ್ ನೀಡಿದರು. ಆದ್ದರಿಂದ ಅಹಿಂದ ಮತಗಳನ್ನು ಕ್ರೋಢಿಕರಿಸಿ, ಕುರುಬ ಸಮಾಜದ ಮಂಜಪ್ಪನವರನ್ನು ಗೆಲ್ಲಿಸಲು ಗೆದ್ದೆ ಗೆಲ್ಲುವೆವು ಎಂಬ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಪಡೆಯು ಸೋತು ಕಂಗಾಲಾಗಿದೆ.

       ಅಂಚೆ ಮತಪತ್ರಗಳ ಎಣಿಕೆಯಲ್ಲಿ 1,643 ಮತ ಪಡೆಯುವ ಮೂಲಕ ಮುನ್ನಡೆ ಆರಂಭಿಸಿದ ಜಿ.ಎಂ.ಸಿದ್ದೇಶ್ವರ್, ಮೊದಲ ಸುತ್ತಿನಲ್ಲಿ 9,101, ಎರಡನೇ ಸುತ್ತಿನಲ್ಲಿ 23,650, ಮೂರನೇ ಸುತ್ತಿನಲ್ಲಿ 30,009, 4ನೇ ಸುತ್ತಿನಲ್ಲಿ 41,956, 5ನೇ ಸುತ್ತಿನಲ್ಲಿ 43,741, 6ನೇ ಸುತ್ತಿನಲ್ಲಿ 47,237, 7ನೇ ಸುತ್ತಿನಲ್ಲಿ 53,789, 8ನೇ ಸುತ್ತಿನಲ್ಲಿ 54,144, 9ನೇ ಸುತ್ತಿನಲ್ಲಿ 58,861, 10ನೇ ಸುತ್ತಿನಲ್ಲಿ 70,487, 11ನೇ ಸುತ್ತಿನಲ್ಲಿ 84,265, 12ನೇ ಸುತ್ತಿನಲ್ಲಿ 96,084, 13ನೇ ಸುತ್ತಿನಲ್ಲಿ 1,07,415, 14ನೇ ಸುತ್ತಿನಲ್ಲಿ 1,21,841, 15ನೇ ಸುತ್ತಿನಲ್ಲಿ 1,35,385, 16ನೇ ಸುತ್ತಿನಲ್ಲಿ 1,44,088, 17ನೇ ಸುತ್ತಿನಲ್ಲಿ 1,58,943, 18ನೇ ಸುತ್ತಿನಲ್ಲಿ 1,66,074 ಹಾಗೂ ಕೊನೆಯ 19ನೇ ಸುತ್ತಿನಲ್ಲಿ 1,68,670 ಮತಗಳ ಅಂತರಗಳಿಂದ ಪ್ರತಿ ಸುತ್ತಿನಲ್ಲೂ ಮುನ್ನಡೆ ಸಾಧಿಸಿ, ಒಟ್ಟು 6,52,996 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಮಂಜಪ್ಪನವರನ್ನು ಮಣಿಸಿದರು.

     ಇನ್ನೂ ಅಂಚೆ ಮತಪತ್ರಗಳ ಎಣಿಕೆಯಲ್ಲಿ 611 ಮತ ಪಡೆಯುವ ಮೂಲಕ ಹಿನ್ನಡೆ ಅನುಭವಿಸಿದ ಕಾಂಗ್ರೆಸ್‍ನ ಮಂಜಪ್ಪ 19ನೇ ಸುತ್ತಿನ ವರೆಗೂ ಹಿನ್ನಡೆ ಅನುಭವಿಸುತ್ತಲೇ 4,83,294 ಮತಗಳನ್ನು ಪಡೆದು ಸೋಲುಂಡು ಕಂಗಾಲಾಗಿದ್ದಾರೆ.

ನೋಟಾ ಮತಗಳು:

       ಇವಿಎಂ ಮೂಲಕ 3,091 ನೋಟಾ ಮತಗಳು ಹಾಗೂ ಅಂಚೆ ಮತದ ಮೂಲಕ 7 ನೋಟಾ ಮತಗಳನ್ನು ಚಲಾಯಿಸಲಾಗಿದೆ.
ಮತ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸಂಸದ ಜಿ.ಎಂ.ಸಿದ್ದೇಶ್ವರ ಪಕ್ಷದ ಕಾರ್ಯಕರ್ತರಿಂದ ಅಂತರದ ಬಗ್ಗೆ ಮಾಹಿತಿ ಪಡೆದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link