ಜಗಳೂರು
ಸಂಸದ ಜಿ.ಎಂ ಸಿದ್ದೇಶ್ವರ ಬರೀ ಸುಳ್ಳು ಮಾತಿನಿಂದ ಜನರನ್ನ ಮೋಡಿ ಮಾಡಿ 15 ವರ್ಷ ಆಡಳಿತ ಮಾಡಿರುವ ಇವರಿಗೆ ಇದೀಗ ಸೋಲಿನ ಭೀತಿಯಲ್ಲಿ ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ ಮಂಜುನಾಥ ಆರೋಪಿಸಿದರು.
ಬಿದರಕೆರೆ, ತೋರಣಗಟ್ಟೆ, ಬಿಸ್ತುವಳ್ಳಿ, ಕಲ್ಲೇದೇವರಪುರ, ದೊಣೆಹಳ್ಳಿ ಮೂಲಕ ತೆರದ ವಾಹನದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೋಮವಾರ ಅಬ್ಬರದ ಪ್ರಚಾರ ನಡೆಸಿ, ಮತಯಾಚನೆ ನೀಡಿದ ನಂತರ ದೋಣೆಹಳ್ಳಿಯಲ್ಲಿ ಚುನಾವಾವಣಾ ಭಾಷಣದಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಕೋಟ್ಯಾಧಿಪತಿಗಳು ಅವರ ತಂದೆ 2 ಬಾರಿ, ಸಿದ್ದೇಶ್ವರ್ 3 ಬಾರಿ ಸೇರಿದಂತೆ 25 ವರ್ಷಗಳ ಕಾಲ ಜಿಲ್ಲೆಯನ್ನು ಆಳಿದ್ದಾರೆ. ಆದರೆ ಸಾಧನೆ ಮಾತ್ರ ಶೂನ್ಯ, ಕಳೆದ ಐದು ವರ್ಷಗಳಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡದೇ ಸುಳ್ಳು ಹೇಳಿ ಜನರನ್ನು ವಂಚಿಸಿದ್ದಾರೆ. ಈಗ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿಕೊಂಡು ಮತ ಕೇಳಲು ಹೋಗುತ್ತಿದ್ದಾರೆ. ಮತದಾರರೇನು ದಡ್ಡರಲ್ಲಾ ಅವರಿಗೆ ಗೊತ್ತು ಯಾರನ್ನು ಗೆಲ್ಲಿಸಿ, ಯಾರನ್ನು ಮನೆಗೆ ಕಳುಹಿಸಬೇಕು ಎನ್ನುವುದು ಫಲಿತಾಂಶದ ದಿನ ತಿಳಿಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು 100ದಿನದಲ್ಲಿ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ತುಂಬುವುದಾಗಿ ಹೇಳಿ ಐದು ವರ್ಷ ಕಳೆದರೂ ಸಹ 15 ರೂಪಾಯಿ ಕೂಡ ಹಾಕಿಲ್ಲ. ಜಿ.ಎಂ ಸಿದ್ದೇಶ್ವರ್ ಚಿತ್ರದುರ್ಗ ಜಿಲ್ಲೆಯವರು, ನಾನು ದಾವಣಗೆರೆ ಜಿಲ್ಲೆಯ ಸ್ಥಳಿಯ ಅಭ್ಯರ್ಥಿ ಆದ್ದರಿಂದ ಈ ಬಾರಿ ಮತದಾರರ ಹೊಸ ಮುಖಕ್ಕೆ ಆದ್ಯತೆ ನೀಡಿದ್ದಾರೆ. ಎಲ್ಲಾ ವರ್ಗದ ಜನರು, ವಿವಿಧ ಪಕ್ಷದವರ ಸಹಕಾರದಿಂದ ಗೆದ್ದು ಬರುತ್ತೇನೆ ಎಂದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ. ಹದಿನೈದು ವರ್ಷಗಳಲ್ಲಿ ಕ್ಷೇತ್ರಕ್ಕೆ ಜಿ.ಎಂ ಸಿದ್ದೇಶ್ವರ್ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು ಸುಳ್ಳುಗಾರರಿಗೆ ಮತದಾರರು ಸೊಪ್ಪು ಹಾಕುವುದಿಲ್ಲ. ಕೃಷಿಕ, ಬಡ ಅಭ್ಯರ್ಥಿ ಮಂಜಪ್ಪ ಅವರು ಗೆಲುವು ನಿಶ್ಚಿತ ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಮಾತನಾಡಿ, ಅಪ್ಪರ್ ಭದ್ರಾ ಯೋಜನೆ ಮಂಜೂರಾತಿ, ಜಗಳೂರು ಮತ್ತು ದೊಣ್ಣೆಹಳ್ಳಿ ದ್ವಿಮುಖ ರಸ್ತೆ, 52 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರಾತಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಿದ್ದರಾಮಯ್ಯನವರ ಕೊಡುಗೆಯಿದೆ. ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಅರಸಿಕೆರೆ ಹೋಬಳಿ ಅಧ್ಯಕ್ಷ ಕಂಬತ್ತಳ್ಳಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡರಾದ ಕಲ್ಲೇಶ್ ರಾಜ್ ಪಾಟೀಲ್, ಬೈರೇಶ್ ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
