ಬರಗೂರು
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದಂತೆ ಕಾಯಕವನ್ನೇ ನಂಬಿರುವ ಇಲ್ಲೋರ್ವ ಪರಿಸರ ಪ್ರೇಮಿ ಬೆಸ್ಕಾಂ ನೌಕರ ತನ್ನ ನೌಕರಿಯ ರಜೆ ಹಾಗೂ ಬಿಡುವಿನ ವೇಳೆಯಲ್ಲಿ ಬಸ್ ನಿಲ್ದಾಣದ ತಂಗುದಾಣಗಳನ್ನು ಶುಚಿ ಮಾಡುವ ಕಾಯಕ ರೂಢಿಸಿ ಕೊಂಡಿದ್ದಾರೆ.
ಕಳೆದ ಹದಿಮೂರು ವರ್ಷಗಳಿಂದ ಹುಲಿಕುಂಟೆ ಹೋಬಳಿಯ ಬರಗೂರು ಬೆಸ್ಕಾಂನಲ್ಲಿ ನೌಕರನಾಗಿದ್ದಾರೆ ಎಲ್.ಮಂಜುನಾಥ್.
ತನ್ನ ನೌಕರಿಯ ಜೊತೆಯಲ್ಲೇ ತನ್ನ ಬಿಡುವಿನ ಹಾಗೂ ರಜಾ ಸಮಯದಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಬಸ್ ನಿಲ್ದಾಣದ ತಂಗುದಾಣ ಸೇರಿದಂತೆ ರಸ್ತೆಯಲ್ಲಿ ಬಿದ್ದಿರುವ ಕಸಕಡ್ಡಿ ಶುಚಿ ಮಾಡುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ.
ರಸ್ತೆಯಲ್ಲಿ ಬಿದ್ದಿರುವ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳನ್ನು ಸಂಗ್ರಹಿಸಿ, ಬಸ್ನಿಲ್ದಾಣದ ತಂಗುದಾಣಲ್ಲಿನ ಕಸವನ್ನು ಸ್ವಚ್ಚಗೊಳಿಸುವರು. ಶಾಲಾ ಕಾಲೇಜುಗಳಲ್ಲಿ ನಡೆಯುವ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಮಾಲಿನ್ಯದ ಬಗ್ಗೆ ಮಾಹಿತಿ ನೀಡುವರು.
ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಸುಂದರ ಸ್ವಚ್ಛ ಪರಿಸರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ಸುಂದರ ಹಾಗೂ ಸ್ವಚ್ಚಪರಿಸರದ ಕಲ್ಪನೆಯನ್ನು ಜೀವನದ ಉಸಿರನ್ನಾಗಿಸಿಕೊಂಡಿದ್ದಾರೆ. ಬಿರುಬಿಸಿಲಿನ ಭಾಗದಲ್ಲಿ ಹಸಿರು ಹೊಮ್ಮಿಸುವ ಮಹತ್ವದ ಕೆಲಸ ಮಾಡಿ, ಸಾರ್ವಜನಿಕರಿಂದ ಪರಿಸರ ಪ್ರೇಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪರಿಸರ ನಮ್ಮ ತಾಯಿ, ದೇವರು ಎಂದು ನಂಬಿರುವ ಎಲ್.ಮಂಜುನಾಥ ನಿಸ್ವಾರ್ಥವಾಗಿ ಪರಿಸರ ಸಂರಕ್ಷಣೆಗೆ ಮುಂದಾಗಿರುವುದು ನೋಡುಗರಲ್ಲಿ ಬೆರಗು ಮೂಡಿಸಿದೆ.
ತಡಕಲೂರು, ದೊಡ್ಡಬಾಣಗೆರೆ, ಬರಗೂರು ಸೇರಿದಂತೆ ಬಡೇನಹಳ್ಳಿ, ಅಗ್ರಹಾರ, ಬಡಮಾರನಹಳ್ಳಿ, ಹೊಸಹಳ್ಳಿಗಳಲ್ಲೂ ಬಸ್ ನಿಲ್ದಾಣದ ತಂಗು ದಾಣದಲ್ಲಿ ಶುಚಿತ್ವ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಇವರಂತೆÀ ಕಾಯಕ ಮಾಡಿದರೆ ಎಲ್ಲೆಡೆ ಸುಂದರ ಶುಚಿತ್ವವನ್ನು ಕಾಪಾಡಲು ಸಾಧ್ಯವಾವಿದೆ. ಸ್ವಚ್ಚತೆ ಇರುವಲ್ಲಿ ದೇವರು ನೆಲೆಸಿದ್ದಾನೆ ಎಂಬುದನ್ನು ಇವರು ಮನಗಂಡಿದ್ದಾರೆ.
