ಒಂದೆ ವಾರಕ್ಕೆ ಬದಲಾಯಿತೆ ಸ್ಮಾರ್ಟ್ ಸಿಟಿ..!

ತುಮಕೂರು
 
    ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್ ಸಿಟಿ ಕಚೇರಿಯು ಸ್ಮಾರ್ಟ್ ಲುಕ್ ಪಡೆದುಕೊಂಡಿರುವುದು ಸಂತಸ ಮೂಡಿಸಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ಖುಷಿ ವ್ಯಕ್ತಪಡಿಸಿದರು.ಸ್ಮಾರ್ಟ್ ಸಿಟಿ ಕಚೇರಿಯಲ್ಲಿಂದು ನೂತನ ಸಭಾಂಗಣವನ್ನು ಉದ್ಘಾಟಿಸಿದ ನಂತರ   ಮಾತನಾಡಿದ ಅವರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಅವರು ಈ ಕಚೇರಿಗೆ ಹೊಸ ಬದಲಾವಣೆ ತಂದು ಸ್ಮಾರ್ಟ್ ಲುಕ್ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಾರಂಭವಾಗಿರುವ ಕಾಮಗಾರಿಗಳು ತ್ವರಿತವಾಗಿ ಅನುಷ್ಠಾನಗೊಂಡು ನಂಬರ್ ಒನ್ ಸ್ಮಾರ್ಟ್ ನಗರವಾಗುವ ಕಾಲ ದೂರ ಉಳಿದಿಲ್ಲವೆಂದು ಆಶಿಸಿದರು.
   ಕಳೆದ ಬಾರಿ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಅಧಿಕಾರಿಗಳ ಮೇಲೆ ಸಿಟ್ಟಾಗಿದ್ದು, ನೆನಪಿಸಿಕೊಂಡ ಅವರು ಈ ದಿನ ಬರುವ ದಾರಿಯಲ್ಲಿ ಬಿ.ಹೆಚ್. ರಸ್ತೆಯನ್ನು ಗಮನಿಸಿದ್ದೇನೆ.  ರಸ್ತೆಯನ್ನು ಅಂದವಾಗಿ, ಸ್ವಚ್ಛವಾಗಿ ಹಸಿರಿನಿಂದ ಕಂಗೊಳಿಸುವಂತೆ ಮಾಡಿರುವ ಅಧಿಕಾರಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
   ಈ ನಿಟ್ಟಿನಲ್ಲಿ ಸ್ವಚ್ಛತೆಗಾಗಿ ಜನ ಸಾಮಾನ್ಯರೂ ಸಹ ಇಲಾಖೆಗಳ ಜೊತೆಗೆ ಸಹಕರಿಸಬೇಕೆಂದರಲ್ಲದೆ ನಗರದ ಗುಂಡ್ಲಮ್ಮಕೆರೆ ಹಾಗೂ ಮರಳೂರು ಕೆರೆಯಲ್ಲಿ  ಒಳಚರಂಡಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅನುದಾನ ಕಲ್ಪಿಸಲು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಲಮಂಡಳಿ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದೇನೆ ಎಂದರಲ್ಲದೆ  ಸ್ಮಾಟ್ ಸಿಟಿ ಯೋಜನೆ, ಜಿಲ್ಲೆಯಲ್ಲಿರುವ ನಾಲೆಗಳ ದುರಸ್ತಿ ಹಾಗೂ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ನೂತನ ಸಚಿವರೊಂದಿಗೆ ಸಂಜೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
     ನಂತರ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವ ಟೂರಿಸಂ ಫ್ಲೈಯರ್(ಪ್ರವಾಸಿ ತಾಣಗಳ ಕೈಪಿಡಿ)ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಈ ಟೂರಿಸಂ ಫ್ಲೈಯರ್‍ನಲ್ಲಿರುವ ಕ್ಯುಆರ್ ಕೋಡ್ ಮೂಲಕ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಐತಿಹಾಸಿಕ ಹಿನ್ನೆಲೆಯನ್ನೊಳಗೊಂಡ ಮಾಹಿತಿ ಹಾಗೂ ವಿಡಿಯೋ ತುಣುಕನ್ನು ವೀಕ್ಷಿಸಬಹುದಾಗಿದೆ.
     ಇದರಿಂದ ಅಂಗೈನಲ್ಲಿರುವ ಮೊಬೈಲ್‍ನಿಂದಲೇ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯನ್ನು ತಿಳಿಯಬಹುದು. ಮೊದಲ ಹಂತದಲ್ಲಿ ದೇವರಾಯನದುರ್ಗ, ಮಧುಗಿರಿ ಕೋಟೆ, ಸಿದ್ಧಗಂಗಾ ಮಠ, ಸಿದ್ದರಬೆಟ್ಟ, ಅಮಾನಿಕೆರೆ, ನಾಮದ ಚಿಲುಮೆಯಂತಹ ಪ್ರವಾಸಿ ತಾಣಗಳನ್ನು ಈ ಫ್ಲೈಯರ್‍ನಲ್ಲಿ ಪರಿಚಯಿಸಲಾಗಿದ್ದು, ಜಿಲ್ಲೆಯ ಜನರಲ್ಲದೆ ದೇಶ-ವಿದೇಶಗಳ ಜನರಿಗೂ ಸಹ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪರಿಚಯ ಮಾಡಿಕೊಡುವ ಮಹದಾಸೆ ಇದಾಗಿದೆ ಎಂದು ತಿಳಿಸಿದರು.
     ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಗಾಗಿ ಬಿಡುಗಡೆಯಾಗಿರುವ 1000 ಕೋಟಿ ರೂ. ಹಣದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಟೆಂಡರ್ ಕರೆದು  ನಗರದಲ್ಲಿ ಬಹಳಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಗತಿಯಲ್ಲಿವೆ.  ಆದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಆಶಯದಿಂದ ದೇಶ-ವಿದೇಶ ಹಾಗೂ ವಿವಿಧ ಮೂಲಗಳಿಂದ ಬಂಡವಾಳ ತರಲು ಹಾಗೂ ಪಿಪಿಪಿ ಮಾದರಿ ತಯಾರಿಸಲು ಉದ್ದೇಶಿಸಲಾಗಿದೆ.
      ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಜನರನ್ನು ಆಕರ್ಷಿಸಲು ಈ ಫ್ಲೈಯರ್ ಅನ್ನು ಬಿಡುಗಡೆ ಮಾಡಲಾಗಿದೆ.  ಇದರಿಂದ ನಗರವನ್ನಲ್ಲದೆ ಜಿಲ್ಲೆಯನ್ನೂ ಸಹ   ಸ್ಮಾರ್ಟ್ ಜಿಲ್ಲೆಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ.   ಸಾಂಪ್ರಾದಾಯಿಕ ಪದ್ಧತಿಯಂತೆ ಪತ್ರ ಅಥವಾ ಇ-ಮೇಲ್ ಮೂಲಕ ವ್ಯವಹರಿಸುವುದಕ್ಕಿಂತ ದೃಶ್ಯ ಹಾಗೂ ಶ್ರಾವ್ಯದ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳನ್ನು ಫ್ಲೈಯರ್‍ನಲ್ಲಿ ಅಪ್‍ಲೋಡ್   ಮಾಡಲಾಗಿದೆ.  ಇದರಿಂದ ದೇಶ-ವಿದೇಶದವರು  ಆಕರ್ಷಿತರಾಗಿ ಹಣಕಾಸಿನ ನೆರವು ನೀಡಲು ಮುಂದೆ ಬರಬಹುದೆಂಬ ನಿರೀಕ್ಷೆಯಿದೆ ಎಂದು ತಿಳಿಸಿದರು.
      ನಗರವನ್ನು ಅಭಿವೃದ್ಧಿಪಡಿಸಲು  ಜ್ಞಾನ  ಮತ್ತು ಅನುಭವಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸಹೋದರಿ ನಗರ  ಒಪ್ಪಂದಕ್ಕಾಗಿ ಮಂಡಳಿ ಸಭೆಯಲ್ಲಿ ಡೆನ್ಮಾಕ್ ಸರ್ಕಾರದ ಪ್ರತಿನಿಧಿಯೊಂದಿಗೆ ವಿಷಯ   ಪ್ರಸ್ತಾಪ ಮಾಡಲಾಗಿದೆ.  ಈ ಒಪ್ಪಂದವು ಒಂದು ವಿಶಾಲವಾದ, ಅಭಿವೃದ್ಧಿ ಆಧಾರಿತ ವಿಭಿನ್ನ ದೇಶಗಳ ಎರಡು ಬೇರೆ ಬೇರೆ ನಗರಗಳ ನಡುವಿನ ದೀರ್ಘಾವಧಿಯ ಪಾಲುದಾರಿಕೆಯಾಗಿರುತ್ತದೆ.
    ಈ ಪಾಲುದಾರಿಕೆಯಲ್ಲಿ ತುಮಕೂರು ನಗರ ಹಾಗೂ ಡೆನ್ಮಾಕ್‍ನ ಒಂದು ನಗರದ ಆಡಳಿತಗಾರರು, ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಕೈಗಾರಿಕೋದ್ಯಮಿಗಳು ನಗರಗಳ ಪರಸ್ಪರ ಅಭಿವೃದ್ಧಿಗಾಗಿ ಸಹಕರಿಸಲಿದ್ದಾರೆ ಎಂದು ತಿಳಿಸಿದರಲ್ಲದೆ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ನಗರದಲ್ಲಿ ಅನುಷ್ಠಾನಕ್ಕೆ ತರಲು ವಿಶ್ವದ ನಂ.1 ವಿಶ್ವವಿದ್ಯಾಲಯವೆನಿಸಿಕೊಂಡಿರುವ   ಕ್ಯಾಲಿಫೋರ್ನಿಯಾದ ಬರ್ಕ್‍ಲಿನ್ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಎಂಒಯು ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
     ಸ್ಮಾರ್ಟ್ ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ ಅಗೆದಿರುವ ರಸ್ತೆಗಳ ಕಾಮಗಾರಿಗಳನ್ನು ಮುಗಿಸಿದ ನಂತರವೇ ಹೊಸ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ಹಾಕಲಾಗುವುದು.  ಅಮಾನಿಕೆರೆಗೆ ನೀರು ಬಂದಿರುವುದರಿಂದ  ಅಗಲೀಕರಣ ಕಾಮಗಾರಿ ನಿರ್ವಹಿಸಲು ಸಮಸ್ಯೆಯಾಗುತ್ತಿರುವುದರಿಂದ ಈಗಾಗಲೇ ನಿರ್ಮಿಸಲಾಗಿರುವ 5 ಮೀ. ಪ್ಲಾಟ್‍ಫಾರ್ಮ್‍ಗೆ ಹೊಂದಿಕೊಂಡಂತೆ ಹಸಿರೀಕರಣ ಕಾಮಗಾರಿಯನ್ನು ಮುಂದುವರೆಸಲು ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.  ಹಸಿರೀಕರಣ ಕಾಮಗಾರಿಯನ್ನು ಮಳೆಗಾಲದಲ್ಲಿಯೇ ಕೈಗೊಳ್ಳಬೇಕಾಗಿರುವುದರಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.   
     ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಮಾತನಾಡಿ ನಗರದಲ್ಲಿ ಪೆಟ್ರೋಲ್ ಬಂಕ್, ನಗರಸಭೆ ಶುಲ್ಕಪಾವತಿ, ಮತ್ತಿತರ  ಹಣಕಾಸು ವ್ಯವಹಾರಗಳೆಲ್ಲವನ್ನೂ ಏಕರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ  ನಾಗರಿಕರಿಗೆ  ಒಂದೇ ರೀತಿಯ ಕಾರ್ಡ್ ಒದಗಿಸುವ ಬಗ್ಗೆ ಆಕ್ಸಿಸ್ ಬ್ಯಾಂಕ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.  ನಗದುರಹಿತ ನಗರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರು ವುದರಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಟೂರಿಸಂ ಫ್ಲೈಯರ್ ಉಪಯೋಗಿಸುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದ  ಸ್ಮಾರ್ಟ್ ಸಿಟಿ ಇಂಜಿನಿಯರ್ ಸ್ಮಿತಾ ಮಾತನಾಡಿ ಮೊಬೈಲ್‍ನಲ್ಲಿ ಗೂಗಲ್ ಪ್ಲೇಸ್ಟೋರ್‍ನಲ್ಲಿ ಕ್ಯೂಆರ್ ಕೋಡ್ ಡೌನ್‍ಲೋನ್ ಮಾಡಿಕೊಂಡು ಫ್ಲೈಯರ್‍ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಲ್ಲಿ ಅಪ್‍ಲೋಡ್ ಮಾಡಲಾದ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಕಾಮಗಾರಿ, ಕಾಮಗಾರಿ ಪ್ರಗತಿ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
    ಸ್ಮಾರ್ಟ್ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿಯ ಪ್ರಮುಖ ಯೋಜನೆಗಳಾದ ಇಂಟಿಗ್ರೇಟೆಡ್ ಬಸ್ ಟರ್ಮಿನಲ್, ಸಿಟಿ ಲೈಬ್ರರಿ ಅಂಡ್ ಬಿಸಿನೆಸ್ ಇನ್‍ಕ್ಯುಬೇಷನ್ ಸೆಂಟರ್, ಅಮಾನಿಕೆರೆ ಅಭಿವೃದ್ಧಿ, ಎಂಪ್ರಸ್ ಕಾಲೇಜಿನ ಮಲ್ಟಿ ಡೈಮೆನ್ಷನಲ್ ಆಡಿಟೋರಿಯಂ, ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‍ಮಂಟ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್‍ಗಳ ಡಿಜಿಟಲೈಸ್ಡ್ ಛಾಯಾಚಿತ್ರಗಳನ್ನು ಪ್ರದರ್ಶಿಸಿರುವುದನ್ನು ಶಾಲಿನಿ ರಜನೀಶ್ ವೀಕ್ಷಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link